ತನ್ನ ಆತ್ಮಹತ್ಯೆಯ ವದಂತಿಗೆ ವಿಭಿನ್ನವಾಗಿ ತೆರೆ ಎಳೆದ ಐಶ್ವರ್ಯಾ

Update: 2016-12-05 14:00 GMT

ಮುಂಬೈ, ಡಿ. 5 : ಅಯ್ ದಿಲ್ ಹೈ ಮುಷ್ಕಿಲ್ ಚಿತ್ರ  ಬಿಡುಗಡೆಯಾಗಿ ಹಿಟ್ ಆಗಿ ಈಗ ಹಳತಾದರೂ ಅದರಲ್ಲಿನ ಐಶ್ವರ್ಯ ರೈ ಬಚ್ಚನ್ ಪಾತ್ರದ ಸುತ್ತ ಮಾಧ್ಯಮಗಳ ಆಸಕ್ತಿ ಇನ್ನೂ ತಣಿದಂತೆ ಕಾಣುತ್ತಿಲ್ಲ.

ರಣಬೀರ್ ಕಪೂರ್ ಜೊತೆ ' ವಿಭಿನ್ನ ' ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಐಶ್ವರ್ಯಾ ಈ ಬಗ್ಗೆ ಮಾಧ್ಯಮಗಳಲ್ಲಿ ಹಾಗು ಸಾಮಾಜಿಕ ಜಾಲತಾಣಗಳಲ್ಲಿ ಗಾಸಿಪ್ ಗಳ ಸರಣಿಯನ್ನೇ ಸೃಷ್ಟಿಸಿದ್ದರು.

ಈ ಪಾತ್ರದಲ್ಲಿ ರಣಬೀರ್ ಜೊತೆ ತುಸು ಹೆಚ್ಚೇ ಪ್ರೀತಿ ತೋರಿಸಿರುವುದು ಮಾವ ಅಮಿತಾಭ್ ಹಾಗೂ ಅತ್ತೆ ಜಯಾ ಬಚ್ಚನ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮಾಧ್ಯಮಗಳು ಬರೆದದ್ದೇ ಬರೆದದ್ದು. ಇದು ಎಷ್ಟು ನಿಜ , ಎಷ್ಟು ಸುಳ್ಳು ಎಂದು ಮಾತ್ರ ಯಾರಿಗೂ ಸ್ಪಷ್ಟವಾಗಿ ಗೊತ್ತಿಲ್ಲ.

ಇದೀಗ ಈ ಎಲ್ಲ ಗಾಸಿಪ್ ಗಳಿಗೆ ಕಳಶವಿಟ್ಟಂತೆ ಪಾಕ್ ವೆಬ್ ಸೈಟೊಂದು ಅತಿರೇಕದ ' ಸುದ್ದಿ' ಪ್ರಕಟಿಸಿ ಎಲ್ಲ ಮೇರೆಗಳನ್ನು ಮೀರಿದೆ. ಐಶ್ವರ್ಯಾ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿ ಮಾನಸಿಕ ಒತ್ತಡ ನಿವಾರಿಸುವ ಮಾತ್ರೆಗಳನ್ನು ಲೆಕ್ಕಕ್ಕಿಂತ ಹೆಚ್ಚು ತೆಗೆದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಬಳಿಕ ಮುಂಬೈ ನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ತುರ್ತು ಚಿಕಿತ್ಸೆ ನೀಡಲಾಯಿತು. ಹಾಗಾಗಿ ಐಶ್ವರ್ಯಾ ಸದ್ಯಬಚಾವಾಗಿದ್ದಾರೆ . ಬಚ್ಚನ್ ಪರಿವಾರದ ಪ್ರಭಾವದಿಂದಾಗಿ ಇದು ಎಲ್ಲಿಯೂ ಸುದ್ದಿಯಾಗಲಿಲ್ಲ ಎಂದು ಈ ವೆಬ್ ಸೈಟ್ ಬರೆದುಬಿಟ್ಟಿತು. ಕೆಲವು ಕಳಪೆ ವೆಬ್ ಸೈಟ್ ಗಳು ಹಾಗು ಇಂತಹದ್ದೇ ' ಡೇಂಜರ್ ಸುದ್ದಿ' ಗಳ ಹುಡುಕಾಟದಲ್ಲಿರುವವರು ಈ ಪಾಕ್ ವೆಬ್ ಸೈಟ್ ಬರೆದದ್ದನ್ನು ಹರಡಿದ್ದಾರೆ.

ಆದರೆ ಈ ಆಧಾರರಹಿತ ವದಂತಿಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಗೋಜಿಗೆ ಬಚ್ಚನ್ ಪರಿವಾರ ಹೋಗಿಲ್ಲ. ಮಾತ್ರವಲ್ಲ ಯಾವುದೇ ಸ್ಪಷ್ಟೀಕರಣವನ್ನೂ ನೀಡಿಲ್ಲ. ಆದರೆ ಐಶ್ವರ್ಯಾ ಮಾತ್ರ ವಿಭಿನ್ನವಾಗಿಯೇ ಈ ಸುಳ್ ಸುದ್ದಿ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಅದೂ ಯಾವುದೇ ಹೇಳಿಕೆ ನೀಡದೆಯೇ ?

ಅವರು ಮಾಡಿದ್ದೇನು ಗೊತ್ತೇ ? ರವಿವಾರ ನಡೆದ ಖ್ಯಾತ ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಐವತ್ತನೇ ಹುಟ್ಟುಹಬ್ಬದ ಪಾರ್ಟಿಗೆ ಐಶ್ವರ್ಯಾ ಅದ್ಭುತ ಡಿಸೈನರ್ ಬ್ಲ್ಯಾಕ್ ಡ್ರೆಸ್ ನಲ್ಲಿ ಬಂದು ಎಲ್ಲರ ಗಮನ ಸೆಳೆದರು. ಪಕ್ಕದಲ್ಲಿ ಪತಿ ಅಭಿಷೇಕ್ ಬಚ್ಚನ್ ಇದ್ದರು. ಸುಳ್ ಸುದ್ದಿ ಪ್ರಕಟಿಸಿದವರಿಗೆ ಇದಕ್ಕಿಂತ ಮುಖಭಂಗ ಬೇಕೇ ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News