ಸುದೀಪ್ ಗೆ ಸಂಕಷ್ಟ: ಆಗಸ್ಟ್ 24ರಂದು ಕೋರ್ಟ್ ತೀರ್ಪು ಏನಾಗುತ್ತೋ?

Update: 2017-06-16 05:06 GMT

ಕನ್ನಡ ಚಿತ್ರರಂಗದ 'ಅಭಿನವ ಭಾರ್ಗವ' ಎಂದೇ ಹೆಸರಾಗಿರುವ ಕಿಚ್ಚ ಸುದೀಪ್ ಬಗ್ಗೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ಗರಂ ಆಗಿದೆ. ಪತ್ನಿ ಜೊತೆಗಿನ ದಾಂಪತ್ಯಕ್ಕೆ ತೆರೆ ಎಳೆಯುವ ಸಂಬಂಧ 2015ರಲ್ಲಿ ಸುದೀಪ್ ವಿಚ್ಛೇದನೆ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪತಿ-ಪತ್ನಿ ಇಬ್ಬರೂ ವಿಚ್ಛೇದನೆಗೆ ಸಹಮತ ವ್ಯಕ್ತಪಡಿಸಿದ್ದರೂ ವಿಚಾರಣೆ ಸಾಗಿತ್ತು. ಆದರೆ ಯಾವಾಗ ದಾವೆ ಹೂಡಿದ್ದರೋ ಅಂದಿನಿಂದ ಇಂದಿನವರೆಗೂ ಈ ದಂಪತಿ ಕೋರ್ಟ್ ಗೆ ಹಾಜರಾಗಿಲ್ಲ. ಸತತ 8 ಬಾರಿ ವಿಚಾರಣೆಗೆ ದಿನಾಂಕ ನಿಗದಿಯಾಗಿದ್ದರೂ, ಈ ದಂಪತಿ ಒಮ್ಮೆಯೂ ನ್ಯಾಯಾಧೀಶರ ಮುಂದೆ ಪ್ರತ್ಯಕ್ಷವಾಗಿಲ್ಲ.

ಗುರುವಾರದಂದು ಮತ್ತೊಮ್ಮೆ ವಿಚಾರಣೆ ನಿಗದಿಯಾಗಿದ್ದರೂ ವಿದೇಶ ಪ್ರವಾಸದಲ್ಲಿದ್ದುದರಿಂದ ಸುದೀಪ್ ವಿಚಾರಣೆಗೆ ಹಾಜರಾಗಿಲ್ಲ. ಇದರಿಂದ ಅಸಮಾಧಾನಗೊಂಡಿರುವ ನ್ಯಾಯಾಧೀಶರು ಸುದೀಪ್ ದಂಪತಿಯ ವಕೀಲರನ್ನು ಖಾರವಾಗಿಯೇ ಪ್ರಶ್ನಿಸಿದ್ದಾರೆ. 

ಈವರೆಗೂ ವಿಚಾರಣೆಗೆ ಹಾಜರಾಗದ ಸುದೀಪ್ ದಂಪತಿ ಮುಂಬರುವ ವಿಚಾರಣೆ ವೇಳೆ ಖುದ್ದು ಹಾಜರಿರಲೇಬೇಕು ಎಂದು ಹೇಳಿ ವಿಚಾರಣೆಯನ್ನು ಆಗಸ್ಟ್ 24ಕ್ಕೆ ಮುಂದೂಡಿದ್ದಾರೆ. ಇದೇ ವೇಳೆ ಸುದೀಪ್ ದಂಪತಿ ವಿಚ್ಛೇದನೆ ನಿರ್ಧಾರವನ್ನು ಕೈಬಿಟ್ಟು ರಾಜಿ ಸಂಧಾನ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.  ಈ ಬಗ್ಗೆ ಸೂಚನೆಯನ್ನು ನೀಡಿರುವ ನ್ಯಾಯಾಧೀಶರು ಸುದೀಪ್ ದಂಪತಿ ರಾಜಿ ಸಂಧಾನ ಮಾಡಿಕೊಂಡಿದ್ದರೆ ಈ ಸಂಗತಿಯನ್ನು ನ್ಯಾಯಾಲಯದ ಗಮನಕ್ಕೆ ತರಬೇಕು. ಇಲ್ಲದಿದ್ದರೆ ತಾವೇ ಸೂಕ್ತ ಆದೇಶ ಹೊರಡಿಸುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News