"ರಾಬ್ತಾ" ಬಿಡುಗಡೆಗೆ ಅಡ್ಡಗಾಲಿಟ್ಟ "ಮಗಧೀರ" ಚಿತ್ರತಂಡ
ಬೆಂಗಳೂರು, ಮೇ 25: ಇತ್ತೀಚಿನ ದಿನಗಳಲ್ಲಿ ಚಿತ್ರರಂಗ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಾಗುತ್ತಿದ್ದು, ಇದೀಗ ಹೊಸ ವಿವಾದವೊಂದು ಹಿಂದಿ ಚಿತ್ರವಾದ "ರಾಬ್ತಾ"ಗೆ ಕಗ್ಗಂಟಾಗಿ ಪರಿಣಮಿಸಿದೆ.
ಕೆಲ ವರ್ಷಗಳ ಹಿಂದೆ ಬಿಡುಗಡೆಗೊಂಡು ಸೂಪರ್ ಹಿಟ್ ಆಗಿದ್ದ ರಾಜಮೌಳಿ ನಿರ್ದೇಶನದ "ಮಗಧೀರ" ಚಿತ್ರದ ನಿರ್ಮಾಪಕರು, "ರಾಬ್ತಾ" ಚಿತ್ರತಂಡವು "ಮಗಧೀರ" ಚಿತ್ರದ ಕಥೆಯನ್ನು ಕದ್ದಿದೆ ಎಂದು ಆರೋಪ ಹೊರಿಸಿದ್ದು, ಕಾನೂನು ಸಮರ ಕೈಗೊಂಡಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಹಾಗೂ ಕೃತಿ ಸನೋನ್ ಕಾಂಬಿನೇಶನ್ನಲ್ಲಿ ಮೂಡಿಬಂದಿರುವ 'ರಾಬ್ತಾ' ಇನ್ನೇನು ತೆರೆ ಕಾಣಬೇಕು ಎನ್ನುವಷ್ಟರಲ್ಲಿ 'ಮಗಧೀರ' ತಂಡದ ಕಾನೂನು ಸಮರ ಚಿತ್ರತಂಡಕ್ಕೆ ತಲೆನೋವಾಗಿದೆ. 'ಮಗಧೀರ' ಚಿತ್ರದ ನಿರ್ಮಾಪಕ ಅಲ್ಲು ಅರವಿಂದ್ ಹಾಗೂ ಬಿವಿಎಸ್ಎನ್ ಪ್ರಸಾದ್ ಹೈದರಾಬಾದ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಪೈರಸಿ ಕಾಯ್ದೆಯನ್ವಯ ಈ ಕಾನೂನು ಹೋರಾಟ ಸಾಗಿದ್ದು, 'ಮಗಧೀರ' ಸಲ್ಲಿಸಿದ್ದ ಅರ್ಜಿ ಕುರಿತಂತೆ ಜೂನ್ 1ರಂದು ಸಿಟಿ ಸಿವಿಲ್ ಕೋರ್ಟ್ ತೀರ್ಮಾನವನ್ನು ಪ್ರಕಟಿಸಲಿದೆ.