ತುಳು ಸಂಸ್ಕೃತಿ ವಿಶ್ವಕ್ಕೆ ಮಾದರಿ: ಸಚಿವ ಯು.ಟಿ ಖಾದರ್

Update: 2016-11-06 18:29 GMT

ಮುಂಬೈ, ನ.6: ಮುಂಬೈನಲ್ಲಿ ತುಳುನಾಡ ಸಂಸ್ಕೃತಿಯ ಬೆಳವಣಿಗೆ ಅಭಿನಂದನೀಯ. ಮಾಯಾನಗರಿಯಲ್ಲಿ ರಂಗಭೂಮಿ ಫೈನ್‌ಆರ್ಟ್ಸ್‌ನ ಇಪ್ಪತೈದರ ಸೇವೆ ಅನನ್ಯವಾಗಿದ್ದು. ಇದು ತುಳುನಾಡಿನ ಸಂಸ್ಕೃತಿ ಅನಾವರಣಕ್ಕೆ ಮೆರಗು ನೀಡಿದೆ. ನಮ್ಮ ಪೂರ್ವಜರ ಇಂತಹ ಪರಂಪರೆಯನ್ನು ಭವಿಷ್ಯತ್ತಿನ ಪೀಳಿಗೆಯಲ್ಲಿ ರೂಢಿಸಲು ಇಂತಹ ಸಂಸ್ಥೆಗಳ ಪಾತ್ರ ಮಹತ್ತರವಾದದ್ದು. ನಮ್ಮೆಲ್ಲರದ್ದು ತುಳು ಸಂಸ್ಕೃತಿ ಅದೇ ಬದುಕು ಆಗಿದೆ. ತುಳು ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ. ಭಾರತವು ಬಹುಭಾಷಿತವಾಗಿದ್ದು ಇಲ್ಲಿ ಹಲವಾರು ಜಾತಿಧರ್ಮಗಳಿವೆ. ಆದರೆ ನಾವು ಸಹೋದರತ್ವದ ಬಾಳನ್ನು ಮೈಗೂಡಿಸಿ ರಂಗಭೂಮಿ ಮೂಲಕ ತುಳುನಾಡನ್ನು ಜಗತ್ತಿಗೆ ಗುರುತಿಸಿದ್ದೇವೆ. ಇದೇ ತುಳುನಾಡಿನ ಜನತೆಯ ವೈಶಿಷ್ಟ್ಯತೆ ಎಂದು ಕರ್ನಾಟಕದ ಸರಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್ ತಿಳಿಸಿದರು.

ನವಿಮುಂಬಯಿ ವಾಶಿಯ ಅಲ್ಲಿನ ಸಿಡ್ಕೋ ಪ್ರದರ್ಶನಾಲಯ ಕೇಂದ್ರದ ಸಭಾಗೃಹದಲ್ಲಿ ನವಿಮುಂಬಯಿಯಲ್ಲಿ ರಂಗಭೂಮಿ ಫೈನ್ ಆರ್ಟ್ಸ್‌ನ ರಜತಮಹೋತ್ಸವ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ರಂಗಭೂಮಿಯ ಸ್ಮರಣಸಂಚಿಕೆ ಬಿಡುಗಡೆಗೊಳಿಸಿ ಸಚಿವ ಖಾದರ್ ಅವರು ಮಾತನಾಡಿದರು.

ರಂಗಭೂಮಿ ರಜತ ಮಹೋತ್ಸವ ಸಮಿತಿ ಸಂಚಾಲಕ ಸಂತೋಷ್ ಡಿ.ಶೆಟ್ಟಿ ಸಬಾಧ್ಯಕ್ಷತೆ ವಹಿಸಿದ್ದರು. ವಿದ್ಯಾವಿಹಾರ್‌ನ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನ ಪ್ರಧಾನ ಅರ್ಚಕ ಪೆರ್ಣಂಕಿಲ ಶ್ರೀ ಹರಿದಾಸ ಭಟ್ ದೀಪ ಬೆಳಗಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನಗೈದರು.

ಗೌರವ ಅತಿಥಿಗಳಾಗಿ ಆಲ್‌ಕಾರ್ಗೋ ಲಾಜಿಸ್ಟಿಕ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಶಶಿಕಿರಣ್ ಜೆ.ಶೆಟ್ಟಿ, ರಿಲೈಬಲ್ ಬಿಲ್ಡರ್ಸ್‌ನ ಸದಾನಂದ ಶೆಟ್ಟಿ, ಅಭ್ಯುದಯ ಬ್ಯಾಂಕ್‌ನ ಆಡಳಿತ ನಿರ್ದೇಶಕ ಪುನೀತ್‌ಕುಮಾರ್ ಶೆಟ್ಟಿ, ಮಾತೃಭೂಮಿ ಕ್ರೆಡಿಟ್ ಸೊಸೈಟಿ ಲಿಮಿಟೆಡ್‌ನ ಕಾರ್ಯಾಧ್ಯಕ್ಷ ಶಂಕರ್ ಬಿ.ಶೆಟ್ಟಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ್ ಪಾಲೆತ್ತಾಡಿ, ರಾಮರಾಜ ಕ್ಷತ್ರೀಯ ಮಹಿಳಾ ಮಂಡಳಿ ಮುಂಬಯಿ ಅಧ್ಯಕ್ಷ ರಾಜ್‌ಕುಮಾರ್ ಕಾರ್ನಾಡ್, ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕಾಧ್ಯಕ್ಷ ಸುರೇಶ್ ಶೆಟ್ಟಿ ಯೆಯ್ಯಿಡಿ ಉಪಸ್ಥಿತರಿದ್ದರು.

ಹರಿದಾಸ ಭಟ್ ಮಾತನಾಡಿ, ಸಂಘ ಸಂಸ್ಥೆಗಳ ಆಚರಣೆ ನಮಗೆ ಖುಷಿ ನೀಡುತ್ತದೆ. ಆದರೆ ಸಾಂಘಿಕತೆಯ ಹಿಂದಿನ ಸಹನೆ, ಸಂಕಷ್ಟ ಗೌಪ್ಯವಾಗಿರುತ್ತದೆ. ಇವತ್ತಿನ ಬೆಳ್ಳಿ ಹಬ್ಬದ ದೀಪ ಪ್ರಜ್ವಲನೆ ಈ ಸಂಸ್ಥೆಯ ಸುವರ್ಣ ಮಹೋತ್ಸವಕ್ಕೆ ನಾಂದಿಯಾಗಲಿ. ದೇವರ ಸಹಾಯ ದೊರೆತು ರಂಗಭೂಮಿ ಮೂಲಕ ಕಲೆಯು ಬೆಳಗಲಿ ಎಂದರು.

ಸಮಾರಂಭದಲ್ಲಿ ಹಿರಿಯ ಹೊಟೇಲು ಉದ್ಯಮಿ ಶಂಕರ ಶೆಟ್ಟಿ, ಧಾರ್ಮಿಕ ಮುಂದಾಳುಗಳಾದ ಧರ್ಮದರ್ಶಿ ಅಣ್ಣಿ ಸಿ.ಶೆಟ್ಟಿ, ಧರ್ಮದರ್ಶಿ ರಮೇಶ್ ಎಂ.ಪೂಜಾರಿ ಮತ್ತು ರಂಗೂಮಿ ಅಧ್ಯಕ್ಷ ವಿ.ಕೆ ಸುವರ್ಣ ದಂಪತಿಯನ್ನು ಅತಿಥಿಗಳು ಸನ್ಮಾನಿಸಿ ಅಭಿನಂದಿಸಿದರು. ಇಂದಿರಾ ಹರೀಶ್ ಶೆಟ್ಟಿ ಬಳಗ ಪ್ರಾರ್ಥಿಸಿದರು. ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಉಪಾಧ್ಯಕ್ಷ ತಾರನಾಥ ಶೆಟ್ಟಿ ಪುತ್ತೂರು ಪ್ರಸ್ತಾವಿಕ ನುಡಿಗಳನ್ನಾಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಪನ್ವೇಲ್, ಪ್ರಭಾಕರ್ ಹೆಗ್ಡೆ, ದೆಪ್ಪಣಿಗುತ್ತು ಚಂದ್ರಹಾಸ ಶೆಟ್ಟಿ, ರಘು ಮೂಲ್ಯ ಸನ್ಮಾನಿತರನ್ನು ಪರಿಚಯಿಸಿದರು. ಸಾಂಸ್ಕೃತಿಕ ಸಮಿತಿ ಮುಖ್ಯಸ್ಥ ಆನಿಲ್‌ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ರಂಗಭೂಮಿಯ ಜೊತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ಗೌರವ ಕೋಶಾಧಿಕಾರಿ ಇಂದಿರಾ ಎಸ್.ಶೆಟ್ಟಿ ಇತರ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು. ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ನವಿಮುಂಬಯಿಯ ವಿವಿಧ ಸಂಸ್ಥೆಗಳ ಕಲಾವಿದರು ‘ನೃತ್ಯ ವೈಭವ’ವನ್ನು ಹಾಗೂ ರಂಗಭೂಮಿಯ ಮಹಿಳಾ ಸದಸ್ಯೆಯರು ತಾರಾ ಆರ್.ಬಂಗೇರ ರಚಿಸಿ ನಿರ್ದೇಶಿಸಿದ ‘ಎನ್ನ ತಂಗಡಿನ ಮದಿಮೆ’ ತುಳು ನಾಟಕ ಮತ್ತು ಅಭಿನಯ ಮಂಟಪ ಮುಂಬಯಿ ಕಲಾವಿದರು ಕರುಣಾಕರ ಕಾಪು ನಿರ್ದೇಶನದಲ್ಲಿ ರಮಾನಂದ ನಾಯಕ್ ರಚಿಸಿದ ‘ಒಯಿಕ್‌ಲಾ ದಿನ ಬರೊಡು’ ತುಳು ನಾಟಕ ಪ್ರದರ್ಶಿಸಿದರು.

ರಂಗಭೂಮಿ ಸದಸ್ಯರ ಮಕ್ಕಳು ಅಶೋಕ್ ಕೊಡ್ಯಡ್ಕ ನಿರ್ದೇಶನದಲ್ಲಿ ತುಳು ಸಂಸ್ಕೃತಿ ಬಿಂಬಿಸುವ ‘ತುಳು ಅಪ್ಪೆನ ಪೋರ್ಲು’ ಕಾರ್ಯಕ್ರಮ ನೀಡಿದರು.

ವರದಿ : ರೋನ್ಸ್ ಬಂಟ್ವಾಳ್

Writer - ವರದಿ : ರೋನ್ಸ್ ಬಂಟ್ವಾಳ್

contributor

Editor - ವರದಿ : ರೋನ್ಸ್ ಬಂಟ್ವಾಳ್

contributor

Similar News