ಸಿನೆಮಾ ರಂಗಕ್ಕೂ ಕಾಲಿಟ್ಟ ಖ್ಯಾತ ಅನಿವಾಸಿ ಉದ್ಯಮಿ ಡಾ.ಬಿ.ಆರ್. ಶೆಟ್ಟಿ !

Update: 2017-04-10 16:10 GMT

ಬೆಂಗಳೂರು, ಎ.10: ದುಬೈನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಹೆಸರಾಂತ ಉದ್ಯಮಿ ಹಾಗೂ ಕನ್ನಡಿಗ ಪದ್ಮಶ್ರೀ ಡಾ. ಬಿ.ಆರ್. ಶೆಟ್ಟಿ ಇದೀಗ ಸಿನೆಮಾ ರಂಗಕ್ಕೂ ಪಾದಾರ್ಪಣೆ ಮಾಡಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿರುವ "ಮಾರ್ಚ್-22" ಚಲನಚಿತ್ರದ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದಾರೆ.

ಜೀವಜಲದ ಮಹತ್ವ ಮತ್ತು ಜಾಗೃತಿಯ ಸಂದೇಶ ಸಾರುವ "ಮಾರ್ಚ್-22" ಚಿತ್ರ ಪೂರ್ಣಗೊಂಡಿದ್ದು, ಸದ್ಯದಲ್ಲೇ ಬಿಡುಗಡೆಗೆಗೊಳ್ಳಲಿದೆ.  ಹಿರಿಯ ನಿರ್ದೇಶಕ ಕೂಡ್ಲು ರಾಮಕೃಷ್ಣ ನಿರ್ದೇಶನದ ಈ ಚಿತ್ರವನ್ನು ಮಂಗಳೂರು ಮೂಲದ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಹಾಗು ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಿಸಿದ್ದಾರೆ. 

ಡಾ. ಬಿ.ಆರ್. ಶೆಟ್ಟಿ ಹಾಡೊಂದರಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ವಿಶೇಷ. ಇನ್ನುಳಿದಂತೆ ಅನಂತ್‍ನಾಗ್, ಗೀತಾ ಜೊತೆ ಹಿರಿಯ ಕಲಾವಿದರಾದ ರಮೇಶ್ ಭಟ್, ಶರತ್ ಲೋಹಿತಾಶ್ವ, ಅಶೀಷ್ ವಿದ್ಯಾರ್ಥಿ, ಜೈಜಗದೀಶ್, ವಿನಯಾ ಪ್ರಸಾದ್, ಪದ್ಮಜಾ ರಾವ್  ಸೇರಿದಂತೆ ಹಲವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಆರ್ಯವರ್ಧನ್ ಮತ್ತು ಕಿರಣ್ ರಾಜ್ ನಾಯಕರಾಗಿ ಕಾಣಿಸಿಕೊಂಡಿದ್ದು, ಮೇಘಶ್ರೀ ಮತ್ತು ದೀಪ್ತಿ ಶೆಟ್ಟಿ ನಾಯಕಿಯರು. ಚಿತ್ರ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಮಾಧ್ಯಮದೊಂದಿಗೆ ಮುಖಾಮುಖಿಯಾಗಿತ್ತು. ತಮ್ಮ ಅನುಭವ ಹಾಗೂ ಸಿನೆಮಾದ ಬಗ್ಗೆ ಮೆಚ್ಚುಗೆಯನ್ನು ಅವರು ಮಾಧ್ಯಮದವರ ಮುಂದಿಟ್ಟರು. 

ನಿರ್ದೇಶಕ ಕೂಡ್ಲು ರಾಮಕೃಷ್ಣ ಮಾತನಾಡಿ, ಇದು ನನ್ನ 26ನೆ ಚಿತ್ರ. ಚಿತ್ರದಲ್ಲಿ ಅನಂತ್‍ನಾಗ್ ಮತ್ತು ಲಕ್ಷ್ಮಿ ಜೋಡಿ ಅಭಿನಯಿಸಲಿದ್ದಾರೆ ಎಂದು ಹೇಳಿದ್ದೆ. ಆದರೆ ಕಾರಣಾಂತರದಿಂದ ಲಕ್ಷ್ಮಿ ನಟಿಸಲು ಸಾಧ್ಯವಾಗಲಿಲ್ಲ. ಆ ಜಾಗಕ್ಕೆ ಮತ್ತೊಬ್ಬ ಹಿರಿಯ ನಟಿ ಗೀತಾ ಬಂದಿದ್ದಾರೆ. ಸದ್ಯ ಚಿತ್ರ ಸಂಪೂರ್ಣಗೊಂಡಿದೆ. ನೀರಿನ ಮಹತ್ವದ ಕುರಿತು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ. ಒಳ್ಳೆಯ ಚಿತ್ರವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಸಮಾಜಕ್ಕೊಂದು ಉತ್ತಮ ಸಂದೇಶ ನೀಡುವ ಉದ್ದೇಶದಿಂದ ಚಿತ್ರ ನಿರ್ಮಿಸಿದ್ದೇನೆ:  ಹರೀಶ್ ಶೇರಿಗಾರ್ 

ಚಿತ್ರದ ನಿರ್ಮಾಪಕ, ACME ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಹರೀಶ್ ಶೇರಿಗಾರ್ ಮಾತನಾಡಿ, ಚಿತ್ರ ನಿರ್ಮಾಣ ಮಾಡಿರುವುದು ಆಕಸ್ಮಿಕ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಸಮಾಜಕ್ಕೊಂದು ಸಂದೇಶ ನೀಡುವ ಉದ್ದೇಶದಿಂದ ಚಿತ್ರ ನಿರ್ಮಿಸಿದ್ದೇನೆ. ಮಾರ್ಚ್-22 "ವಿಶ್ವ ಜಲದಿನ". ನೀರಿನ ಬಗೆಗಿನ ಸಿನಿಮಾ ಆಗಿರುವುದರಿಂದ ಚಿತ್ರಕ್ಕೆ "ಮಾರ್ಚ್-22" ಎಂದು ಹೆಸರಿಡಲಾಗಿದೆ. ಜಾತಿ-ಮತ ಎಂದು ಏನೇನೋ ಕಟ್ಟುಪಾಡುಗಳನ್ನು ಮಾಡಿಕೊಂಡಿದ್ದೇವೆ. ಮನೆಯಿಂದ ಹೊರಗಡೆ ನಾವೆಲ್ಲಾ ಒಂದೇ. ಚಿತ್ರವನ್ನು ಜೂನ್ ತಿಂಗಳಲ್ಲಿ ತೆರೆಗೆ ತರುವ ಉದ್ದೇಶವಿದ್ದು, ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದರು.

ಐದು ನಿಮಿಷದ ಹಾಡಿನಲ್ಲಿ ಕಾಣಿಸಿಕೊಳ್ಳಲು ಐದು ಗಂಟೆ ಚಿತ್ರೀಕರಣದಲ್ಲಿ ಪಾಲ್ಗೊಂಡ ಬಿ.ಆರ್ ಶೆಟ್ಟಿ 

ಸುದ್ದಿಗೋಷ್ಠಿಯಲ್ಲಿ "ಮಾರ್ಚ್-22" ಶೀರ್ಷಿಕೆಯ ಪೆನ್ ಬಿಡುಗಡೆಗೊಳಿಸಿ ಮಾತನಾಡಿದ ಉದ್ಯಮಿ ಬಿ.ಆರ್ ಶೆಟ್ಟಿ, ಐದು ನಿಮಿಷದ ಹಾಡಿನಲ್ಲಿ ಕಾಣಿಸಿಕೊಳ್ಳಲು ಐದು ಗಂಟೆ  ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇನೆ. ಇದು ನಿಜಕ್ಕೂ ಸವಾಲಿನ ಕೆಲಸ. ಕಲಾವಿದರ ಶ್ರಮಕ್ಕೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು ಎಂದರು.

ಚಿತ್ರದ ವಿಷಯವಸ್ತು ಇಂದಿನ ಕಾಲಕ್ಕೆ ಹೆಚ್ಚು ಪ್ರಸ್ತುತವಾಗಿದೆ. ನೀರು ಹಿಂದೆಂದಿಗಿಂತಲೂ ಹೆಚ್ಚು ಮಹತ್ವದ್ದಾಗಿದೆ. ನೀರಿನ ಸಂರಕ್ಷಣೆ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಬೇಕು ಎಂದರು. 

ಮಹತ್ವದ ಸಂದೇಶ ಸಾರುವ ಚಿತ್ರದಲ್ಲಿ ನಟಿಸಿರುವುದು ಖುಷಿಯಾಗಿದೆ ಎಂದು 500ನೆ ಚಿತ್ರದಲ್ಲಿ ನಟಿಸುತ್ತಿರುವ ಹಿರಿಯ ನಟ ರಮೇಶ್ ಭಟ್ ಸಂತಸ ಹಂಚಿಕೊಂಡರು. ಈ ಸಂದರ್ಭ ನಟ ಶರತ್ ಲೋಹಿತಾಶ್ವ, ನಟಿ ಪದ್ಮಜಾ ರಾವ್, ನಟ ಆರ್ಯವರ್ಧನ್ ಮೊದಲಾದವರು ಉಪಸ್ಥಿತರಿದ್ದರು.

Writer - ಇಕ್ಬಾಲ್ ಉಚ್ಚಿಲ

contributor

Editor - ಇಕ್ಬಾಲ್ ಉಚ್ಚಿಲ

contributor

Similar News