ಜೀವಮಾನದ ಉಳಿತಾಯ ಒಂದು ಕೋ.ರೂ.ಗಳನ್ನು ಸಶಸ್ತ್ರ ಪಡೆಗಳಿಗೆ ನೀಡಿದ ನಿವೃತ್ತ ಬ್ಯಾಂಕ್ ಸಿಬ್ಬಂದಿ
ಭಾವನಗರ(ಗುಜರಾತ್),ಮೇ 8: ಸೆಲೆಬ್ರಿಟಿಗಳು, ಕಾರ್ಪೊರೇಟ್ ಸಂಸ್ಥೆಗಳು ಮತ್ತು ಭಾರೀ ಶ್ರೀಮಂತರು ದಾನಧರ್ಮ ಮಾಡುವುದು ಸಾಮಾನ್ಯ ಮತ್ತು ಅದು ಮಾಧ್ಯಮ ಗಳಲ್ಲಿ ಭಾರೀ ಪ್ರಚಾರವನ್ನೂ ಪಡೆಯುತ್ತದೆ. ಆದರೆ ಇಲ್ಲಿಯ 84ರ ಹರೆಯದ ನಿವೃತ್ತ ಬ್ಯಾಂಕ್ ಸಿಬ್ಬಂದಿಯೋರ್ವರು ತನ್ನ ಇಡೀ ಜೀವಮಾನದ ಉಳಿತಾಯವಾದ ಬರೋಬ್ಬರಿ ಒಂದು ಕೋಟಿ ರೂ.ಗಳನ್ನು ರಾಷ್ಟ್ರೀಯ ರಕ್ಷಣಾ ನಿಧಿಗೆ ದಾನ ಮಾಡುವ ಮೂಲಕ ಜನರ ಭಾವನೆಗಳನ್ನು ಬಡಿದೆಬ್ಬಿಸಿದ್ದಾರೆ.
ಎಸ್ಬಿಐನ ನಿವೃತ್ತ ಉದ್ಯೋಗಿ ಜನಾರ್ಧನ ಭಟ್ ಅವರು ಗಡಿಯಲ್ಲಿ ಭಾರತೀಯ ಯೋಧರು ಹುತಾತ್ಮರಾಗುತ್ತಿರುವ ಮತ್ತು ಸೇನೆಯು ಎದುರಿಸುತ್ತಿರುವ ಪಾಕ್ ಪ್ರಾಯೋಜಿತ ಭಯೋತ್ಪಾದನೆಯ ಸವಾಲಿನ ಕುರಿತು ವರದಿಗಳನ್ನು ಓದಿದಾಗ ಸೇನೆಗಾಗಿ ತಾನೂ ಏನಾದರೂ ಮಾಡಬೇಕೆಂಬ ನಿರ್ಧಾರಕ್ಕೆ ಬಂದಿದ್ದರು. ಅವರ ಪತ್ನಿ ಕೂಡ ಇದಕ್ಕೆ ಧ್ವನಿಗೂಡಿಸಿದ್ದರು.
ಉದ್ಯೋಗದಲ್ಲಿದ್ದಾಗ ಸಾಕಷ್ಟು ಉಳಿತಾಯ ಮಾಡಿದ್ದ ಭಟ್, ವಿವಿಧ ಫಂಡ್ ಗಳಲ್ಲಿಯೂ ಆಗಾಗ್ಗೆ ಹೂಡಿಕೆಗಳನ್ನು ಮಾಡುತ್ತಿದ್ದರು. ಹೀಗಾಗಿ ನಿವೃತ್ತಿಯ ಬಳಿಕ ದೊಡ್ಡ ಗಂಟು ಅವರ ಕೈಸೇರಿತ್ತು. ಅವರ ಜೀವಮಾನದ ಉಳಿತಾಯದ ಮೊತ್ತ ಒಂದು ಕೋ.ರೂ.ಆಗಿದ್ದು,ಅಷ್ಟನ್ನೂ ರಾಷ್ಟ್ರೀಯ ರಕ್ಷಣಾ ನಿಧಿಗೆ ನೀಡಿದ್ದಾರೆ.
ಭಟ್ ತನ್ನ ಜೀವನವಿಡೀ ಇನ್ನೊಬ್ಬರಿಗೆ ನೆರವಾಗುತ್ತಲೇ ಬಂದಿದ್ದಾರೆ. ಯೂನಿಯನ್ ನಾಯಕನಾಗಿಯೂ ಅವರು ತನ್ನ ಸಹೋದ್ಯೋಗಿಗಳ ಹಲವಾರು ಸಮಸ್ಯೆಗಳನ್ನು ಬಗೆಹರಿ ಸಿದ್ದರು.