ಜಯಲಲಿತಾ ಕ್ಷೇತ್ರದಲ್ಲಿ ಶಶಿಕಲಾ ಸ್ಪರ್ಧಿಸುವುದು ಬೇಡ: ಕಾರ್ಯಕರ್ತರು
ಚೆನ್ನೈ,ಜ.6: ಜಯಲಲಿತಾ ಪ್ರತಿನಿಧಿಸುತ್ತಿದ್ದ ಆರ್.ಕೆ. ನಗರ್ ವಿಧಾನಸಭಾ ಕ್ಷೇತ್ರದಿಂದ ಶಶಿಕಲಾ ನಟರಾಜನ್ ಸ್ಪರ್ಧಿಸುವುದು ಬೇಡ ಎಂದು ಸ್ಥಳೀಯ ಎಐಡಿಎಂಕೆ ಕಾರ್ಯಕರ್ತರು ಹೇಳಿದ್ದಾರೆ. ಕಳೆದ ದಿವಸ ಜಯಲಲಿತಾರ ಮೂವತ್ತನೆ ಚರಮದಿನ ಗೌರವಸೂಚಕ ರ್ಯಾಲಿಯಲ್ಲಿ ಶಾಸಕ ಪಿ. ವೆಟ್ರಿವೇಲ್ ಶಶಿಕಲಾರಿಗಾಗಿ ಪ್ರಸ್ತಾಪ ಮುಂದಿಟ್ಟಾಗ ಕಾರ್ಯರ್ತರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ನೆರೆದಿದ್ದ ಮಹಿಳೆಯರು ಕೂಡಾ ವಿರೋಧ ಸೂಚಿಸಿದ್ದು," ನಾವು ಅಮ್ಮನಿಗಾಗಿ ಬಂದಿದ್ದೇವೆ. ಚಿನ್ನಮ್ಮನೊಡನೆ ಹೇಳಿರಿ, ನಾವು ಅವರಿಗೆ ಮತ ಹಾಕಲು ಬಂದಿಲ್ಲ" ಎಂದಿದ್ದಾರೆ. ಇದೇವೇಳೆ,"ಅಮ್ಮ 77ದಿವಸ ಆಸ್ಪತ್ರೆಯಲ್ಲಿದ್ದರು. ಅವರನ್ನು ನೋಡಲು ನಮಗೆ ಅವಕಾಶ ನೀಡಲಾಯಿತೇ?" ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಜಯಲಲಿತಾ ಸಹೋದರ ಪುತ್ರಿ ದೀಪಾ ಜಯಕುಮಾರ್ ಆರ್.ಕೆ. ನಗರದಿಂದ ಸ್ಪರ್ಧಿಸಿದರೆ ಉತ್ತಮ ಎಂದು ಜನರ ನಡುವಿನಿಂದ ಅಭಿಪ್ರಾಯ ಕೇಳಿ ಬಂದಿದೆ.
ಈ ವಿರೋಧವನ್ನು ಪ್ರತಿಪಕ್ಷ ಪ್ರಾಯೋಜಿಸಿದೆ ಎಂದು ಶಾಸಕ ವೆಟ್ರಿವೇಲ್ ಅಪಾದಿಸಿದ್ದಾರೆ. ಡಿ.ಎಂ.ಕೆ. ಇದರ ಹಿಂದಿದೆ ಎಂದು ಅವರು ಹೇಳಿದರು. ಆದರೆ ವೆಟ್ರಿವೇಲ್ ಆರೋಪವನ್ನು ಡಿ.ಎಂ.ಕೆ. ನಿರಾಕರಿಸಿದೆ.
ಆರ್ಕೆ ನಗರದಲ್ಲಿ ಅಸಂತೃಪ್ತಿ ವ್ಯಕ್ತವಾದ ಹಿನ್ನೆಲೆಯಲ್ಲಿ ಶಶಿಕಲಾ ಮಧುರೆಯಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಚೆನ್ನೈ ಟಿ ನಗರದ ವಸತಿಗೆ ಬಂದಿದ್ದ ದೀಪಾ ಜಯಕುಮಾರ್ರನ್ನು ಭೇಟಿಯಾಗಿ ಎಡಿಐಎಂಕೆ ಕಾರ್ಯಕರ್ತರು ಪಕ್ಷದ ನಾಯಕತ್ವ ವಹಿಸಿಕೊಳ್ಳುವಂತೆ ವಿನಂತಿಸಿದ್ದಾರೆ.