ಹೃದಯ ವೀಣೆ ಮೀಟಿದ ಅವನ ಕೋರಿಕೆ

Update: 2016-10-27 06:25 GMT

ಧಾರಾವಾಹಿ-37

‘‘ಒಡೆಯಾ, ನಾನು ನಿಮಗೆ ಖುಷಿಯಾಗುವಂತ ಒಂದು ಸುದ್ದಿ ತಂದಿರುವೆ’’ ಎಂದ.
‘‘ಎಂತದು ಅಂಹ ಖುಷಿಯ ಸುದ್ದಿ’’ ಶೇಖ್ ಕೇಳಿದ.
‘‘ಯಜಮಾನರೇ, ನನಗೆ ಯಕ್ಷಿಣಿ ವಿದ್ಯೆ ಕಲಿತ ಒಬ್ಬಳು ಮಗಳಿದ್ದಾಳೆ. ನೀವು ನಿನ್ನೆ ಕೊಟ್ಟ ಕರುವನ್ನು ನಾನು ಮನೆಗೆ ಹೊಡೆದುಕೊಂಡು ಹೋದೆ. ಅವಳು ಈ ಕರುವನ್ನು ನೋಡಿದವಳೇ ಗುರುತಿಸಿಬಿಟ್ಟಳು. ಅವಳು ಹೇಳಿದಳು, ಅಪ್ಪಾ, ಈ ಕರು ಯಾರೂಂತ ನಿನಗೆ ಗೊತ್ತುಂಟಾ, ಇದು ಕರುವಿನ ರೂಪದಲ್ಲಿರುವ ನಿನ್ನ ಯಜಮಾನನ ಮಗ. ಮತ್ತೆ ಮೊನ್ನೆ ನೀನು ಕೊಯ್ದ ಕಡಸು ಯಾರು ಗೊತ್ತಾ. ಅದು ಯಜಮಾನನ ಎರಡನೆ ಹೆಂಡತಿ. ಇವರಿಬ್ಬರಿಗೂ ಯಜಮಾನನ ಮೊದಲನೆ ಹೆಂಡತಿ ಅಸೂಯೆಯಿಂದ ಮಾಟ ಮಾಡಿದ್ದರಿಂದಾಗಿ ಈ ರೂಪಕ್ಕೆ ಬಂದಿದ್ದಾರೆ ಎಂದಳು. ಈ ವಿಷಯವನ್ನು ಹೇಳಲಿಕ್ಕಾಗಿ ನಾನು ಓಡೊೀಡಿ ಬಂದೆ ಒಡೆಯಾ’’ ಎಂದ ಗೋಪಾಲಕ.
ಆಗಲೇ ಶೇಖ್ ಗೋಪಾಲಕನ ಮನೆಗೆ ಧಾವಿಸಿದ. ಅವಳ ಮಗಳ ಮುಂದೆ ನಿಂತು ‘‘ನಿನ್ನಪ್ಪ ಹೇಳಿದ್ದೆಲ್ಲ ನಿಜವಾ ಮಗಳೇ’’ ಎಂದು ಕೇಳಿದ. ‘‘ಹೌದು ಯಜಮಾನರೇ, ಅದರಲ್ಲಿ ಸಂಶಯ ಬೇಡ’’ ಎಂದಳು ಅವಳು.
ಶೇಖ್ ಅವಳೊಡನೆ ‘‘ಮಗಳೇ, ನೀನು ನನ್ನ ಈ ಮಗನ ಮಾಟ ಕಳೆದು ಮೊದಲಿನಂತೆ ಮಾಡಿದರೆ, ನೀವು ಕೇಳಿದಷ್ಟು ದನ-ಕರು, ಸಂಪತ್ತು ಕೊಡುತ್ತೇನೆ’’ ಎಂದ.
ಅದಕ್ಕೆ ಅವಳು ‘ಯಜಮಾನರೇ, ನನಗೆ ಅಂತಹ ದುರಾಸೆ ಇಲ್ಲ. ನಾನು ನಿಮ್ಮ ಮಗನನ್ನು ಮೊದಲಿನಂತೆ ಮಾಡಬಲ್ಲೆ. ಆದರೆ ನನ್ನ ಎರಡು ಷರತ್ತುಗಳಿವೆ’’ ಎಂದಳು.
‘‘ಒಂದನೆ ಷರತ್ತು - ನನ್ನನ್ನು ನಿಮ್ಮ ಮಗನಿಗೆ ಮದುವೆ ಮಾಡಿಸಬೇಕು.
ಎರಡನೆ ಷರತ್ತು - ಇವರಿಗೆ ಮಾಟ ಮಾಡಿದ ಆ ನಿಮ್ಮ ಮೊದಲನೆ ಹೆಂಡತಿಯನ್ನು ಮಾಟ ಮಾಡಿ ನಾನು ಬಂಧಿಸಬೇಕು. ಈ ಷರತ್ತಿಗೆ ಒಪ್ಪಿದರೆ ನಿಮ್ಮ ಮಗನನ್ನು ಮೊದಲ ರೂಪಕ್ಕೆ ತರುತ್ತೇನೆ’’ ಎಂದಳು. ಶೇಖ್ ಅದಕ್ಕೆ ಒಪ್ಪಿದ.
ಆಗ ಅವಳು ಹರಿವಾಣದಂತಹ ಒಂದು ಬಟ್ಟಲನ್ನು ತಂದಳು. ಅದರಲ್ಲಿ ನೀರು ಸುರುವಿದಳು. ಆನಂತರ ಆ ನೀರನ್ನು ಕರುವಿನ ಮೇಲೆ ಪ್ರೋಕ್ಷಿಸುತ್ತಾ ‘‘ಸರ್ವಶಕ್ತನಾದ ಅಲ್ಲಾಹನು ನಿನ್ನನ್ನು ಕರುವಾಗಿ ಸೃಷ್ಟಿಸಿದ್ದರೆ ನೀನು ಕರುವಾಗಿಯೇ ಇರು. ಬದಲಾಗಬೇಡ. ಆದರೆ ನೀನು ಮಾಟ ಮಾಡಲ್ಪಟ್ಟು ಈ ಕರುವಿನ ರೂಪಕ್ಕೆ ಬಂದಿದ್ದರೆ ಅಲ್ಲಾಹನ ದಯೆಯಿಂದ ಮೊದಲ ರೂಪಕ್ಕೆ ಬಾ’’ ಎಂದು ಮಂತ್ರ ಹೇಳುತ್ತಿದ್ದಂತೆಯೇ ಆ ಕರು ಒಮ್ಮೆ ಜೋರಾಗಿ ಮೈ ಕೊಡವಿ ಕಂಪಿಸುತ್ತಾ ಮಾನವರೂಪ ತಾಳಿತು.
ಶೇಖ್ ಆನಂದಾತಿರೇಕದಿಂದ ಮಗನನ್ನು ಬಾಚಿ ತಬ್ಬಿಕೊಂಡ. ಎಲ್ಲ ಅಲ್ಲಾಹನ ದಯೆ. ಅವನ ಕರುಣೆ ಎಂದ ಶೇಖ್ ಆಕಾಶಕ್ಕೆ ಕೈನೀಟಿದ.
ಆಗ ಅವನ ಮಗ ತಾನು ಮತ್ತು ತನ್ನ ತಾಯಿ ಮಲತಾಯಿಯಿಂದ ಅನುಭವಿಸಿದ ಕಷ್ಟ, ಯಾತನೆಗಳನ್ನೆಲ್ಲ ವಿವರಿಸಿದ.
ಶೇಖ್ ಮಾತು ಕೊಟ್ಟಂತೆ ಮಗನಿಗೆ ಅವಳನ್ನು ಮದುವೆ ಮಾಡಿಸಿದ.
ಅವಳು ಮಾಟ ಮಾಡಿ ಶೇಖ್‌ನ ಹೆಂಡತಿಯನ್ನು ಒಂದು ಆಡಿನ ರೂಪಕ್ಕೆ ಬದಲಾಯಿಸಿದಳು. ಆನಂತರ ಅದೆಷ್ಟೋ ವಷಗರ್ಳು ಅವರು ಸುಖವಾಗಿ ಬಾಳಿದರು.
ಅಜ್ಜಿ ಕತೆ ಹೇಳುತ್ತಿದ್ದಂತೆಯೇ ಆ ಇಡೀ ಕೋಣೆ ತುಂಬಾ ಮೌನ ಆವರಿಸಿ ಬಿಟ್ಟಿತ್ತು. ಎಲ್ಲರೂ ಅಜ್ಜಿಯ ಮುಂದೆ ಗದ್ದಕ್ಕೆ ಕೈಕೊಟ್ಟು ಕತೆ ಆಲಿಸುವುದರಲ್ಲೇ ಮೈ ಮರೆತಿದ್ದರು. ಅಜ್ಜಿ ಕತೆ ಹೇಳಿ ಮುಗಿಸಿದಾಗ ಎಲ್ಲರೂ ನಿದ್ದೆಯಿಂದ ಎಚ್ಚೆತ್ತವರಂತೆ ಮುಖ ಮುಖ ನೋಡಿಕೊಂಡರು. ಎಲ್ಲರೂ ಚಪ್ಪಾಳೆ ತಟ್ಟಿ ಅಜ್ಜಿಯನ್ನು ತಬ್ಬಿಕೊಂಡು ಮುತ್ತಿಕ್ಕಿದರು. ಆನಂತರ ಎಲ್ಲರೂ ಮಾತನಾಡುತ್ತಾ, ನಗುತ್ತಾ, ಸಂಭ್ರಮಿಸುತ್ತಾ ಸುಸಾ್ತಗಿ ಕುಳಿತಲ್ಲಿಯೇ ನಿದ್ದೆಗೆ ಜಾರಿದರು.
ಅಂದು ಹಬ್ಬ. ಬೆಳಗಾಗುತ್ತಲೇ ಮಸೀದಿಯಿಂದ ‘ತಕ್ಬೀರ್’ ಮೊಳಗತೊಡಗಿತ್ತು. ಐಸು ಒಬ್ಬೊಬ್ಬರನ್ನೇ ಎಬ್ಬಿಸಿ ಸ್ನಾನಕ್ಕೆ ಕಳುಹಿಸಿದಳು. ಮೊದಲು ಗಂಡಸರೆಲ್ಲ ಸ್ನಾನ ಮಾಡಿ ಬಂದು, ಹೊಸ ಬಟ್ಟೆ ಧರಿಸಿ, ಸುಗಂಧ ದ್ರವ್ಯ ಪೂಸಿಕೊಂಡು ಮಸೀದಿಗೆ ತೆರಳಿದರು. ಅನಂತರ ಹೆಂಗಸರ ಮಕ್ಕಳ ಸ್ನಾನ.
ಐಸು ಮೂಡೆ ಮಾಡಿದ್ದಳು. ಏಲಕ್ಕಿ, ಬೆಲ್ಲ ಹಾಕಿದ ತೆಂಗಿನಕಾಯಿಯ ಹಾಲಿನ ಜೊತೆ ಅವಳು ಅದನ್ನು ಎಲ್ಲರಿಗೂ ಬಡಿಸಿದಳು. ಆನಂತರ ಪಿರ್ನಿ, ಶಾವಿಗೆ, ಕೀರು. ಎಲ್ಲರೂ ಒಟ್ಟಿಗೆ ಕುಳಿತು, ಒಬ್ಬರ ತಟ್ಟೆಗೆ ಒಬ್ಬರು ಕೈಹಾಕುತ್ತಾ, ಒಬ್ಬರಿಗೊಬ್ಬರು ಪಾಲು ಮಾಡಿಕೊಳ್ಳುತ್ತಾ, ಮಾತನಾಡುತ್ತಾ, ನಗುತ್ತಾ, ಹಾಸ್ಯ ಚಟಾಕಿ ಹಾರಿಸುತ್ತಾ ಸಾಮೂಹಿಕವಾಗಿ ತಿನ್ನುವ ಆ ಖುಷಿ, ಸಂಭ್ರಮ ತಾಹಿರಾಳಿಗೆ ಅದು ಹೊಸತು. ಅವಳು ತಿನ್ನುವುದಕ್ಕಿಂತ, ಮಾತನಾಡುವುದಕ್ಕಿಂತ ಆ ಸಂಭ್ರಮವನ್ನು ಅನುಭವಿಸುತ್ತಾ ಎಲ್ಲವನ್ನೂ ನೋಡು್ತಾ ಸುಮ್ಮನೆ ಕುಳಿತು ಬಿಟ್ಟಿದ್ದಳು.
ತಿಂಡಿಯಾಗಿ ಎಲ್ಲರೂ ಹೊಸ ಬಟ್ಟೆ ಧರಿಸಿದರು. ಪರಸ್ಪರ ತಲೆ ಬಾಚಿಸಿ, ಕಟ್ಟಿಸಿಕೊಂಡರು. ಆಭರಣ ಧರಿಸಿಕೊಂಡರು. ಅಲಂಕಾರ ಮಾಡಿಕೊಂಡರು. ಸುಗಂಧ ಪೂಸಿಕೊಂಡರು. ಚಿಕ್ಕ ಮಕ್ಕಳಿಂದ ಹಿಡಿದು ಅಜ್ಜಿಯವರೆಗೆ ಎಲ್ಲರಿಗೂ ಸಂಭ್ರಮ. ಇಡೀ ಮನೆಯಲ್ಲಿ ಮದುವೆ ಮನೆಯಂತೆ ಗೌಜಿ ಗದ್ದಲ.
ತಾಹಿರಾ ಎಲ್ಲವನ್ನೂ ಅಚ್ಚರಿಯಿಂದ ನೋಡುತ್ತಿ ದ್ದಳು. ಅವಳ ಮುಂದೆ ಎರಡು ಬಟ್ಟೆಗಳಿದ್ದವು. ಒಂದು ಸೀರೆ-ಇನ್ನೊಂದು ಚೂಡಿದಾರ. ಎರಡೂ ನಾಸರ್ ತಂದದ್ದು. ಸೀರೆ ತಾನು ಈ ತನಕ ಉಟ್ಟಿಲ್ಲ. ಉಟ್ಟರೆ ಹೇಗೆ ಕಾಣಬಹುದು. ಅವಳು ಯೋಚಿಸುತ್ತಿದ್ದಂತೆಯೇ ಅಕ್ಕಂದಿರೆಲ್ಲ ಅವಳ ಸುತ್ತ ಸೇರಿದರು. ಸೀರೆ ಉಡಿಸಿದರು. ತಲೆ ಬಾಚಿದರು. ಕಾಡಿಗೆ ಹಚ್ಚಿದರು. ಮದುಮಗಳಂತೆ ಅಲಂಕಾರ ಮಾಡಿದರು. ತಮ್ಮ ಕೊರಳಲ್ಲಿದ್ದ ಸರ, ಬಳೆ, ಉಂಗುರ ತೆಗೆದು ಅವಳಿಗೆ ತೊಡಿಸಿದರು. ಎಳೆದುಕೊಂಡು ಹೋಗಿ ಅಜ್ಜಿಯ ಮುಂದೆ ನಿಲ್ಲಿಸಿದರು. ಮೊಮ್ಮಗಳ ಸೌಂದರ್ಯ ಕಂಡು ಅಜ್ಜಿಯ ಕಣ್ಣುಗಳು ಅರಳಿದವು. ಅಜ್ಜಿ ಅವಳ ಕೆನ್ನೆ ಸವರಿ, ಹಣೆಗೆ ಚುಂಬಿಸಿದರು. ಅಲ್ಲಿಂದ ಎಳೆದುಕೊಂಡು ತಂದು ಅಡಿಗೆ ಮನೆಯಲ್ಲಿ ನಿಲ್ಲಿಸಿದರು. ಅಡಿಗೆಯ ಗಡಿಬಿಡಿಯಲ್ಲಿದ್ದ ಐಸು, ದೊಡ್ಡಮ್ಮಂದಿರೆಲ್ಲ ಒಮ್ಮೆಲೆ ಮಿಂಚಿದ ಬೆಳಕು ಕಂಡು ತಿರುಗಿ ನೋಡಿದರು. ತಾಹಿರಾ! ಎಲ್ಲರ ಮುಖ ಅರಳಿತು. ಕಣ್ಣುಗಳಲ್ಲಿ ಆಶ್ಚರ್ಯ. ‘‘ನಮ್ಮ ಮಗಳಿಗೆ ದೃಷ್ಟಿ ಬಿದ್ದೀತು. ಕೆನ್ನೆಗೊಂದು ಕಪ್ಪುಬೊಟ್ಟು ಹಾಕಿ’’ ಐಸು ನಗುತ್ತಾ ಹೇಳಿದಳು.
ಅವರೆಲ್ಲರಿಂದ ಬಿಡಿಸಿಕೊಂಡ ತಾಹಿರಾ ತನ್ನ ಕೋಣೆಗೆ ಬಂದು ಕನ್ನಡಿಯ ಮುಂದೆ ನಿಂತುಕೊಂಡಳು. ‘‘ಅಬ್ಬಾ...!’’ ಅವಳಿಗರಿವಿಲ್ಲದೆ ಅವಳ ಬಾಯಿಯಿಂದ ಉದ್ಗಾರವೊಂದು ಹೊರಬಿತ್ತು. ಅವಳ ಕಣ್ಣ ರೆಪ್ಪೆಗಳು ಪಟಪಟನೆ ಬಡಿದುಕೊಂಡವು. ಅದೆಷ್ಟು ಹೊತ್ತು ಹಾಗೆಯೇ ನಿಂತಿದ್ದಳೋ - ಕನ್ನಡಿಯೊಳಗಿಂದಲೇ ಬಾಗಿಲಲ್ಲಿ ನಾಸರ್ ನಿಂತಿರುವುದು ಕಂಡು ಬೆಚ್ಚಿದ ವಳಂತೆ ಒಮ್ಮೆಲೆ ತಿರುಗಿದಳು. ನಾಸರ್‌ನ ನೋಟವನ್ನು ಎದುರಿಸಲಾಗದೆ ನಾಚಿ ನೀರಾಗಿ ತಲೆ ತಗ್ಗಿಸಿ ನಿಂತುಕೊಂಡಳು. ಆತ ಅವಳ ಸೌಂದರ್ಯವನ್ನು ಕಣ್ಣೊಳಗೆ ತುಂಬಿಕೊಳ್ಳುತ್ತಾ ಅವಳ ಹತ್ತಿರ ಬಂದ.
‘‘ತಾಹಿರಾ...’’ ಅವನ ಮನಸು ಕರೆಯಿತು.
ಅವಳು ತೆ ಎತ್ತಿ ‘ಏನು’ ಎಂಬಂತೆ ನೋಡಿದಳು.
‘‘ಎಷ್ಟು ಸುಂದರವಾಗಿ ಕಾಣುತ್ತೀಯಾ ನೀನು. ಅಪ್ಸರೆ, ನಿಜವಾಗಿಯೂ ಅಪ್ಸರೆ.’’
ಅಳು ನಾಚಿ ಮತ್ತೆ ನೆಲ ನೋಡಿದಳು.
‘‘ಈ ಸೀರೆ ನಿನಗೆ ತುಂಬಾ ಒಪ್ಪುತ್ತೆ. ದೇವಲೋಕದ ರಾಣಿಯಂತೆ ಕಾಣುತ್ತಿ’’ ಆತ ಪಿಸುಗುಟ್ಟಿದ.
‘‘ನೀನೇ ಆರಿಸಿ ತಂದ ಸೀರೆಯ ಲ್ಲವಾ?’’ ಅವಳ ಮನಸ್ಸು ಹಾಡಿತು.
ಆತ ಅವಳ ಕೈ ಹಿಡಿದ. ತಾನು ತಂದಿದ್ದ ಮಲ್ಲಿಗೆ, ಗುಲಾಬಿ ಹೂವಿನ ಕಟ್ಟನ್ನು ಅವಳ ಕೈಗಿಟ್ಟು ಹಾಗೆಯೇ ನಿಂತು ಬಿಟ್ಟ.
‘‘ಇದನ್ನು ಮುಡಿದು ಕೋ’’
ಅವಳು ಅವನ ಮುಖ ನೋಡಿದಳು. ನಾಲ್ಕು ಕಣ್ಣುಗಳೂ ಏನೇನೋ ಮಾತನಾಡಿಕೊಂಡವು.
‘‘ತಾಹಿರಾ’’ ಅವನು ಮತ್ತೆ ಕರೆದ. ಆ ಕರೆಯಲ್ಲಿ ಜೇನಿನ ಹೊಳೆ.
‘‘ಏನು’’ ಎಂಬಂತೆ ಅವಳು ಕಣ್ಣಲೆ್ಲೀ ಕೇಳಿದಳು.

‘‘ನಾನು ನಿನ್ನಲ್ಲಿ ಒಂದು ಮಾತು ಕೇಳಲಾ?’’ ‘‘ಕೇಳು’’ ಎಂಬಂತೆ ಅವಳು ಕಣ್ಣಲ್ಲೇ ಒಪ್ಪಿಗೆ ಕೊಟ್ಟಳು.
‘‘ತಾಹಿರಾ, ನಾನು ನಿನ್ನನ್ನು ಮದುೆಯಾಗುತ್ತೇನೆ, ನೀನು ಒಪ್ಪುತ್ತಿಯಾ’’
ಅವಳು ಹಾವು ತುಳಿದವಳಂತೆ ಒಮ್ಮೆಲೆ ಬೆಚ್ಚಿದಳು. ಅವಳ ಕೈಯಲ್ಲಿದ್ದ ಹೂವಿನ ಕಟ್ಟು ದೊಪ್ಪನೆ ಕೆಳಗೆ ಬಿತ್ತು.
‘‘ಯೋಚನೆ ಮಾಡಿ ಹೇಳು, ಅವಸರವಿಲ್ಲ.’’
ಅವಳು ಸಮ್ಮೋಹನಕ್ಕೊಳಗಾದವಳಂತೆ, ಅವನ ಮುಖವ್ನೇ ನೋಡುತ್ತಾ ನಿಂತು ಬಿಟ್ಟಿದ್ದಳು.
ತಾಹಿರಾ ನಾನು ನಿನ್ನನ್ನು ತುಂಬಾ ಇಷ್ಟ ಪಟ್ಟಿದ್ದೇನೆ. ತುಂಬಾ ಪ್ರೀತಿಸುತ್ತೇನೆ.
ಅವಳು ಉತ್ತರಿಸಲಿಲ್ಲ.
ಕೆಳಗೆ ಬಿದ್ದ ಹೂವಿನ ಕಟ್ಟನ್ನು ಎತ್ತಿ ಮತ್ತೆ ಅವಳ ಕೈಗಿಟ್ಟು ಆತ ಹೊರ ನಡೆದ. ಅವಳು ಗರಬಡಿದವಳಂತೆ ನಿಂತೇ ಇದ್ದಳು.
ಮತ್ತೆ ಎಲ್ಲ ಹೆಣ್ಣು ಮಕ್ಕಳು ಬಂದು ತಾಹಿರಾಳ ಸುತ್ತ ಸೇರಿದರು. ಅವಳ ಕೈಯಲ್ಲಿರುವ ಹೂವಿನ ಕಟ್ಟು ತೆಗೆದುಕೊಂಡು ಹಂಚಿಕೊಂಡರು. ತಾಹಿರಾಳಿಗೆ ಮಲ್ಲಿಗೆ ಜಲ್ಲಿ ಹಾಕಿದರು. ಅದರ ನಡುವೆ ಕೆಂಪು ಗುಲಾಬಿ ಮುಡಿಸಿದರು. ಎಳೆದುಕೊಂಡು ಹೋಗಿ ಅಜ್ಜಿಯ ಎದುರು ನಿಲ್ಲಿಸಿದರು. ಅಜ್ಜಿ ೆಟ್ಟಗೆ ಮುರಿದು ದೃಷ್ಟಿ ತೆಗೆದರು.
 ಅಲ್ಲಿಂದ ಅಡುಗೆ ಮನೆಗೆ ಕರೆದೊಯ್ದರು. ಅಲ್ಲಿಂದ ವರಾಂಡಕ್ಕೆ ಕರೆತಂದು ಎಲ್ಲ ಗಂಡಸರ ಮಧ್ಯೆ ಕುರ್ಚಿಯಲ್ಲಿ ಕೂರಿಸಿದರು. ಎಲ್ಲರೂ ಅವಳ ಸೌಂದರ್ಯವನ್ನೂ, ಮುದ್ದು ಮುಖವನ್ನೂ ಆಶ್ಚರ್ಯ ದಿಂದ ನೋಡುತ್ತಾ ಮಾತನಾಡತೊಡಗಿದರು. ತಮ್ಮ ಮನೆಗೆ ಬಂದು ಕೆಲವು ದಿನ ಇರುವಂತೆ ಒತ್ತಾಯಿಸಿ ದರು. ಅವಳು ಎಲ್ಲದಕ್ಕೂ ತಲೆಯಾಡಿಸಿದಳು. ಅವಳಿಗೀಗ ಯಾರ ಮಾತೂ ಕೇಳುತ್ತಿರಲಿಲ್ಲ. ಒಂದು ಮಾತೂ ಅರ್ಥವಾಗುತ್ತಿರಲಿಲ್ಲ. ಅವಳ ಎದೆಯ ವೀಣೆಯ ತಂತಿಯನ್ನು ನಾಸರ್ ಬಲವಾಗಿ ಮೀಟಿ ಬಿಟ್ಟಿದ್ದ. ಅದರ ನಾದದ ಇಂಪಿಗೆ ಅವಳ ದೇಹದ ರಕ್ತದ ಕಣಕಣಗಳಲ್ಲೂ ಸಂಗೀತ ಕಛೇರಿ ಪ್ರಾರಂಭವಾಗಿತ್ತು. ಅವಳ ಕಣ್ಣು ನಾಸರ್‌ನನ್ನೇ ಹುಡುಕುತ್ತಿತ್ತು. ಆದರೆ ಅಲ್ಲೆಲ್ಲೂ ಅವನು ಕಾಣಲಿಲ್ಲ.
ಕುರ್ಬಾನಿ ಮುಗಿಸಿ ಬಂದ ನಾಸರ್ ಮನೆಯೊಳಗೆ ಪ್ರವೇಶಿಸುತ್ತಿರುವಂತೆಯೇ ವರಾಂಡದಲ್ಲಿ ಎಲ್ಲರ ಮಧ್ಯೆ ಮದುಮಗಳಂತೆ ಹೂ ಮುಡಿದು ಕುಳಿತಿದ್ದ ತಾಹಿರಾಳನ್ನು ಕಂಡು ಬೆರಗಾಗಿ ಅಲ್ಲೇ ನಿಂತುಬಿಟ್ಟ.
ಮದುವೆಗೆ ಇವಳು, ಇವಳ ತಾಯಿ, ಅಜ್ಜಿ ಒಪ್ಪದಿದ್ದರೆ... ನೆನೆಯುತ್ತಿದ್ದಂತೆಯೇ ಅವನ ಕರುಳ್ನು ಯಾರೋ ಹಿಡಿದು ಹಿಂಡಿದಂತಾಯಿತು.
‘‘ಕುರ್ಬಾನಿ ಎಲ್ಲ ಮುಗಿಯಿತಾ?’’
ಬಾಗಿಲಲ್ಲಿ ನಿಂತಿದ್ದ ನಾಸರ್‌ನನ್ನು ಕಂಡು ದೊಡ್ಡ್ಪ ಕೇಳಿದರು.
‘‘ಹೂಂ... ಆಯಿತು ಎಲ್ಲರಿಗೂ ಹಂಚಿ ಬಂದೆ’’ ಎನ್ನುತ್ತಾ ಆತ ಅವರ ಮಧ್ಯೆ ಬಂದು ನಿಂತ.
ತಾಹಿರಾ ತಲೆ ಎತ್ತಿದವಳು ಅವನ ನೋಟವನ್ನು ಎದುರಿಲಾಗದೆ ಮತ್ತೆ ತಲೆ ತಗ್ಗಿಸಿದಳು.
ಐಸು ಎಲ್ಲರನ್ನೂ ಊಟಕ್ಕೆ ಎಬ್ಬಿಸಿದಳು.
ಬಿರಿಯಾನಿ, ನೈಚೋರು, ಆಡಿನ ಮಾಂಸದ ಕರಿ, ಕೋಳಿ ಹುರಿದದ್ದು, ಮೀನು ಹುರಿದದ್ದು, ಸಲಾಡ್, ಹಪ್ಪಳ, ಐಸ್‌ಕ್ರೀಂ, ಕೀರು...
ಮೊದಲು ಗಂಡಸರ ಊಟವಾಯಿತು. ನಂತರ ಹೆಂಗಸರದ್ದು.
ಊಟ ಮುಗಿಸಿದ ಗಂಡಸರೆಲ್ಲ ಕೋಣೆಗೆ ಹೋಗಿ ಬಿದ್ದುಕೊಂಡರು. ಹೆಂಗಸರ ಊಟ ಮುಗಿದಾಗ ಮಧ್ಯಾಹ್ನ ಕಳೆದಿತ್ತು.
ಸಂಜೆಯಾಗುತ್ತಲೇ ಕೆಲವು ಹೆಂಗಸರು, ಎಲ್ಲ ಗಂಡಸರು ಹೊರಟು ನಿಂತರು. ಹೊರಡುವಾಗ ಮತ್ತೆ ಅವರು ತಾಹಿರಾಳನ್ನು ಸುತ್ತುವರಿದರು. ಮತ್ತೊಮ್ಮೆ ಎಲ್ಲರೂ ಅವಳನ್ನು ತಮ್ಮ ಮನೆಗೆ ಕರೆದರು. ಅಣ್ಣಂದಿರೆಲ್ಲ ಅವಳನ್ನು ತಬ್ಬಿಕೊಂಡರು. ಪ್ರೀತಿಯಿಂದ ಕೆನ್ನೆ ಸವರಿದರು. ತಮ್ಮ ತಮ್ಮ ಮೊಬೈಲ್ ಸಂಖ್ಯೆಗಳನ್ನು ಕೊಟ್ಟರು. ಅವಳ ಸಂಖ್ಯೆಯನ್ನು ಪಡೆದುಕೊಂಡರು. ತಿರುಗಿ ತಿರುಗಿ ನೋಡುತ್ತಾ ಕೈ ಬೀಸುತ್ತಾ ಹೋಗಿ ಕಾರು ಹತ್ತಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News