ಮುಂಬೈನಾದ್ಯಂತ 40 ಸಾವಿರ ಗಿಡ ನೆಡಲಿರುವ ದಾವೂದಿ ಬೊಹ್ರಾ ಸಮುದಾಯ
ಮುಂಬೈ, ಜೂ.18: ಕೈಗಾರಿಕೆಗಳು ಸೇರಿದಂತೆ ವಿವಿಧ ಉದ್ದಿಮೆಗಳ ಬೆಳವಣಿಗೆಗಳಿಂದ ಮರಗಳನ್ನು ಕಳೆದುಕೊಳ್ಳುತ್ತಿರುವ ಮುಂಬೈಯಲ್ಲಿ ರಮಝಾನ್ ತಿಂಗಳೊಳಗಾಗಿ 40 ಸಾವಿರ ಗಿಡಗಳನ್ನು ನೆಡಲು ದಾವೂದಿ ಬೊಹ್ರಾ ಸಮುದಾಯ ಮುಂದಾಗಿದೆ.
ಹೋರ್ನಿಮಾನ್ ಸರ್ಕಲ್, ಮಝ್ಗಾಂವ್ ನ ತಮ್ಮ ಸಮುದಾಯದ ಮಸೀದಿ ಹಾಗೂ ಮನೆಗಳು, ಮುಹಮ್ಮದ್ ಅಲಿ ರಸ್ತೆ,ಮಲಬಾರ್ ಹಿಲ್ ಹಾಗೂ ಅಂಧೇರಿಗಳಲ್ಲಿ ಈಗಾಗಲೇ ಸಸಿಗಳನ್ನು ನೆಡಲಾಗಿದೆ.
“ಗಿಡಗಳನ್ನು ನೆಡಲು ಸಮುದಾಯದ ಮಂದಿಯನ್ನು ಉತ್ತೇಜಿಸಲಾಗುತ್ತಿದೆ. ಪವಿತ್ರ ರಮಝಾನ್ ತಿಂಗಳು ಭಕ್ತಿ, ಪ್ರಾರ್ಥನೆ ಹಾಗೂ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವ ತಿಂಗಳಾಗಿದೆ. ಇಂತಹ ಕಾರ್ಯಗಳಿಂದ ಪರಿಸರ ಸಂರಕ್ಷಣೆ ಸಾಧ್ಯವಿದೆ” ಎಂದು ಬುರ್ಹಾನಿ ಫೌಂಡೇಶನ್ ನ ಟ್ರಸ್ಟಿ ತೈಖೂಮ್ ಭಾಯ್ ಸಾಹೇಬ್ ಮುಹಿಯುದ್ದೀನ್ ಹೇಳಿದ್ದಾರೆ.
ಈ ಕಾರ್ಯ ಧಾರ್ಮಿಕ ಗುರು ಸಯ್ಯದಿನಾ ಮುಫದ್ದಲ್ ಸೈಫುದ್ದೀನ್ ರ ಕನಸಿನ ಕೂಸಾಗಿದೆ. ಜಗತ್ತಿನಾದ್ಯಂತ 2 ಲಕ್ಷ ಗಿಡಗಳನ್ನು ನೆಟ್ಟು ಅವುಗಳಿಗೆ ಸಂಖ್ಯೆ ಹಾಗೂ ಬಾರ್ ಕೋಡ್ ಲಗತ್ತಿಸುವ ಯೋಜನೆ ಅವರದ್ದಾಗಿದೆ.
ಪುಣೆ, ನಾಸಿಕ್, ಲೋನ್ ವಾಲಾ, ಖೋಲಾಪುರ್, ಪಾಲ್ಘರ್ ಹಾಗೂ ದಹಾನುಗಳಲ್ಲಿ ಗಿಡಗಳನ್ನು ನೆಡಲು ಯೋಜನೆ ಹಾಕಿಕೊಳ್ಳಲಾಗಿದೆ.