ಪೆಟ್ರೋಲಿಯಂ ಸಚಿವರ ಸೋದರನ ಗ್ಯಾಸ್ ಏಜೆನ್ಸಿಗೆ ವಿಚಕ್ಷಣಾ ದಳ ದಾಳಿ

Update: 2017-01-15 03:54 GMT

ಭುವನೇಶ್ವರ,ಜ.15: ಅಂಗೂಲ್ ಜಿಲ್ಲೆಯಲ್ಲಿರುವ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಅಣ್ಣ ಸೋಮೇಂದ್ರ ಅವರ ಗ್ಯಾಸ್ ಏಜೆನ್ಸಿ ಮೇಲೆ ಒಡಿಶಾ ರಾಜ್ಯ ವಿಚಕ್ಷಣಾ ದಳದವರು ದಾಳಿ ಮಾಡಿದ್ದಾರೆ.

ಕೆಲ ಬಿಜೆಡಿ ಸದಸ್ಯರು ಮತ್ತು ಬಿಜು ಪಟ್ನಾಯಕ್ ಅವರ ಆಪ್ತರ ಮನೆಗಳ ಮೇಲೆ ಸೀಶೋರ್ ಚಿಟ್‌ಫಂಡ್ ಹಗರಣ ಹಿನ್ನೆಲೆಯಲ್ಲಿ ಸಿಬಿಐ ದಾಳಿ ನಡೆದ ಬೆನ್ನಲ್ಲೇ ರಾಜ್ಯ ವಿಚಕ್ಷಣಾ ದಳದಿಂದ ಈ ದಾಳಿ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಸಬ್ಸಿಡಿ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ಮಾರಲಾಗುತ್ತಿದೆ ಎಂಬ ಆರೋಪದ ಮೇಲೆ ಪ್ರಧಾನ್ ಅವರ ಗ್ಯಾಸ್ ಏಜೆನ್ಸಿ ಮೇಲೆ ದಾಳಿ ಮಾಡಲಾಗಿದೆ. ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳೂ ದಾಳಿಯಲ್ಲಿ ಪಾಲ್ಗೊಂಡಿದ್ದರು. ಹಲವು ಪೆಟ್ರೋಲ್ ಬಂಕ್‌ಗಳನ್ನು ಕೂಡಾ ಕಲಬೆರಕೆ ಆರೋಪದಲ್ಲಿ ತಪಾಸಣೆ ಮಾಡಲಾಗಿದೆ.

ಧರ್ಮೇಂದ್ರ ಅವರನ್ನು ಗುರಿಮಾಡಿಕೊಂಡೇ ಈ ದಾಳಿ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಸಮೀರ್ ಮೊಹಾಂತ್ ದೂರಿದ್ದಾರೆ. ಸಿಬಿಐ ದಾಳಿ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಿಬಿಐ ಕಚೇರಿ ಮುಂದೆ ಧರ್ಮೇಂದ್ರ ಅವರ ಪ್ರತಿಕೃತಿ ಸುಟ್ಟಿದ್ದರು. ಆದರೆ ವಾಸ್ತವವಾಗಿ ಈ ದಾಳಿ ಹಿಂದೆ ಅವರ ಕೈವಾಡ ಇಲ್ಲ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News