ತಂದೆಯನ್ನು ಇರಿದು ಕೊಂದ ಮಗ..
ಹೊಸದಿಲ್ಲಿ, ಜ.8:ಮಗನೊಬ್ಬನು ತಂದೆಯನ್ನು ಇರಿದು ಕೊಂದು, ಬಳಿಕ ಸಿಲಿಂಡರ್ ಸ್ಫೋಟಿಸಿ ಪೊಲೀಸರನ್ನು ಗಾಯಗೊಳಿಸಿದ ಘಟನೆ ದಿಲ್ಲಿಯ ಮಧು ವಿಹಾರ್ ನಲ್ಲಿರುವ ಅಜಂತಾ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.
ವ್ಯಾಪಾರಿ ನೌಕೆಯ ಮಾಜಿ ಅಧಿಕಾರಿ ರಾಹುಲ್ ಮಾಟಾ ತಂದೆಯನ್ನು ಇರಿದು ಕೊಂದ ಮಗ. ಇಂದು ಮಧ್ಯಾಹ್ನ ರಾಹುಲ್ ತನ್ನ ತಂದೆ ನಿವೃತ್ತ ಬ್ಯಾಂಕ್ ನೌಕರ ಆರ್.ಪಿ. ಮಾಟಾರನ್ನು ಚೂರಿಯಿಂದ ಇರಿದು ಹತ್ಯೆಗೈದನು. ತಡೆಯಲು ಬಂದ ತಾಯಿ ರೇಣು ಮಾಟಾ ಅವರ ಮೇಲೂ ದಾಳಿ ನಡೆಸಿದ ಎಂದು ತಿಳಿದು ಬಂದಿದೆ.
ನೆರೆಮನೆಯವರನ್ನು ಹಾಗೂ ಭದ್ರತಾ ಸಿಬಂದಿಗಳನ್ನು ಬೆದರಿಸಿದ ರಾಹುಲ್ ವಿರುದ್ಧ ಪೊಲೀಸರಿಗೆ ದೂರು ನೀಡಲಾಯಿತು. ಪೊಲೀಸರು ಸ್ಥಳಕ್ಕೆ ಆಗಮಿಸುವ ಹೊತ್ತಿಗೆ ರಾಹುಲ್ ಮನೆಯೊಳಗೆ ಬಾಗಿಲು ಹಾಕಿ ಕುಳಿತುಕೊಂಡಿದ್ದನು ಎನ್ನಲಾಗಿದೆ. ಪೊಲೀಸರು ಬಾಗಲು ಮುರಿದು ಒಳಪ್ರವೇಶಿಸುವ ಹೊತ್ತಿಗೆ ಆರೋಪಿ ರಾಹುಲ್ ಅಡುಗೆ ಕೊಣೆಯಲ್ಲಿದ್ದ ಗ್ಯಾಸ್ ಸಿಲಿಂಡರ್ಗೆ ಬೆಂಕಿ ಹಚ್ಚಿದ ಎಂದು ತಿಳಿದು ಬಂದಿದೆ. ಇದರ ಪರಿಣಾಮವಾಗಿ ಆರೋಪಿ ರಾಹುಲ್, ಹನ್ನೆರಡು ಪೊಲೀಸರು ಮತ್ತು ನೆರೆಮನೆಯವರು ಸೇರಿದಂತೆ 13 ಮಂದಿ ಗಾಯಗೊಂಡಿದ್ದಾರೆ.ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.