ದಲಿತರ ಮದುವೆಯಲ್ಲಿ ‘ಬ್ಯಾಂಡ್ ಬಾಜಾ’ ಬಳಸಿದ್ದಕ್ಕೆ ಬಾವಿಯಲ್ಲಿ ಸೀಮೆಎಣ್ಣೆ ಸುರಿದರು!

Update: 2017-04-30 17:19 GMT

  ಭೋಪಾಲ,ಎ.30: ಮಧ್ಯಪ್ರದೇಶದ ಮಾಡಾ ಗ್ರಾಮದ ದಲಿತರು ಮದುವೆ ಯೊಂದನ್ನು ಸಂಭ್ರಮದಿಂದ ಮುಗಿಸಿ ವಾರ ಕಳೆಯುವಷ್ಟರಲ್ಲಿ ಆಘಾತವೊಂದು ಅವರಿ ಗಾಗಿ ಕಾದು ಕುಳಿತಿತ್ತು. ಪರಿಸರದ ಸುಮಾರು 500 ದಲಿತರಿಗೆ ನೀರಿನ ಏಕೈಕ ಆಸರೆಯಾಗಿರುವ ಬಾವಿ ನೀರಿನ ಬದಲು ಸೀಮೆಎಣ್ಣೆ ನೀಡತೊಡಗಿತ್ತು. ಗಾಬರಿ ಗೊಂಡ ದಲಿತರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಇದೀಗ ಬಾವಿಯಲ್ಲಿನ ಅಷ್ಟೂ ನೀರನ್ನು ಪಂಪ್ ಮಾಡಿ ಹೊರತೆಗೆಯಲಾಗಿದೆ. ಉದ್ದೇಶಪೂರ್ವಕವಾಗಿ ಬಾವಿಯಲ್ಲಿ ಸೀಮೆಎಣ್ಣೆ ಸುರಿಯಲಾಗಿದ್ದು, ಇದು ಚಂದರ್ ಮೇಘ್ವಾಲ್ ತನ್ನ ಪುತ್ರಿಯ ಮದುವೆ ಸಂದರ್ಭದಲ್ಲಿ ಮೇಲ್ಜಾತಿಗಳ ಕುಟುಂಬಗಳು ವಿಧಿಸಿದ್ದ ಕಟ್ಟುಪಾಡುಗಳನ್ನು ಉಲ್ಲಂಘಿಸಿದ್ದಕ್ಕೆ ಪ್ರತೀಕಾರದ ಕೃತ್ಯವಾಗಿದೆ ಎಂದು ದಲಿತರು ಆರೋಪಿಸಿದ್ದಾರೆ.

ಮೇಘ್ವಾಲ್ ಪುತ್ರಿ ಮಮತಾಳ ಮದುವೆ ಎ.23ರಂದು ನಡೆದಿತ್ತು. ಮದುಮಗ ಬ್ಯಾಂಡ್ ಸೆಟ್ ಸಹಿತ ಪೂರ್ಣ ಪ್ರಮಾಣದ ಮೆರವಣಿಗೆಯಲ್ಲಿ ಬೈಕ್ ಸವಾರಿ ಮಾಡಿಕೊಂಡು ಮದುವೆ ಮಂಟಪಕ್ಕೆ ಬಂದಿದ್ದ. ಈ ಪ್ರದೇಶದಲ್ಲಿ ಮದುವೆ ಮೆರವಣಿಗೆ ಮೇಲ್ಜಾತಿಗಳಿಗೆ ಮಾತ್ರ ಮೀಸಲಾಗಿದ್ದು, ದಲಿತರು ಅದನ್ನು ಕನಸಿನಲ್ಲಿಯೂ ನೆನೆಸುವಂತಿಲ್ಲ. ಆದರೆ ಮೇಲ್ಜಾತಿಗಳು ಹೇರಿದ್ದ ಕಟ್ಟುಪಾಡುಗಳನ್ನು ಉಲ್ಲಂಘಿಸಿದ್ದ ಮೇಘ್ವಾಲ್ ಊರಿನ ಮುಖ್ಯರಸ್ತೆಯ ಮೂಲಕವೇ ಮೆರವಣಿಗೆ ನಡೆಸಿ ಅವರ ಕೆಂಗಣ್ಣಿಗೆ ಗುರಿಯಾಗಿದ್ದ.

ಮುಖ್ಯಮಂತ್ರಿ ಶಿವರಾಜ ಸಿಂಗ್ ಅವರ ಸಂಪೂರ್ಣ ಒಪ್ಪಿಗೆಯೊಂದಿಗೆ ಈ ಮದುವೆ ನಡೆದಿದ್ದು, ಶಾಂತಿಭಂಗವಾಗಂತೆ ನೋಡಿಕೊಳ್ಳಲು ಭಾರೀ ಸಂಖ್ಯೆಯಲ್ಲಿ ಸಶಸ್ತ್ರ ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ ಅವರು ಅಲ್ಲಿಂದ ಮರಳಿದ ಎರಡೇ ದಿನಗಳಲ್ಲಿ ದಲಿತರ ವಿರುದ್ಧ ಪ್ರತೀಕಾರ ಆರಂಭಗೊಂಡಿತ್ತು.

 ‘ನಿಯಮಗಳನ್ನು ’ಉಲ್ಲಂಘಿಸಿದರೆ ಸಾರ್ವಜನಿಕ ಬಾವಿಯಿಂದ ನೀರು ಪಡೆಯಲು ಮೇಘ್ವಾಲ್ ಕುಟುಂಬಕ್ಕೆ ಅವಕಾಶ ನೀಡುವುದಿಲ್ಲ ಮತ್ತು ಅವರಿಗೆ ಸ್ಥಳೀಯ ದೇವಸ್ಥಾನದಲ್ಲಿ ಪ್ರವೇಶವನ್ನು ನಿಷೇಧಿಸಲಾಗುವುದು ಎಂದು ಮೇಲ್ಜಾತಿಗಳ ಕುಟುಂಬಗಳು ಸ್ಪಷ್ಟ ಎಚ್ಚರಿಕೆಯನ್ನು ನೀಡಿದ್ದವು. ಮೇಘ್ವಾಲ್ ಪುತ್ರಿಯ ಮದುವೆಗೆ ಇತರ ದಲಿತರು ಭಾರೀ ಬೆಂಬಲವನ್ನು ನೀಡಿದ್ದರಿಂದ ಪ್ರತೀಕಾರಕ್ಕೆ ಅವರನ್ನೂ ಗುರಿಯಾಗಿಸಿಕೊಳ್ಳಲಾಗಿದೆ.

ನಾವೆಲ್ಲ ಅದೇ ಬಾವಿಯನ್ನು ಅವಲಂಬಿಸಿದ್ದೆವು. ಅವರು ಅದರಲ್ಲಿ ಸೀಮೆಎಣ್ಣೆ ಸುರಿದಿದ್ದಾರೆ ಎಂದು ಮೇಘ್ವಾಲ್ ಹೇಳಿದ.

ಬಾವಿಯ ನೀರು ಕೆಟ್ಟಿದ್ದರಿಂದ ಗ್ರಾಮದ ದಲಿತ ಮಹಿಳೆಯರು ಎರಡು ಕಿ.ಮೀ. ದೂರದಲ್ಲಿರುವ ನದಿಯಿಂದ ನೀರನ್ನು ಹೊತ್ತು ತರುತ್ತಿದ್ದಾರೆ. ದಲಿತರ ಪ್ರದೇಶದಲ್ಲಿ ಎರಡು ಕೈಪಂಪ್‌ಗಳನ್ನು ಅಳವಡಿಸುವುದಾಗಿ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಭರವಸೆ ನೀಡಿದ್ದಾರಾದರೂ ಅದು ತಕ್ಷಣಕ್ಕೆ ಈಡೇರುವುದಿಲ್ಲ. ಅದಕ್ಕೆ ಸಮಯಾವಕಾಶ ಬೇಕು.

 ದಲಿತರಿಗೆ ರಕ್ಷಣೆ ಒದಗಿಸಲು ಗ್ರಾಮದಲ್ಲಿ ಮತ್ತೆ ಪೊಲೀಸರನ್ನು ನಿಯೋಜಿಸಲಾಗಿದೆಯಾದರೂ ಬಾವಿಗೆ ಸೀಮೆಎಣ್ಣೆ ಸುರಿದ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ, ತನಿಖೆಯೂ ಆರಂಭಗೊಂಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News