×
Ad

ನ್ಯಾಯಾಲಯದ ಮೊರೆ ಹೋದ ‘ಮಂಗಳಂ’ ಚಾನೆಲ್ ಪತ್ರಕರ್ತೆ ಶಶೀಂದ್ರನ್ ಹಲವು ಬಾರಿ ಪೀಡಿಸಿದ್ದರು: ಪತ್ರಕರ್ತೆ ಆರೋಪ

Update: 2017-04-06 22:43 IST

ತಿರುವನಂತಪುರಂ, ಎ.6: ಕೇರಳದ ಸಚಿವ ಶಶೀಂದ್ರನ್ ಅವರನ್ನು ‘ಮೋಹದ ಬಲೆ’ (ಹನಿ ಟ್ರಾಪಿಂಗ್) ಗೆ ಕೆಡವಿದ ಆರೋಪ ಎದುರಿಸುತ್ತಿರುವ ಮಹಿಳಾ ಪತ್ರಕರ್ತೆ ಇದೀಗ ನ್ಯಾಯಾಲಯದ ಮೊರೆಹೋಗಿದ್ದು, ಸಚಿವರು ತನ್ನನ್ನು ಹಲವು ಬಾರಿ ಪೀಡಿಸಿದ್ದು ಧಮಕಿಯನ್ನೂ ನೀಡಿದ್ದರು ಎಂದು ದೂರಿದ್ದಾರೆ.

ಸಚಿವರ ವಿರುದ್ಧ ದೂರು ದಾಖಲಿಸಲು ತಾನು ಮುಂದಾದಾಗ ತನ್ನ ಉದ್ಯೋಗದಾತ, ಮಂಗಳಂ ಟಿವಿ ಚಾನೆಲ್‌ನ ಸಿಇಒ ಹಾಗೆ ಮಾಡಿದರೆ ನೂತನವಾಗಿ ಆರಂಭಗೊಂಡಿರುವ ಟಿವಿ ಚಾನೆಲ್‌ಗೆ ತೊಂದರೆಯಾಗುತ್ತದೆ ಎಂದು ತನ್ನನ್ನು ತಡೆದಿದ್ದರು ಎಂದೂ ಅವರು ದೂರಿನಲ್ಲಿ ತಿಳಿಸಿದ್ದಾರೆ. ಮಂಗಳಂ ಟಿವಿಯ ತಿರುವನಂತಪುರಂ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪತ್ರಕರ್ತೆ ಬುಧವಾರ ಪ್ರಧಾನ ನ್ಯಾಯಿಕ ದಂಡಾಧಿಕಾರಿಯವರ ಕೋರ್ಟ್‌ನಲ್ಲಿ ದೂರು ಸಲ್ಲಿಸಿದ್ದಾರೆ.

 ಕೋರ್ಟ್‌ಗೆ ಸಲ್ಲಿಸಿರುವ ಐದು ಪುಟಗಳ ವಿವರಣೆಯಲ್ಲಿ ಈಕೆ ಪ್ರಕರಣದ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಟಿವಿ ಚಾನೆಲ್‌ನ ಸಿಬ್ಬಂದಿಗಳೊಂದಿಗೆ ಸಚಿವರ ಮನೆಗೆ ತೆರಳಿದ್ದು ನಾನೊಬ್ಬಳೇ ಒಳಗೆ ತೆರಳಿದ್ದೆ. ಆಗ ಶಶೀಂದ್ರನ್ ಕುರ್ಚಿಯೊಂದರಲ್ಲಿ ಕುಳಿತಿದ್ದು ತನ್ನ ಕಾಲನ್ನು ಎದುರಿಗಿದ್ದ ಮೇಜಿನ ಮೇಲಿಟ್ಟಿದ್ದರು. ನಾನು ಅವರೆದುರು ಕುಳಿತಾಗ ನನ್ನನ್ನೇ ದಿಟ್ಟಿಸಿ ನೋಡುತ್ತಾ- ನೀನು ತುಂಬಾ ಸುಂದರವಾಗಿದ್ದೀಯ. ನಿನ್ನ ವಯಸ್ಸೆಷ್ಟು ಎಂದು ಕೇಳಿದರು. ನಾನು 29 ವರ್ಷ ಎಂದುತ್ತರಿಸಿದಾಗ, ತನ್ನೊಡನೆ ವಿದೇಶ ಪ್ರವಾಸಕ್ಕೆ ಬರುವಂತೆ ಆಹ್ವಾನಿಸಿದರು. ಶ್ರೀಲಂಕಾದ ಬಗ್ಗೆ ಲೇಖನ ಸಿದ್ದಪಡಿಸಬಹುದು ಎಂದು ಆಮಿಷವೊಡ್ಡಿದರು.

 ಆದರೆ ನಾನು ಬಂದಿರುವುದು ಕೆಎಸ್‌ಆರ್‌ಟಿಸಿ ಲೇಖನದ ಹಿನ್ನೆಲೆಯಲ್ಲಿ ನಿಮ್ಮ ಸಂದರ್ಶನಕ್ಕಾಗಿ ಎಂದು ನಾನು ಹೇಳಿದಾಗ , ಪರವಾಗಿಲ್ಲ ನಾನು ಕಾಯುತ್ತೇನೆ ಎಂದವರು ಹೇಳಿದರು. ಆ ಬಳಿಕ ಎದ್ದು ಬಂದ ಸಚಿವರು, ತನ್ನ ಹೆಗಲಿನ ಮೇಲೆ ಕೈಯಿಟ್ಟು , ಸುಂದರ ಹುಡುಗಿ, ಏನು ಬೇಕಾದರೂ ಕೇಳು ಎಂದು ಹೇಳಿರುವುದಾಗಿ ಪತ್ರಕರ್ತೆ ದೂರಿನಲ್ಲಿ ವಿವರಿಸಿದ್ದಾರೆ. ಆ ಬಳಿಕ ಹಲವಾರು ಬಾರಿ ದೂರವಾಣಿ ಕೆ ಮಾಡಿ ಅಸಭ್ಯವಾಗಿ ಮಾತನಾಡಿದ್ದಾರೆ.

     ಈ ಬಗ್ಗೆ ಮಹಿಳಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದಾಗ ಚಾನೆಲ್‌ನ ಸಿಇಒ ಹಾಗೆ ಮಾಡದಂತೆ ತಡೆದರು. ತಮ್ಮ ಚಾನೆಲ್ ಆಗಷ್ಟೇ ಆರಂಭವಾಗಿರುವ ಕಾರಣ ಹಾಗೆ ಮಾಡಿದರೆ ಸಮಸ್ಯೆಯಾಗುತ್ತದೆ.ವಿಷಯದ ಬಗ್ಗೆ ತಾನು ಸಚಿವರೊಂದಿಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು. ಬಳಿಕ ಸಚಿವರಿಗೆ ದೂರವಾಣಿ ಕರೆ ಮಾಡಿ- ಪೊಲೀಸ್ ದೂರು ನೀಡುವುದಾಗಿ ತಿಳಿಸಿದ್ದೆ. ಆಗ ಕ್ಷಮಾಪಣೆ ಕೇಳಿದ ಸಚಿವರು, ದೂರು ನೀಡದಂತೆ ಕೋರಿಕೊಂಡರು. ಆದರೆ ಕೆಲ ದಿನದ ಬಳಿಕ ಮತ್ತೆ ತಮ್ಮ ಚಾಳಿ ಮುಂದುವರಿಸಿ ದೂರವಾಣಿ ಕರೆ ಮಾಡಿ ಅಸಭ್ಯವಾಗಿ ಮಾತು ಮುಂದುವರಿಸಿದರು. ನಾನು ಈ ಮಾುಗಳನ್ನು ರೆಕಾರ್ಡ್ ಮಾಡಿಕೊಂಡೆ.

ಸಚಿವರ ಅಶ್ಲೀಲ ಸಂಭಾಷಣೆ ಬಗ್ಗೆ ಸಹೋದ್ಯೋಗಿಗಳಿಗೆ ತಿಳಿಸಿ, ರೆಕಾರ್ಡ್ ಮಾಡಿಕೊಂಡಿದ್ದ ಸಂಭಾಷಣೆ ನೀಡಿದೆ. ಈ ಸಂಭಾಷಣೆಯನ್ನು ಚಾನೆಲ್‌ನಲ್ಲಿ ಪ್ರಸಾರ ಮಾಡುವಾಗ ನನ್ನನ್ನು ನೇರಪ್ರಸಾರದಲ್ಲಿ ತೋರಿಸಬೇಕು ಎಂದು ಕೋರಿಕೊಂಡಿದ್ದೆ. ಆದರೆ ನನ್ನ ಅನುಮತಿ ಪಡೆಯದೆ ಸಂಭಾಷಣೆಯನ್ನು ಪ್ರಸಾರ ಮಾಡಲಾಗಿದೆ ಎಂದು ಪತ್ರಕರ್ತೆ ಆರೋಪಿಸಿದ್ದಾರೆ.

  ತನ್ನ ಜೀವ ಅಪಾಯದಲ್ಲಿದ್ದು ರಕ್ಷಣೆಯ ಅಗತ್ಯವಿದೆ. ಮನೆಯಿಂದ ಹೊರಗೆ ಬರಲೂ ಆಗುತ್ತಿಲ್ಲ. ಆದ್ದರಿಂದಲೇ ದೂರು ದಾಖಲಿಸಲು ತಡವಾಯಿತು. ಸಚಿವರು ಪ್ರಭಾವಿಗಳಾಗಿರುವ ಕಾರಣ ಪೊಲೀಸ್ ದೂರು ಸಲ್ಲಿಸಲು ತಾನು ಬಯಸುತ್ತಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News