ನ್ಯಾಯಾಂಗ ನಿಂದನೆ:ಮಲ್ಯ ತಪ್ಪಿತಸ್ಥ
ಹೊಸದಿಲ್ಲಿ,ಮೇ 9: ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ತನ್ನ ಮಕ್ಕಳಿಗೆ 40 ಮಿ.ಡಾ.ಗಳನ್ನು ವರ್ಗಾವಣೆ ಮಾಡುವ ಮೂಲಕ ಉದ್ಯಮಿ ವಿಜಯ ಮಲ್ಯ ಅವರು ನ್ಯಾಯಾಂಗ ನಿಂದನೆಯ ತಪ್ಪಿತಸ್ಥರಾಗಿದ್ದಾರೆ ಎಂದು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಘೋಷಿಸಿದೆ.
ಈ ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣದ ಬಗ್ಗೆ ವಾದಿಸಲು ಜು.10ರಂದು ತನ್ನೆದುರು ಹಾಜರಾಗುವಂತೆ ಸರ್ವೋಚ್ಚ ನ್ಯಾಯಾಲಯವು ಮಲ್ಯಗೆ ನಿರ್ದೇಶ ನೀಡಿದೆ. ಬ್ಯಾಂಕುಗಳಿಗೆ 9,000 ಕೋ.ರೂ.ಗೂ ಅಧಿಕ ಸಾಲವನ್ನು ಬಾಕಿಯಿರಿಸಿರುವ ಮಲ್ಯ ಹಾಲಿ ಬ್ರಿಟನ್ನಲ್ಲಿ ವಾಸವಿದ್ದು, ಅವರ ಗಡೀಪಾರು ಪ್ರಕ್ರಿಯೆಯನ್ನು ತ್ವರಿತಗೊಳಿಸುಂತೆ ಭಾರತವು ಇತ್ತೀಚಿಗಷ್ಟೇ ಬ್ರಿಟನ್ನ್ನು ಕೋರಿಕೊಂಡಿದೆ.
ಬ್ರಿಟಿಷ್ ಸಂಸ್ಥೆ ಡಿಯಾಜಿಯೊದಿಂದ ಸ್ವೀಕರಿಸಿದ್ದ 40 ಮಿ.ಡಾ.ಗಳನ್ನು ತನ್ನ ಮಕ್ಕಳಿಗೆ ವರ್ಗಾಯಿಸುವ ಮೂಲಕ ಮಲ್ಯ ವಿವಿಧ ನ್ಯಾಯಾಂಗ ಆದೇಶಗಳನ್ನು ರಾಜಾರೋಷ ಉಲ್ಲಂಘಿಸಿದ್ದಾರೆ ಎಂದು ದೂರಿ ಬ್ಯಾಂಕುಗಳ ಒಕ್ಕೂಟವು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ದಂತೆ ನ್ಯಾಯಮೂರ್ತಿಗಳಾದ ಎ.ಕೆ.ಗೋಯೆಲ್ ಮತ್ತು ಯು.ಯು.ಲಲಿತ್ ಅವರನ್ನೊಳಗೊಂಡ ಪೀಠವು ಮಲ್ಯರನ್ನು ತಪ್ಪಿತಸ್ಥ ಎಂದು ಘೋಷಿಸಿತು.