ಡಿ.2ರಂದು ತಮಿಳುನಾಡು ಕರಾವಳಿ ದಾಟಲಿರುವ ‘ನಾಡಾ’ ಚಂಡಮಾರುತ
ಚೆನ್ನೈ,ನ.30: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಚಂಡಮಾರುತವಾಗಿ ರೂಪಾಂತರಗೊಂಡು ಡಿ.2ರ ನಸುಕಿನಲ್ಲಿ ತಮಿಳುನಾಡು ಕರಾವಳಿಯನ್ನು ದಾಟುವ ಸಾಧ್ಯತೆಯಿದೆ ಎಂದು ಹವಾಮಾನ ಕಚೇರಿಯು ಇಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಡಿ.1 ಮತ್ತು 2ರಂದು ರಾಜ್ಯದಲ್ಲಿ ಮತ್ತು ಪುದುಚೇರಿಯಲ್ಲಿ ಭಾರೀ ಮಳೆಯಾಗಲಿದೆ ಎಂದು ಅದು ಹೇಳಿದೆ.
ಚಂಡಮಾರುತವನ್ನು ‘ನಾಡಾ’ ಎಂದು ಹೆಸರಿಸಲಾಗಿದೆ ಎಂದು ಪ್ರದೇಶ ಚಂಡಮಾರುತ ಮುನ್ನೆಚ್ಚರಿಕೆ ಕೇಂದ್ರದ ನಿರ್ದೇಶಕ ಎಸ್.ಬಾಲಚಂದ್ರನ್ ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತವು ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಲಿಸುತ್ತಿದು,್ದ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಅದೀಗ ಚೆನ್ನೈನ ಆಗ್ನೇಯಕ್ಕೆ 830 ಕಿ.ಮೀ.ದೂರದಲ್ಲಿದೆ. ಮುಂದಿನ 12 ಗಂಟೆಗಳಲ್ಲಿ ಈ ವಾಯುಭಾರ ಕುಸಿತವು ಚಂಡಮಾರುತವಾಗಿ ರೂಪಾಂತರಗೊಳ್ಳುವ ಸಾಧ್ಯತೆಯಿದೆ. ಡಿ.2ರಂದು ಬೆಳಗಿನ ಜಾವ ವೇದಾರಣ್ಯಂ ಮತ್ತು ಚೆನ್ನೈ ನಡುವೆ,ಕುಡ್ಡಲೂರು ಸಮೀಪ ತಮಿಳುನಾಡು ಕರಾವಳಿಯನ್ನು ದಾಟುವ ನಿರೀಕ್ಷೆಯಿದೆ.
ಭಾರೀ ಮಳೆಯನ್ನು ನಿರೀಕ್ಷಿಸಲಾಗಿರುವ ಹಿನ್ನೆಲೆಯಲ್ಲಿ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ. ಈಗಾಗಲೇ ಸಮುದ್ರಕ್ಕೆ ತೆರಳಿರುವ ಮೀನುಗಾರರಿಗೆ ತಕ್ಷಣ ವಾಪಸ್ ಬರುವಂತೆ ಸೂಚಿಸಲಾಗಿದೆ.