ಈ ಬಾರಿಯ ಪದ್ಮಶ್ರೀ ಪುರಸ್ಕೃತರಲ್ಲಿ ನೀವು ತಿಳಿದಿರಲೇ ಬೇಕಾದ 8 ವಿಶಿಷ್ಟ ಸಾಧಕರು

Update: 2017-01-27 06:10 GMT

ಅತ್ಯುತ್ತಮ ಬೆಳವಣಿಗೆಯೊಂದರಲ್ಲಿ ಈ ವರ್ಷದ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನು ದೇಶದ ಹೆಚ್ಚು ಜನಪ್ರಿಯರಲ್ಲದ ಹೀರೋಗಳಿಗೆ ನೀಡಲಾಗಿದೆ. ಹಲವು ರೀತಿಯಲ್ಲಿ ಈ ಪ್ರಶಸ್ತಿವಿಜೇತರು ತಮ್ಮ ಸುತ್ತಮುತ್ತಲಿನ ಜನರ ಬದುಕಿಗೆ ಆಧಾರವಾದವರು. ಅಗ್ನಿಯ ವಿರುದ್ಧ ಹೊರಾಡುವ ಜೊತೆಗೆ, ಬರಪೀಡಿತ ಪ್ರದೇಶದಲ್ಲಿ ಬೆಳೆ ತೆಗೆದಿರುವುದು ಮತ್ತು ಕಲೆಯ ಉಳಿವಿಗೆ ನೆರವಾದವರೂ ಈ ಪಟ್ಟಿಯಲ್ಲಿದ್ದಾರೆ. ಹೆಚ್ಚು ಪ್ರಚಲಿತವಲ್ಲದ ಹೀರೋಗಳ ಪೈಕಿ ಇಂದೋರ್ ನ 91 ವರ್ಷದ ಭಕ್ತಿ ಯಾದವ್ ಅವರೂ ಪದ್ಮಶ್ರೀ ಪಡೆದಿದ್ದಾರೆ. ಡಾಕ್ಟರ್ ದಾದಿ ಎಂದೇ ಪ್ರಸಿದ್ಧಿಯಾಗಿರುವವರು ಭಕ್ತಿ ಯಾದವ್. ಭಾರತಕ್ಕೆ ಅಂಧರ ಕ್ರಿಕೆಟ್ ನಲ್ಲಿ ವಿಶ್ವಕಪ್ ತಂದುಕೊಟ್ಟ ನಾಯಕ ಶೇಖರ್ ನಾಯ್ಕ್ ರಿಗೂ ಪದ್ಮಶ್ರೀ ಒಲಿದಿದೆ. ಇನ್ನೂ ಕೆಲವು ಹೆಚ್ಚು ಪ್ರಚಾರ ಪಡೆಯದ ಹೀರೋಗಳೂ ಈ ಪಟ್ಟಿಯಲ್ಲಿದ್ದಾರೆ. ಅವರ ವಿವರ ಹೀಗಿದೆ.

ಮೀನಾಕ್ಷಿ ಅಮ್ಮ (76), ಕೇರಳ

ಕತ್ತಿ ಹಿಡಿದ ಅಜ್ಜಿ ಎಂದೇ ಮೀನಾಕ್ಷಿ ಅವರು ಪರಿಚಿತ. ಅವರು ಏಳನೇ ವಯಸ್ಸಿನಲ್ಲಿ ಮಾರ್ಷಲ್ ಆರ್ಟ್ಸ್ ಕಲೆಯನ್ನು ಕಲಿತವರು. ಕಲಾರಿಪಯಟ್ಟು ಎನ್ನುವ ಮಾರ್ಷಲ್ ಆರ್ಟ್ಸ್ ಕಲೆ ಕಲಿತಿರುವ ದೇಶದ ಅತೀ ಹಿರಿಯ ಮಹಿಳೆ ಇವರು. 68 ವರ್ಷಗಳಿಂದ ಅವರು ಕಲಾರಿಪಯಟ್ಟು ಅಭ್ಯಾಸ ಮತ್ತು ಕಲಿಸುವುದರಲ್ಲಿ ತೊಡಗಿದ್ದಾರೆ. ಕೇರಳ ಈ ಸಾಹಸ ಕಲೆ ಚೀನಾದ ಮಾರ್ಷಲ್ ಆರ್ಟ್ಸ್ ಹುಟ್ಟಿನ ಮೂಲ ಎಂದು ಹೇಳಲಾಗುತ್ತದೆ.

ಬಿಪಿನ್ ಗನಾತ್ರ (59), ಪಶ್ಚಿಮ ಬಂಗಾಳ

ಕಳೆದ 40 ವರ್ಷಗಳಲ್ಲಿ ಕೋಲ್ಕತ್ತಾದಲ್ಲಿ ಆಗಿರುವ ಪ್ರತೀ ಅಗ್ನಿ ದುರಂತದ ಸಂದರ್ಭದಲ್ಲೂ ಹಾಜರಿದ್ದ ಅಗ್ನಿ ನಿರೋಧಕ ತಂಡದ ಏಕೈಕ ಸದಸ್ಯ ಬಿಪಿನ್. ಅಗ್ನಿ ದುರಂತದಲ್ಲಿ ಸಹೋದರನನ್ನು ಕಳೆದುಕೊಂಡ ಮೇಲೆ ಅವರು ತಮ್ಮ ಜೀವನವನ್ನು ಜನರನ್ನು ಅಗ್ನಿ ಅನಾಹುತದಿಂದ ರಕ್ಷಿಸಲೆಂದೇ ಮುಡಿಪಾಗಿಟ್ಟಿದ್ದಾರೆ. ಕೋಲ್ಕತ್ತಾ ಅಗ್ನಿ ನಿರೋಧಕ ದಳ ಇವರನ್ನು ಸ್ವಯಂ ಅಗ್ನಿ ನಿರೋಧಕ ವ್ಯಕ್ತಿ ಎಂದು ಗುರುತಿಸಿದೆ. ಜೀವನೋಪಾಯಕ್ಕಾಗಿ ಇಲೆಕ್ಟ್ರಿಶಿಯನ್ ಆಗಿ ಮತ್ತಿತರ ಕೆಲಸ ಮಾಡುವ ಇವರು ಅಗ್ನಿ ಅನಾಹುತವಾದಾಗ ಜೀವ ರಕ್ಷಣೆಗೆ ಎಲ್ಲಿದ್ದರೂ ಹಾಜರಾಗುತ್ತಾರೆ.

ಚಿಂತಕಿಂಡಿ ಮಲ್ಲೇಶಂ (44), ತೆಲಂಗಾಣ

ಮಲ್ಲೇಶಂ ಅವರು ಪೊಚಂಪಳ್ಳಿ ರೇಷ್ಮೆ ಸೀರೆಗಳನ್ನು ಹೊಲಿಯಲು ಬೇಕಾಗುವ ಸಮಯ ಮತ್ತು ಶ್ರಮವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಲಕ್ಷ್ಮೀ ಎಎಸ್ ಯು ಯಂತ್ರವನ್ನು ಅನ್ವೇಷಿಸಿದರು. ಅವರ ಈ ಅನ್ವೇಷಣೆಯು ಪೊಚಂಪಳ್ಳಿ ಸೀರೆಗಳನ್ನು ಹೊಲಿಯುವ ಶೇ. 60ರಷ್ಟು ನೇಕಾರರ ಕೆಲಸ ಹಗುರ ಮಾಡಿದೆ. ಶಾಲೆ ಕಲಿಕೆಯನ್ನು ಅರ್ಧದಲ್ಲೇ ತೊರೆದಿರುವ ಮಲ್ಲೇಶಂ ತಮ್ಮ ತಾಯಿ ಲಕ್ಷ್ಮೀಯವರು ನೇಕಾರಿಕೆಯಲ್ಲಿ ಪಡುತ್ತಿರುವ ಕಷ್ಟವನ್ನು ಕಂಡು ಈ ಯಂತ್ರವನ್ನು ಅನ್ವೇಷಿಸಿದವರು. ಈ ಅನ್ವೇಷಣೆಯಿಂದ ಒಂದು ಸೀರೆಯನ್ನು ಹೊಲಿಯುವ ಸಮಯವು 4 ಗಂಟೆಯಿಂದ ಒಂದೂವರೆ ಗಂಟೆಗೆ ಇಳಿದಿದೆ. ಮೊದಲ ಯಂತ್ರವನ್ನು 1999ರಲ್ಲಿ ಮರದ ಮೇಲಿಡುವಂತೆ ನಿರ್ಮಿಸಿದರು. ನಂತರ ಅದನ್ನೇ ಸ್ಟೀಲಿನಲ್ಲಿ ತಯಾರಿಸಿದರು. ನಂತರ ಹಲವು ಇಲೆಕ್ಟ್ರಾನಿಕ್ ವಸ್ತುಗಳನ್ನು ಸೇರಿಸಿ ವಿನ್ಯಾಸವನ್ನು ಸುಧಾರಿಸಿ ಇನ್ನಷ್ಟು ಕ್ಷಮತೆ ಹೆಚ್ಚಿಸಿದ್ದಾರೆ. ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ಈ ಯಂತ್ರ ಬಳಕೆಯಲ್ಲಿದೆ.

ದಾರಿಪಳ್ಳಿ ರಾಮಯ್ಯ (68), ತೆಲಂಗಾಣ

ಮರ ಪುರುಷ ಎಂದೇ ಪ್ರಸಿದ್ಧಿ ಪಡೆದಿರುವ ರಾಮಯ್ಯ ತಮ್ಮ ಜೀವನವನ್ನು ಸುಮಾರು ಒಂದು ಕೋಟಿಗೂ ಅಧಿಕ ಮರಗಳನ್ನು ನೆಡುವ ಮೂಲಕ ಭಾರತಕ್ಕೆ ಹಸುರೆರೆದವರು. ಅವರು ಎಲ್ಲೇ ಖಾಲಿ ಜಾಗವನ್ನು ಕಂಡಲ್ಲಿ ತಮ್ಮ ಪಾಕೆಟ್ ನಿಂದ ಬೀಜಗಳನ್ನು ತೆಗೆದು ಅಲ್ಲಿ ಹಾಕಿಬಿಡುತ್ತಾರೆ.

ಕರಿಮುಲ್ ಹಕ್ (52), ಪಶ್ಚಿಮ ಬಂಗಾಳ

ಚಹಾ ಗಾರ್ಡನ್ ನೌಕರ ಕರೀಮುಲ್ಲ ತಮ್ಮ ಬೈಕ್ ಅನ್ನು 24x7 ಸೇವೆ ನೀಡುವ ಆಂಬ್ಯುಲೆನ್ಸ್ ಆಗಿ ಪರಿವರ್ತಿಸಿದ ಕಾರಣ ಅವರಿಗೆ ಆಂಬ್ಯುಲೆನ್ಸ್ ದಾದ ಎಂದೇ ಹೆಸರು ಬಂದಿದೆ. ತಮ್ಮ ತಾಯಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲು ಆಂಬ್ಯುಲೆನ್ಸ್ ಇಲ್ಲದ ಕಾರಣ ಅವರನ್ನು ಬದುಕಿಸಲಾಗದ ಹತಾಶೆಯ ನಂತರ ತಮ್ಮ ಬೈಕ್ ಅನ್ನೇ ಆಂಬ್ಯುಲೆನ್ಸ್ ಮಾಡಿಕೊಂಡವರು ಕರೀಮುಲ್ಲ. ಏಕಾಂಗಿಯಾಗಿ ಸುಮಾರು 3000ಕ್ಕೂ ಅಧಿಕ ಜೀವವನ್ನು ರಕ್ಷಿಸಿದ ಕೀರ್ತಿ ಇವರದು. ಧಾಲಾಬರಿಯ ಸುತ್ತಮುತ್ತ 20 ಹಳ್ಳಿಗಳಲ್ಲಿ ಇವರ ಬೈಕ್ ಜೀವನಾಡಿಯಾಗಿದೆ. ಬಡವರನ್ನು ಆಸ್ಪತ್ರೆಗೆ ತಮ್ಮ ಬೈಕ್ ನಲ್ಲಿ ಕರೆದೊಯ್ಯುವುದು ಮತ್ತು ತುರ್ತು ವೈದ್ಯಕೀಯ ಸಹಾಯವನ್ನೂ ನೀಡುತ್ತಾರೆ.

ಜೀನಾಬಾಯ್ ದರ್ಗಾಭಾಯ್ ಪಟೇಲ್ (52), ಗುಜರಾತ್

ಅನಾರ್ (ದಾಳಿಂಬೆ) ದಾದ ಎಂದೇ ಪ್ರಸಿದ್ಧಿ ಪಡೆದಿರುವ ಪಟೇಲ್ ವಿಶೇಷ ಚೇತನ ವ್ಯಕ್ತಿಯಾಗಿದ್ದು, ಬನಸ್ಕಂತ ಜಿಲ್ಲೆಯ ಬರಪೀಡಿತ ಗ್ರಾಮದಲ್ಲಿ ಶ್ರಮ ಹಾಕಿ ಬೆಳೆ ಬೆಳೆದಿರುವ ರೈತ. 2005ರಲ್ಲಿ ಆರಂಭಿಸಿದ ಕೃಷಿ ಪ್ರಯೋಗಗಳ ಮೂಲಕ ಈ ಜಿಲ್ಲೆಯನ್ನು ದೇಶದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ದಾಳಿಂಬೆ ಬೆಳೆಯುವ ಪ್ರದೇಶವನ್ನಾಗಿ ಪರಿವರ್ತಿಸಿದವರು ಪಟೇಲ್. ಶೇ. 100 ಹನಿ ನೀರಾವರಿ ಮೂಲಕ, ರೋಗ/ ಕೀಟಬಾಧೆಗಳಿಲ್ಲದೆ ಸಾವಯವ ಗೊಬ್ಬರ ಬಳಸಿ ಬೆಳೆ ತೆಗೆದವರು. ಸ್ಥಳೀಯ ತಂತ್ರಜ್ಞಾನವನ್ನೇ ಇತರರಿಗೂ ಹೇಳಿಕೊಟ್ಟು ಜ್ಞಾನವನ್ನು ಹಂಚಿ ಬೆಳೆಯ ಪ್ರಮಾಣವನ್ನು ಹಿಗ್ಗಿಸಿದವರು.

ಡಾ. ಸುಬ್ರತೋ ದಾಸ್ (51), ಗುಜರಾತ್

ಹೆದ್ದಾರಿ ರಕ್ಷಕ ಎಂದೇ ಖ್ಯಾತಿ ಪಡೆದಿರುವ ದಾಸ್ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತವಾದವರಿಗೆ ವೈದ್ಯಕೀಯ ವ್ಯವಸ್ಥೆಯನ್ನು ತಕ್ಷಣಕ್ಕೆ ಒದಗಿಸುವ ರಕ್ಷಕರಾಗಿದ್ದಾರೆ. ಸುಮಾರು 1200 ಗಾಯಾಳುಗಳನ್ನು ರಕ್ಷಿಸಿದ್ದಾರೆ. ಸ್ವತಃ ಅಪಘಾತಕ್ಕೀಡಾದ ಮೇಲೆ ಅವರು ಲೈಫ್ ಟೈಮ್ ಫೌಂಡೇಶನ್ ಅನ್ನು ಆರಂಭಿಸಿದರು. ಇಂದು ಅವರ ಸಂಘಟನೆ ಮಹಾರಾಷ್ಟ್ರ, ಕೇರಳ, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳಗಳ 4000 ಕಿ.ಮೀ. ಗಳಿಗೂ ಹೆಚ್ಚಿನ ವ್ಯಾಪ್ತಿಯ ಹೆದ್ದಾರಿ ಜಾಲದಲ್ಲಿ ತುರ್ತು ವೈದ್ಯಕೀಯ ಸೇವೆಯನ್ನು ಒದಗಿಸುತ್ತಿದೆ.

ಗಿರೀಶ್ ಭಾರದ್ವಾಜ್ (66), ಕರ್ನಾಟಕ

ಸೇತು ಬಂಧು ಎಂದೇ ಖ್ಯಾತರಾಗಿರುವ ಸಾಮಾಜಿಕ ಕಾರ್ಯಕರ್ತ ಗಿರೀಶ್ ಭಾರಧ್ವಾಜ್ ಸುಮಾರು ಕರ್ನಾಟಕ, ಕೇರಳ ಮತ್ತು ಆಂಧ್ರಪ್ರದೇಶಗಳಲ್ಲಿ 100ಕ್ಕೂ ಅಧಿಕ ಕಡಿಮೆ ವೆಚ್ಚದ ಪರಿಸರ ಸ್ನೇಹಿ ತೂಗು ಸೇತುವೆಗಳನ್ನು ಕಟ್ಟಿದ್ದಾರೆ. ದೇಶದಾದ್ಯಂತ ಅವರು ಕಟ್ಟಿದ ತೂಗುಸೇತುವೆಗಳು ಗ್ರಾಮೀಣ ಪ್ರದೇಶಗಳ ಸಂಪರ್ಕ ಸೇತುವಾಗಿವೆ. ಸಾಮಾನ್ಯ ಸ್ಟೀಲ್ ಸೇತುವೆಗೆ ಹೋಲಿಸಿದರೆ, ಇವರ ಸೇತುವೆ ನಿರ್ಮಾಣ ತಂತ್ರಜ್ಞಾನ ಅತೀ ಅಗ್ಗ. ಸಾಮಾನ್ಯ ಸೇತುವೆ 3 ವರ್ಷವಾದರೂ ಪೂರ್ಣವಾಗದೆ ಇದ್ದರೆ, ಇವರ ಸೇತುವೆ 3 ತಿಂಗಳಲ್ಲಿ ಸಿದ್ಧವಾಗುತ್ತದೆ.

ಕೃಪೆ: huffingtonpost.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News