ಕೇಜ್ರಿವಾಲ್ ವಿರುದ್ಧ ಬಂಧನಾದೇಶ
ಗುವಾಹಟಿ, ಎ.11: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತೊಂದು ಸಮಸ್ಯೆಗೆ ಸಿಲುಕಿದ್ದಾರೆ. ಕೇಜ್ರಿವಾಲ್ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ಅಸ್ಸಾಂನ ಸ್ಥಳೀಯ ನ್ಯಾಯಾಲಯ ಜಾಮೀನುರಹಿತ ವಾರಂಟ್ ಹೊರಡಿಸಿದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಶೈಕ್ಷಣಿಕ ಅರ್ಹತೆಯ ಬಗ್ಗೆ ಟ್ವಿಟರ್ನಲ್ಲಿ ಪ್ರತಿಕ್ರಿಯೆ ನೀಡಿದ್ದ ಕೇಜ್ರಿವಾಲ್, ಪ್ರಧಾನಮಂತ್ರಿ ಮೋದಿ ಕೇವಲ 12ನೆ ತರಗತಿ ಪಾಸಾಗಿದ್ದಾರೆ. ಅವರ ಡಿಗ್ರಿ ಪ್ರಮಾಣಪತ್ರ ನಕಲಿ ಎಂದು ಟ್ವೀಟ್ ಮಾಡಿದ್ದರು.
ನ್ಯಾಯಾಲಯದ ಮುಂದೆ ಹಾಜರಾಗಲು ಇನ್ನಷ್ಟು ಕಾಲಾವಕಾಶ ಕೋರಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಈ ಮೊದಲು ತಿರಸ್ಕರಿಸಿದ್ದರು.
ಮುಖ್ಯಮಂತ್ರಿಯ ವಕೀಲರು ಮತ್ತೊಮ್ಮೆ ಅರ್ಜಿ ಸಲ್ಲಿಸಿ ನ್ಯಾಯಾಲಯಕ್ಕೆ ಹಾಜರಾಗಲು ಕಾಲಾವಕಾಶ ಕೇಳಿದ್ದರು. ಇದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ ನ್ಯಾಯಾಲಯ ಜಾಮೀನು ವಾರಂಟ್ ಹೊರಡಿಸಿದೆ.
ದಿಲ್ಲಿ ಮುನ್ಸಿಪಾಲಿಟಿ ಚುನಾವಣೆಯ ಹಿನ್ನೆಲೆಯಲ್ಲಿ ನಮ್ಮ ಕಕ್ಷಿಗಾರರು ದಿಲ್ಲಿಯನ್ನು ಬಿಟ್ಟು ಹೋಗುವಂತಿಲ್ಲ ಎಂದು ಕೇಜ್ರಿವಾಲ್ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಬಿಜೆಪಿ ಮುಖಂಡ ಸುರಿಯ ರಾಂಗ್ಫಾರ್ ದೂರು ದಾಖಲಿಸಿದ್ದು, ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಮುಖ್ಯಮಂತ್ರಿ ಕೇಜ್ರಿವಾಲ್ ವಿರುದ್ದ 2016ರ ಡಿಸೆಂಬರ್ 26 ರಂದು ಐಪಿಸಿ ಸೆಕ್ಷನ್ 499/500/502 ಅಡಿ ಪ್ರಕರಣ ದಾಖಲಾಗಿದೆ