ಕ್ಯಾನ್ಸರ್ ಚಿಕಿತ್ಸೆಗಾಗಿ ತಂದೆಯ ಬಳಿ ಹಣ ಬೇಡಿದ 13ರ ಹರೆಯದ ಬಾಲಕಿ
ವಿಜಯವಾಡಾ(ಆಂಧ್ರಪ್ರದೇಶ),ಮೇ 17: ‘‘ಡ್ಯಾಡಿ, ದಯವಿಟ್ಟು ಏನಾದರೂ ಮಾಡಿ ಮತ್ತು ನನ್ನನ್ನು ಉಳಿಸಿ ’’ ಇದು ಅತ್ಯಂತ ಹೃದಯವಿದ್ರಾವಕ ವೀಡಿಯೊವೊಂದರಲ್ಲಿ 13ರ ಹರೆಯದ ಬಾಲಕಿಯೋರ್ವಳು ತನ್ನ ಕ್ಯಾನ್ಸರ್ ಚಿಕಿತ್ಸೆಗಾಗಿ ಹಣ ನೀಡುವಂತೆ ತನ್ನ ತಂದೆಯನ್ನು ಬೇಡಿಕೊಂಡ ಪರಿ. ಸಾಯಿಶ್ರೀ ರವಿವಾರ ವಿಜಯವಾಡಾದಲ್ಲಿ ಕೊನೆಯುಸಿರೆಳೆದಿದ್ದಾಳಾದರೂ ಆನಲೈನ್ನಲ್ಲಿ ವ್ಯಾಪಕವಾಗಿ ಶೇರ್ ಆಗಿರುವ ವೀಡಿಯೊದ ಮೂಲಕ ಆಕೆಯ ನೋವು ತುಂಬಿದ್ದ ಧ್ವನಿಯನ್ನು ಸಾವಿರಾರು ಜನರು ಕೇಳುತ್ತಿದ್ದಾರೆ.
ಸಾಯಿಶ್ರೀಯ ಹೆತ್ತವರು ಕಳೆದ ಎಂಟು ವರ್ಷಗಳಿಂದ ಪರಸ್ಪರ ದೂರವಾಗಿದ್ದು, ಈಕೆ ತನ್ನ ತಾಯಿಯೊಂದಿಗೆ ವಾಸವಾಗಿದ್ದಳು. ವಾಟ್ಸಾಪ್ ಮೂಲಕ ಕಳುಹಿಸಿದ್ದ ವೀಡಿಯೊದಲ್ಲಿ ತನ್ನ ಚಿಕಿತ್ಸೆಗಾಗಿ ಹಣದ ವ್ಯವಸ್ಥೆ ಮಾಡಲು ತನ್ನ (ಸಾಯಿಶ್ರೀ) ಹೆಸರಿನಲ್ಲಿರುವ ತನ್ನ ಮನೆಯನ್ನು ಮಾರಾಟಮಾಡುವಂತೆ ತಂದೆ ಶೆಟ್ಟಿ ಶಿವಕುಮಾರ್ನನ್ನು ಬಾಲಕಿ ಅತ್ಯಂತ ದಯನೀಯವಾಗಿ ಬೇಡಿಕೊಂಡಿದ್ದಳು. ಆಕೆಯ ತಾಯಿ ಮಗಳ ಚಿಕಿತ್ಸೆಗಾಗಿ ಮನೆಯನ್ನು ಮಾರಾಟ ಮಾಡಲು ಯತ್ನಿಸಿದ್ದಳಾದರೂ ತಂದೆ ಅದಕ್ಕೆ ಅಡ್ಡಗಾಲು ಹಾಕಿದ್ದ, ಅಷ್ಟೇ ಅಲ್ಲ..... ರಾಜಕಾರಣಿಯೋರ್ವನ ನೆರವಿನಿಂದ ತನ್ನ ಪರಿತ್ಯಕ್ತ ಕುಟುಂಬವನ್ನು ಮನೆಯಿಂದ ಹೊರಗೆ ದಬ್ಬಿದ್ದ.
ಸಾಯಿಶ್ರೀ ಕ್ಯಾನ್ಸರ್ ಪೀಡಿತಳಾಗಿರುವುದು ಕಳೆದ ವರ್ಷದ ಆಗಸ್ಟ್ನಲ್ಲಿ ಪತ್ತೆಯಾಗಿತ್ತು. ಆಕೆಯನ್ನು ಬದುಕಿಸಲು ಅಸ್ಥಿಮಜ್ಜೆ ಕಸಿ ಮಾಡುವುದೊಂದೇ ದಾರಿ ಎಂದು ವೈದ್ಯರು ತಾಯಿ ಸುಮಾಶ್ರೀಗೆ ತಿಳಿಸಿದ್ದರು.
ಮನಸ್ಸಿಗೆ ಅತ್ಯಂತ ನೋವನ್ನುಂಟು ಮಾಡುವ ವೀಡಿಯೊದಲ್ಲಿ ಸಾಯಿಶ್ರೀ ತನ್ನ ತೋಳುಗಳು ಮತ್ತು ಕಾಲುಗಳು ಬಾತುಕೊಂಡಿರುವುದನ್ನು ಮತ್ತು ಗಾಯಗಳಾಗಿರುವು ದನ್ನು ತಂದೆಗೆ ತೋರಿಸುತ್ತ, ತಾನು ತೀವ್ರ ನೋವನ್ನು ಅನುಭವಿಸುತ್ತಿದ್ದೇನೆ ಎಂದು ಸಂಕಟವನ್ನು ತೋಡಿಕೊಂಡಿದ್ದಾಳೆ.
‘‘ಡ್ಯಾಡಿ, ನಿಮ್ಮ ಬಳಿ ಹಣವಿಲ್ಲವೆದು ಹೇಳುತ್ತಿದ್ದೀರಿ. ನಮ್ಮ ಬಳಿ ಕನಿಷ್ಠ ಈ ಮನೆಯಿದೆ. ದಯವಿಟ್ಟು ಅದನ್ನು ಮಾರಾಟ ಮಾಡಿ ನನ್ನ ಚಿಕಿತ್ಸೆಗೆ ಹಣ ಕೊಡಿ. ಇಲ್ಲದಿದ್ದರೆ ನಾನು ಹೆಚ್ಚು ಕಾಲ ಬದುಕಿರುವುದಿಲ್ಲ. ಡಾಕ್ಟರ್ರು ಹೀಗೆ ಹೇಳಿದ್ದಾರೆ ’’ ಎಂದು ಅಳುತ್ತಲೇ ಸಾಯಿಶ್ರೀ ಹೇಳಿದ್ದಾಳೆ.
‘‘ಎಷ್ಟೋ ತಿಂಗಳುಗಳಿಂದ ನಾನು ಶಾಲೆಗೆ ಹೋಗಿಲ್ಲ. ನಾನು ನನ್ನ ಗೆಳತಿಯರ ಜೊತೆಗೆ ಆಡಲು ಬಯಸಿದ್ದೇನೆ ಡ್ಯಾಡಿ. ನಾನು ಶಾಲೆಗೆ ಹೋಗಬೇಕು, ಪರೀಕ್ಷೆಗೆ ಕುಳಿತುಕೊಳ್ಳ ಬೇಕು. ನಾನು ಡಾಕ್ಟರ್ ಆಗಲು ಬಯಸಿದ್ದೇನೆ,ಡ್ಯಾಡಿ ’’ಎಂದು ಸಾಯಿಶ್ರೀ ಗೋಳಿಟ್ಟಿರುವುದನ್ನು ನೋಡಿದರೆ ಎಂತಹ ಕಲ್ಲು ಹೃದಯವಾದರೂ ಕರಗಲೇಬೇಕು. ಆದರೆ ತಂದೆ ಶೆಟ್ಟಿ ಶಿವಕುಮಾರ್ನ ಹೃದಯ ಮಾತ್ರ ಕರಗಲೇ ಇಲ್ಲ.
ಸಾಮಾಜಿಕ ಕಾರ್ಯಕರ್ತರೋರ್ವರ ದೂರಿನ ಮೇರೆಗೆ ಆಂಧ್ರಪ್ರದೇಶ ರಾಜ್ಯ ಮಾನವ ಹಕ್ಕುಗಳ ಆಯೋಗವು ಶಿವಕುಮಾರ್ ತನ್ನ ಮಗಳನ್ನು ನಿರ್ಲಕ್ಷಿಸಿದ ತಪ್ಪೆಸಗಿದ್ದನೇ ಎಂಬ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶಿಸಿದೆ.
ತನ್ನ ಮಗಳ ಚಿಕಿತ್ಸೆಗೆ ಹಣ ಖರ್ಚು ಮಾಡುವ ಸಾಮರ್ಥ್ಯ ಶಿವಕುಮಾರ್ಗೆ ಇತ್ತಾದರೂ ಆತ ಅದಕ್ಕೆ ನಿರಾಕರಿಸಿದ್ದ ಎಂದು ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ.
ಸುಮಾಶ್ರೀ ಮಗಳ ಚಿಕಿತ್ಸೆಗಾಗಿ 30 ಲ.ರೂ.ಗಳನ್ನು ವ್ಯಯಿಸಿದ್ದರಾದರೂ, ಸಾಯಿಶ್ರೀ ಯನ್ನು ಕಾಡುತ್ತಿದ್ದ ಕ್ಯಾನ್ಸರ್ಗೆ ಅದು ಸಾಕಷ್ಟು ಸೂಕ್ತ ಚಿಕಿತ್ಸೆಯಾಗಿರಲಿಲ್ಲ ಎನ್ನಲಾಗಿದೆ.