ಆರ್ಎಸ್ಎಸ್ ಬೆಂಬಲಿತ ರ್ಯಾಲಿಯಲ್ಲಿ ಶಸ್ತ್ರಾಸ್ತ್ರ ಹಿಡಿದಿದ್ದ ಮಕ್ಕಳು: ವ್ಯಾಪಕ ಖಂಡನೆ
ಕೋಲ್ಕತಾ, ಎ.6: ಪಶ್ಚಿಮ ಬಂಗಾಲದ ವಿವಿಧೆಡೆ ಬುಧವಾರ ಆರ್ಎಸ್ಎಸ್ ಬೆಂಬಲಿತ ಸಂಘಟನೆಗಳ ಆಶ್ರಯದಲ್ಲಿ ನಡೆದ ರಾಮನವಮಿ ಉತ್ಸವದ ರ್ಯಾಲಿಯಲ್ಲ್ಲಿ ಶಸ್ತ್ರಾಸ್ತ್ರ ಹಿಡಿದುಕೊಂಡ ಮಕ್ಕಳು ಭಾಗವಹಿಸಿದ ಘಟನೆಯ ಬಗ್ಗೆ ರಾಜಕೀಯ ಪಕ್ಷಗಳಿಂದ ಹಾಗೂ ಬುದ್ದಿಜೀವಿಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಆರ್ಎಸ್ಎಸ್ ಮತ್ತು ಬಿಜೆಪಿ ಯಾವ ಸಂಸ್ಕೃತಿಯನ್ನು ಬಂಗಾಲದ ನೆಲಕ್ಕೆ ತರಲು ಯತ್ನಿಸುತ್ತಿವೆ . ಶಾಲಾ ಬಾಲಕರು ಖಡ್ಗ ಹಿಡಿದುಕೊಂಡು ಮೆರವಣಿಗೆ ನಡೆಸಿದ ಘಟನೆ ಬಂಗಾಲದ ಚರಿತ್ರೆಯಲ್ಲೇ ಇದುವರೆಗೆ ನಡೆದಿಲ್ಲ ಎಂದು ಆಳುವ ಟಿಎಂಸಿ ಮತ್ತು ವಿಪಕ್ಷವಾದ ಎಡಪಕ್ಷ ಪ್ರತಿಕ್ರಿಯಿಸಿದೆ.
ರಾಮನವಮಿ ಉಜಾಪನ್ ಸಮಿತಿ ಆಶ್ರಯದಲ್ಲಿ ಬುಧವಾರ ಪಶ್ಚಿಮ ಬಂಗಾಲದಾದ್ಯಂತ ನಡೆದಿದ್ದ ರಾಮನವಮಿ ಉತ್ಸವದ ಸಂದರ್ಭ 200ಕ್ಕೂ ಹೆಚ್ಚು ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಮತ್ತು ಅಪ್ರಾಪ್ತ ಬಾಲಕರು ಖಡ್ಗ ಮತ್ತು ಚೂರಿ ಹಿಡಿದುಕೊಂಡು ಪಾಲ್ಗೊಂಡಿದ್ದರು.
ಬಂಗಾಲದಲ್ಲಿ ಧಾರ್ಮಿಕ ಮೆರವಣಿಗೆಯ ಹೆಸರಿನಲ್ಲಿ ಮಕ್ಕಳು , ತಾಯಂದಿರು ಅಥವಾ ಬಾಲಕಿಯರು ಸಾರ್ವಜನಿಕ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತಿಲ್ಲ. ಯಾವುದೇ ಧರ್ಮ ಇದಕ್ಕೆ ಆಸ್ಪದ ನೀಡದು ಎಂದು ಸಿಪಿಐ(ಎಂ) ರಾಜ್ಯ ಘಟಕದ ಕಾರ್ಯದರ್ಶಿ ಸೂರ್ಯಕಾಂತ ಮಿಶ್ರಾ ಹೇಳಿದ್ದಾರೆ. ಅಧಿಕಾರದಲ್ಲಿರುವ ಟಿಎಂಸಿ ಪಕ್ಷ ಈ ಪ್ರಕರಣದಲ್ಲಿ ಆರ್ಎಸ್ಎಸ್ ಜೊತೆ ಕೈಜೋಡಿಸಿದೆ ಎಂದೂ ಅವರು ಆರೋಪಿಸಿದ್ದಾರೆ.