ರಾಜ್ ಪರಿವಾರದಲ್ಲಿ ಮತ್ತೊಂದು ಸಂಭ್ರಮ: ಈ ವಾರ ಬರಲಿದ್ದಾನೆ 'ಬಂಗಾರ'

Update: 2017-05-17 10:13 GMT

ಕೆಲದಿನಗಳ ಹಿಂದೆ ಬಿಡುಗಡೆಯಾದ ‘ರಾಜಕುಮಾರ’ ಚಿತ್ರ ಕನ್ನಡ ಚಿತ್ರರಂಗದ ಯಶಸ್ವಿ ಸಿನಿಮಾವಾಗಿ ಗಮನ ಸೆಳೆಯಿತು. ಈ ಚಿತ್ರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಿನಿಬದುಕಿಗೂ ಒಂದು ಯಶಸ್ಸಿನ ತಿರುವು ತಂದುಕೊಟ್ಟಿತು. ಇದೀಗ ದೊಡ್ಡ ಮನೆ ಪಾಲಿಗೆ ಮತ್ತೊಂದು ಸಡಗರದ ಸನ್ನಿವೇಶ ಎದುರಾಗಿದೆ.

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ‘ಬಂಗಾರ S/o ಬಂಗಾರದ ಮನುಷ್ಯ’ ಚಿತ್ರ ಸದ್ಯವೇ ತೆರೆಕಾಣಲಿದ್ದು, ಸಿನಿರಸಿಕರನ್ನು ಕಾತರದಿಂದ ಕಾಯುವಂತೆ ಮಾಡಿದೆ. ಅಂದ ಹಾಗೆ ಮೇ 19ರಂದು ಈ ಚಿತ್ರ ಪ್ರದರ್ಶನ ಆರಂಭಿಸಲಿದೆ.

ಪ್ರಸ್ತುತ ಟಗರು, ಲೀಡರ್ ಚಿತ್ರಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಶಿವರಾಜ್ ಕುಮಾರ್ ಅವರ ‘ಬಂಗಾರ S/o ಬಂಗಾರದ ಮನುಷ್ಯ’ ಚಿತ್ರ ತನ್ನೆಲ್ಲಾ ಪೋಸ್ಟ್ ಪ್ರೊಡಕ್ಷನ್ ಮುಗಿಸಿರುವ ಹಿನ್ನೆಲೆಯಲ್ಲಿ ಹೊಸ ಪರ್ವ ಕಾಲವನ್ನು ಎದುರು ನೋಡುತ್ತಿದ್ದಾರೆ.

‘ಬಂಗಾರ’  ಶಿವರಾಜ್ ಕುಮಾರ್ ಗೆ ಹೊಸ ಅನುಭವದ ಚಿತ್ರವಂತೆ. ಯಾಕೆಂದರೆ ತಮ್ಮ ತಂದೆ ಡಾ ರಾಜ್ ಕುಮಾರ್ ಅವರು ‘ಬಂಗಾರದ ಮನುಷ್ಯ’ ಚಿತ್ರದ ಮೂಲಕ ಖ್ಯಾತಿಯನ್ನು ಹೆಚ್ಚಿಸಿಕೊಂಡವರು. ಇದೀಗ ಅವರ ಮಗನಾಗಿರುವ ನನಗೆ ‘ಬಂಗಾರ S/o ಬಂಗಾರದ ಮನುಷ್ಯ’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು, ತಂದೆಗೆ ಸಿಕ್ಕಿರುವ ಗೌರವ ಈ ಚಿತ್ರಕ್ಕೂ ಸಿಗಲಿದೆ ಎಂಬುದು ಶಿವರಾಜ್ ಕುಮಾರ್ ವಿಶ್ವಾಸ. ಹಾಗಾಗಿಯೇ ತನ್ನೆಲ್ಲಾ ಚಿತ್ರದ ಸಡಗರಕ್ಕಿಂತಲೂ ಈ ಚಿತ್ರ ಬಿಡುಗಡೆಯ ಸಂಭ್ರಮವೇ ಶಿವರಾಜ್ ಕುಮಾರ್ ಪಾಲಿಗೆ ಮಹತ್ವದ್ದು. ಎಪ್ರಿಲ್ ತಿಂಗಳಲ್ಲೇ ‘ಬಂಗಾರ S/o ಬಂಗಾರದ ಮನುಷ್ಯ’ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಪೋಸ್ಟ್ ಪ್ರೊಡಕ್ಷನ್ ಗೆ ಅಡ್ಡಿಯಾದ ಹಿನ್ನೆಲೆಯಲ್ಲಿ ಈ ಚಿತ್ರವನ್ನು ಪರಿಪೂರ್ಣಗೊಳಿಸುವಲ್ಲಿ ಸ್ಪಲ್ಪ ವಿಳಂಬವಾಯಿತಂತೆ. ಇದೀಗ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ಜಯಣ್ಣ ಭೋಗೇಂದ್ರ ನಿರ್ಮಾಣದ ಈ ಚಿತ್ರದ ವಿತರಣೆಯ ಹೊಣೆಗಾರಿಕೆಯನ್ನು ಜಯಣ್ಣ ಕಂಬೈನ್ಸ್ ವಹಿಸಿಕೊಂಡಿದೆ. ಬಂಗಾರ ಪಾತ್ರದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದರೆ, ಖ್ಯಾತ ತಮಿಳುನಟಿ ವಿದ್ಯಾ ಪ್ರದೀಪ್ ನಾಯಕಿ ಪಾತ್ರವನ್ನು ನಿಭಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News