×
Ad

ಮುಂಬೈ ಸ್ಫೋಟ ಪ್ರಕರಣದಿಂದ ಖುಲಾಸೆಗೊಂಡ ಶಿಕ್ಷಕನಿಂದ ಒಂಭತ್ತು ವರ್ಷಗಳ ಜೈಲುವಾಸದ ಕಥನ

Update: 2017-05-12 19:52 IST

ಮುಂಬೈ,ಮೇ 12: 2006ರಲ್ಲಿ ಸುಮಾರು 80 ದಿನಗಳ ಕಾಲ ಆಗಾಗ್ಗೆ ತನ್ನನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳುತ್ತಿದ್ದುದು ಮತ್ತು ಹಿಂಸಿಸುತ್ತಿದ್ದನ್ನು ಅದೇ ವರ್ಷದ ಜುಲೈನಲ್ಲಿ ಮುಂಬೈನಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟಗಳ ಮಾಮೂಲಿ ತನಿಖೆಯ ಭಾಗವೆಂದೇ ಶಾಲಾ ಶಿಕ್ಷಕ ಅಬ್ದುಲ್ ವಾಹಿದ್ ಶೇಖ್ ಭಾವಿಸಿದ್ದ. ಆದರೆ ಸೆ.29ರಂದು ಆಕಾಶವೇ ಕಳಚಿ ಆತನ ಮೇಲೆ ಬಿದ್ದಿತ್ತು. ಸರಣಿ ಸ್ಫೋಟಗಳ ಆರೋಪದಲ್ಲಿ ಶೇಖ್‌ನನ್ನು ಇತರ 12 ಜನರೊಂದಿಗೆ ಬಂಧಿಸಿ ಜೈಲಿಗೆ ತಳ್ಳಲಾಗಿತ್ತು.

 11 ವರ್ಷಗಳ ಬಳಿಕ ನ್ಯಾಯಾಲಯವು ಖುಲಾಸೆಗೊಳಿಸಿದ್ದರಿಂದ ಶೇಖ್(38) ಸ್ವತಂತ್ರ ಹಕ್ಕಿಯಾಗಿದ್ದಾನೆ. ತನ್ನ ಒಂಭತ್ತು ವರ್ಷಗಳ ಜೈಲುವಾಸ ಕುರಿತು ಪುಸ್ತಕ ವೊಂದನ್ನು ಆತ ರಚಿಸಿದ್ದಾನೆ. ತಾನು ಅನುಭವಿಸಿದ್ದ ಚಿತ್ರಹಿಂಸೆ, ಹುಚ್ಚು ಹಿಡಿಸುವಂತಿದ್ದ ಒಂಟಿತನ ಮತ್ತು ಪ್ರಕರಣದಲ್ಲಿ ತ್ವರಿತ ಯಶಸ್ಸನ್ನು ತೋರಿಸುವ ಕಾತುರದಲ್ಲಿರುವ ತನಿಖಾ ಸಂಸ್ಥೆಗಳಿಗೆ ತನ್ನಂಥ ಯುವಜನರನ್ನು ಸುಲಭದ ಮೇವನ್ನಾಗಿಸುವ ವ್ಯವಸ್ಥೆಯ ವ್ಯವಸ್ಥಿತ ದುರುಪಯೋಗ ಇವೆಲ್ಲವುಗಳನ್ನು ಶೇಖ್ ತನ್ನ ಪುಸ್ತಕದಲ್ಲಿ ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದ್ದಾನೆ.

ಬೆಂಗಳೂರಿನಲ್ಲಿಯ ಕಪಟ ಮಂಪರು ಪರೀಕ್ಷೆ (ನಾರ್ಕೋ ಅನಾಲಿಸಿಸ್), ವೈದ್ಯಕೀಯ ಪರೀಕ್ಷೆಗಳೇ ಅಲ್ಲವಾಗಿದ್ದ ‘ವೈದ್ಯಕೀಯ ಪರೀಕ್ಷೆಗಳು’, ಕೈಕಾಲುಗಳು ಮುರಿದಿದ್ದರೂ ಎಲ್ಲವೂ ಸರಿಯಾಗಿದೆ ಎನ್ನುವ ವೈದ್ಯಕೀಯ ಪ್ರಮಾಣಪತ್ರಗಳು ಇವೆಲ್ಲವುಗಳ ಬಗ್ಗೆ ತನ್ನ ‘ಬೇಗುನಾ ಕೈದಿ(ಅಮಾಯಕ ಕೈದಿ)’ ಪುಸ್ತಕದಲ್ಲಿ ಶೇಖ್ ಬರೆದಿದ್ದಾನೆ. ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನೆತ್ತುವ ಒಳಸಂಚುಗಳು, ಸುಳ್ಳು ಸಾಕ್ಷಗಳು ಮತ್ತು ಬ್ಲಾಕ್‌ಮೇಲ್‌ಗೊಳಗಾದ ಸಾಕ್ಷಿಗಳ ಪ್ರವರವನ್ನೇ ಆತ ಉಲ್ಲೇಖಿಸಿದ್ದಾನೆ.

ಸರಣಿ ಬಾಂಬ್ ಸ್ಫೋಟಗಳ ಆರೋಪ ಹೊತ್ತು ಜೈಲುಪಾಲಾಗಿದ್ದ 13 ಜನರ ಪೈಕಿ ಶೇಖ್ 2015ರಲ್ಲಿ ನ್ಯಾಯಾಲಯದಿಂದ ಖುಲಾಸೆಗೊಂಡಿರುವ ಏಕಮೇವ ಅದೃಷ್ಟಶಾಲಿ ಯಾಗಿದ್ದಾನೆ. ಇದೀಗ ಇತರ ಆರೋಪಿಗಳಿಗೂ ನ್ಯಾಯವನ್ನೊದಗಿಸಲು ಆತ ನಿರ್ಧರಿಸಿದ್ದಾನೆ. ಅವರು ಅಮಾಯಕರು ಎನ್ನುವುದು ಆತನಿಗೆ ಮನದಟ್ಟಾಗಿದೆ.

ಅವರು ನಮ್ಮ ಮೇಲೆ ಕಾನೂನುಬದ್ಧವಾಗಿ ಮತ್ತು ಅಕ್ರಮವಾಗಿಯೂ ಮಂಪರು ಪರೀಕ್ಷೆ ನಡೆಸುತ್ತಾರೆ. ಅಕ್ರಮ ಪರೀಕ್ಷೆಗೆ ಅವರು ಜೈಲಿನ ವೈದ್ಯರನ್ನು ಒಂದು ಕೋಣೆಗೆ ಕರೆಸಿ ನಮಗೆ ಯಾವುದೋ ಚುಚ್ಚುಮದ್ದು ಕೊಡಿಸಿ ಪ್ರಶ್ನೆಗಳನ್ನು ಕೇಳುತ್ತಾರೆ. ನಾವಂತೂ ಅಮಾಯಕರಾಗಿದ್ದೆವು. ಹೀಗಾಗಿ ಮಂಪರು ಪರೀಕ್ಷೆಯ ಸುದ್ದಿ ಕೇಳಿ ಆರಂಭದಲ್ಲಿ ನಾವು ಖುಷಿಯಾಗಿಯೇ ಇದ್ದೆವು. ಈಗಲಾದರೂ ನಾವು ಅಮಾಯಕರು ಎನ್ನುವ ಸತ್ಯ ಹೊರಬೀಳುತ್ತದೆ ಎಂದುಕೊಂಡಿದ್ದೆವು ಎಂದು ಶೇಖ್ ಹೇಳಿದ್ದಾನೆ.

ಆದರೆ ಸತ್ಯ ಮುಖ್ಯವೇ ಆಗಿರಲಿಲ್ಲ ಎಂದಿರುವ ಶೇಖ್, ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಡಾ.ಎಸ್.ಮಾಲಿನಿ (ಈಗ ವಜಾಗೊಂಡಿದ್ದಾರೆ)ಅವರು ಕಾನೂನುಬದ್ಧವಾಗಿಯೇ ನಮ್ಮ ಮೇಲೆ ನಡೆಸಿದ್ದ ಮಂಪರು ಪರೀಕ್ಷೆಯ ಸಿಡಿಗಳನ್ನು ತಿರುಚಲಾಗಿತ್ತು. ‘ಐದರ ನಂತರ ಯಾವುದು ಬರುತ್ತದೆ ’ಎಂದು ನನ್ನನ್ನು ಮಂಪರು ಪರೀಕ್ಷೆಯಲ್ಲಿ ಪ್ರಶ್ನಿಸಲಾಗಿತ್ತು. ಸಹಜವಾಗಿಯೇ ‘ಆರು ’ಎಂದು ನಾನು ಉತ್ತರಿಸಿದ್ದೆ. ಆದರೆ ಸಿಡಿಯಲ್ಲಿ ಈ ಪ್ರಶ್ನೆಯನ್ನು ‘ನಿನ್ನ ಮನೆಗೆ ಎಷ್ಟು ಪಾಕಿಸ್ತಾನಿಗಳು ಬಂದಿದ್ದರು’ ಎಂದು ಬದಲಿಸಲಾಗಿತ್ತು ಎಂದು ತಿಳಿಸಿದ್ದಾನೆ.

ಇನ್ನೋರ್ವ ಆರೋಪಿ ಸಾಜಿದ್‌ನನ್ನು ಮಂಪರು ಪರೀಕ್ಷೆಗೊಳಪಡಿಸಿದಾಗ ‘ಟಿವಿ ಹೇಗೆ ಕೆಲಸ ಮಾಡುತ್ತದೆ’ ಎಂದು ಪ್ರಶ್ನಿಸಲಾಗಿತ್ತು. ‘ರಿಮೋಟ್‌ನಿಂದ ’ಎಂದಾತ ಉತ್ತರಿಸಿದ್ದ. ಬಳಿಕ ಸಿಡಿಯಲ್ಲಿ ಈ ಪ್ರಶ್ನೆಯನ್ನು ‘ಬಾಂಬ್‌ಗಳನ್ನು ಹೇಗೆ ಸ್ಫೋಟಿಸ ಲಾಯಿತು’ ಎಂದು ಬದಲಿಸಲಾಗಿತ್ತು ಮತ್ತು ಸಾಜಿದ್ ನೀಡಿದ್ದ ಉತ್ತರ ಈ ಪ್ರಶ್ನೆಗೆ ಪರಿಪೂರ್ಣ ಉತ್ತರವಾಗಿತ್ತು ಎಂದೂ ಶೇಖ್ ಹೇಳಿದ್ದಾನೆ.

ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)ದ ಕಚೇರಿಗಳ ಒಳಗಿರುವ ‘ಟಾರ್ಚರ್ ಸೆಲ್’ಗಳ ಬಗ್ಗೆ ಶೇಖ್ ಉಲ್ಲೇಖಿಸಿರುವದು ಯಾರದೇ ಎದೆಯನ್ನಾದರೂ ಝಲ್ ಅನ್ನಿಸುತ್ತದೆ. ಸೌಂಡ್ ಪ್ರೂಫ್ ಆಗಿರುವ, ಏರ್‌ಕಂಡಿಷನರ್‌ಗಳನ್ನು ಅಳವಡಿಸಿರುವ ಈ ಕತ್ತಲು ಕೋಣೆಗಳು ನಿಜಕ್ಕೂ ನರಕವೇ ಸರಿ. ಈ ಕೋಣೆಗಳಲ್ಲಿ ಏಸಿಯ ಕಾರ್ಯಾಚರಣೆಯನ್ನು ಗರಿಷ್ಠವಾಗಿಸಿ ಕೈದಿಗಳನ್ನು ನಗ್ನವಾಗಿಸುತ್ತಾರೆ. ಅವರ ಎದೆತೊಟ್ಟುಗಳಿಗೆ ಮತ್ತು ಗುಪ್ತಾಂಗಗಳಿಗೆ ವಿದ್ಯುತ್ ಆಘಾತ ನೀಡಲಾಗುತ್ತದೆ. ಗುದದ್ವಾರದಲ್ಲಿ ಅಪಾಯಕಾರಿ ರಾಸಾಯನಿಕಗಳನ್ನು ತುರುಕಲಾಗುತ್ತದೆ ಎಂದು ಆತ ಬರೆದಿದ್ದಾನೆ.

ಅವರು (ಪೊಲೀಸರು) ಈಗಾಗಲೇ ಬೇರೆ ಪ್ರಕರಣಗಳಲ್ಲಿ ಸಿಕ್ಕಿ ಹಾಕಿಕೊಂಡವರಿಗೆ ಅದರಲ್ಲಿ ಪರಿಹಾರ ಕಲ್ಪಿಸುವ ಆಮಿಷ ತೋರಿಸಿ ಬಲವಂತದಿಂದ ನಮ್ಮಂತಹ ಕೈದಿಗಳ ವಿರುದ್ಧ ಸಾಕ್ಷಿಗಳನ್ನಾಗಿಸುತ್ತಾರೆ. 2001ರಲ್ಲೊಮ್ಮೆ ಸಿಮಿ ಸದಸ್ಯನಾಗಿದ್ದಕ್ಕೆ ನನ್ನನ್ನು ಬಂಧಿಸಲಾಗಿತ್ತು. ಆ ಪ್ರಕರಣದಲ್ಲಿ ನಾನು ಅದಾಗಲೇ ಬಿಡುಗಡೆಗೊಂಡಿದ್ದೆ. ನನ್ನ ನಿಕಟ ಸಂಬಂಧಿಯನ್ನೇ ನನ್ನ ವಿರುದ್ಧ ಸಾಕ್ಷಿಯನ್ನಾಗಿ ಅವರು ಬಳಸಿದ್ದರು. ಆದರೆ ಕೊನೇ ಘಳಿಗೆಯಲ್ಲಿ ಆತ ನ್ಯಾಯಾಲಯದಲ್ಲಿ ಪ್ರತಿಕೂಲ ಸಾಕ್ಷ ನುಡಿದಿದ್ದ. ಅಪ್ರೂವರ್ ಆಗು, ನೀನು ಪಾರಾಗುವಂತೆ ಮಾಡುತ್ತೇವೆ ಎಂದು ಅವರು ಹೇಳಿದ್ದರು. ಆದರೆ ನಾನು ನಿರಾಕರಿಸಿದ್ದೆ. ಈ ಹಿನ್ನೆಲೆಯಲ್ಲಿ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿಯೂ ತನ್ನನ್ನು ಸಿಕ್ಕಿಸಲಾಗಿತ್ತು ಎಂದು ಶೇಖ್ ಪುಸ್ತಕದಲ್ಲಿ ಹೇಳಿದ್ದಾನೆ.

ಪೊಲೀಸರ ಸಂಚುಗಳ ಬಗ್ಗೆ ಇತರ ಸಂಭಾವ್ಯ ಬಲಿಪಶುಗಳಿಗೆ ಎಚ್ಚರಿಕೆ ನೀಡಲು ಶೇಖ್ ನಿರ್ಧರಿಸಿದ್ದಾನೆ.

 ಜೈಲಿನಲ್ಲಿರುವಾಗ ಮಂಪರು ಪರೀಕ್ಷೆ ವೇಳೆ ಏನನ್ನೂ ಹೇಳಬೇಡ ಎಂದು ಕೈದಿಯೋರ್ವನಿಗೆ ನಾನು ತಿಳಿಸಿದ್ದೆ. ಸಕಾಲದಲ್ಲಿ ಎಚ್ಚರಿಕೆ ಲಭಿಸಿದ್ದರಿಂದ ಆತ ಕೇಳಿದ್ದ ಎಲ್ಲ ಪ್ರಶ್ನೆಗಳಿಗೂ ’ನನ್ನ ಹೆಸರು ಆರಿಫ್ ಮತ್ತು ನಾನು ಅಮಾಯಕ ’ಎಂಬ ಒಂದೇ ಉತ್ತರವನ್ನು ನೀಡಿದ್ದ. ಹೀಗಾಗಿ ಈ ಪರೀಕ್ಷೆಯನ್ನು ಆತನ ವಿರುದ್ಧ ಬಳಸಿಕೊಳ್ಳಲು ಅವರಿಗೆ ಸಾಧ್ಯವಾಗಿರಲಿಲ್ಲ. ಇಂತಹ ಜಾಗ್ರತಿಯನ್ನು ನನ್ನ ಪುಸ್ತಕದ ಮೂಲಕ ಮೂಡಿಸಲು ನಾನು ಬಯಸಿದ್ದೇನೆ ಎಂದು ಶೇಖ್ ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News