ಸೆಲ್ಫಿ ಗೀಳಿಗೆ ಮೂವರು ವಿದ್ಯಾರ್ಥಿಗಳ ಜೀವ ಬಲಿ
Update: 2017-04-14 06:17 GMT
ಕೊಲ್ಕತ್ತಾ, ಎ.14: ಚಲಿಸುತ್ತಿರುವ ರೈಲಿನ ಬಾಗಿಲಿನ ಬಳಿ ನಿಂತುಕೊಂಡು ವಿದ್ಯಾರ್ಥಿಗಳು ಸೆಲ್ಫಿ ತೆಗೆಯುತ್ತಿದ್ದ ವೇಳೆ ಅವರಲ್ಲೊಬ್ಬ ಲಿಲುವ ಹಾಗೂ ಬೇಲೂರು ರೈಲ್ವೇ ನಿಲ್ದಾಣದ ಮಧ್ಯೆ ಹಳಿಗೆ ಜಾರಿ ಬಿದ್ದು ಮೃತಪಟ್ಟಿದ್ದಾನೆ. ಇದೇವೇಳೆ ರೈಲು ನಿಧಾನಗೊಂಡಾಗ ಅದರಿಂದಿಳಿದು ತಮ್ಮ ಸ್ನೇಹಿತನನ್ನು ಹುಡುಕಿಕೊಂಡು ಹೊರಟ ನಾಲ್ಕು ವಿದ್ಯಾರ್ಥಿಗಳಲ್ಲಿ ಇಬ್ಬರು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಇನ್ನೊಂದು ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ಹೌರಾ ಜಿಲ್ಲೆಯಿಂದ ಇಂದು ವರದಿಯಾಗಿದೆ. ಗಾಯಗೊಂಡ ಇನ್ನಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಸಾಖಿ ಆಚರಣೆ ಮುಗಿಸಿಕೊಂಡು ವಿದ್ಯಾರ್ಥಿಗಳು ರೈಲಿನಲ್ಲಿ ಹಿಂದಿರುಗುತ್ತಿದ್ದಾಗ ಘಟನೆ ನಡೆದಿದೆ.
ಜನವರಿ ತಿಂಗಳಲ್ಲಿ ಕೊಯಂಬತ್ತೂರಿನಲ್ಲಿ ನಡೆದ ಘಟನೆಯೊಂದರಲ್ಲಿ ಸೆಲ್ಫಿ ತೆಗೆಯುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ವೇಗವಾಗಿ ಬರುತ್ತಿದ್ದ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ವರದಿಯಾಗಿತ್ತು.