ಕೆಂಪಾದವೋ... ಎಲ್ಲ ಕೆಂಪಾದವೋ...!

Update: 2017-06-26 09:08 GMT

ಭಟ್ಟರು ರಿಕ್ಷಾದಿಂದ ಇಳಿದವರು ಕಬೀರನನ್ನೇ ಒಂದು ಕ್ಷಣ ದಿಟ್ಟಿಸಿದರು. ಅವರ ಕಣ್ಣಾಲಿ ತುಂಬಿತ್ತು.

‘‘ನೀನು ಇಲ್ಲೇ ನಿಂತು ನನಗಾಗಿ ಕಾಯುತ್ತಿರು. ಈಗ ಬಂದೆ ನಾನು. ಮತ್ತೆ ವಾಪಾಸ್ ಮನೆಗೆ ಹೋಗಲಿಕ್ಕಿದೆ...’’

ಎಸ್‌ಟಿಡಿ ಬೂತ್‌ನಿಂದ ತನ್ನಲ್ಲಿರುವ ದೂರವಾಣಿ ಸಂಖ್ಯೆಯಿಂದ ಭಟ್ಟರು ಫೋನಾಯಿಸಿದರು. ಅವರು ಫೋನಾಯಿಸಿದ್ದು ಪಪ್ಪು ಇದ್ದ ಮಿಲಿಟರಿ ಯುನಿಟ್‌ಗೆ. ದೂರವಾಣಿಯ ಅಂಕಿಯ ಕೆಳಗೆ ‘ಅಪ್ಪಯ್ಯ’ನ ಹೆಸರು ಬರೆದಿತ್ತು. ಪಪ್ಪು ಹಲವು ಬಾರಿ ಅಪ್ಪಯ್ಯನ ಬಗ್ಗೆ ಹೇಳಿಕೊಂಡಿದ್ದ.

ಸ್ವಲ್ಪ ಹೊತ್ತಿನಲ್ಲೇ ಆ ಕಡೆಯಿಂದ ಅಪ್ಪಯ್ಯ ಮಾತನಾಡುತ್ತಿದ್ದ.

ಸುಮಾರು ಅರ್ಧಗಂಟೆ ಅಪ್ಪಯ್ಯ ಆ ಕಡೆಯಿಂದ ಮಾತನಾಡುತ್ತಿದ್ದ. ಅವನ ಮಾತಿನಿಂದ ಅನಂತಭಟ್ಟರು ದಂಗು ಬಡಿದು ಹೋಗಿದ್ದರು.

ಹವಾಲ್ದಾರನೊಬ್ಬನ ಮೇಲೆ ಹಲ್ಲೆ ನಡೆಸಿದ ದಿನದಿಂದ ಪಪ್ಪುವಿನ ಬೆಳವಣಿಗೆಗಳನ್ನು ಅಪ್ಪಯ್ಯ ಹೇಳುತ್ತಿದ್ದ. ಪಪ್ಪು ಮಾನಸಿಕ ಸ್ಥಿಮಿತತೆಯನ್ನು ಭಾಗಶಃ ಕಳೆದುಕೊಂಡಿದ್ದ. ಹಲವು ಬಾರಿ ಅವನು ಮೇಲಾಧಿಕಾರಿಗಳ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದ. ಅತಿ ಬೇಗ ವ್ಯಗ್ರನಾಗುತ್ತಿದ್ದ. ಇದೀಗ ನಾಲ್ಕು ದಿನಗಳ ಹಿಂದೆ ಪಪ್ಪು ಯಾರಿಗೂ ಹೇಳದೆ ಯುನಿಟ್‌ನಿಂದ ತಪ್ಪಿಸಿಕೊಂಡಿದ್ದಾನೆ. ಅವನಿಗಾಗಿ ತೀವ್ರ ಹುಡುಕಾಟ ನಡೆಯುತ್ತಾ ಇದೆ. ಯಾವ ಸಂದರ್ಭದಲ್ಲಿ ಬೇಕಾದರೂ ಪೊಲೀಸರು ಅಲ್ಲಿಗೆ ಬರಬಹುದು. ಇದು ಅಪ್ಪಯ್ಯನ ಮಾತಿನ ಒಟ್ಟು ಸಾರಾಂಶ.

ಅನಂತಭಟ್ಟರು ಮತ್ತೆ ರಿಕ್ಷಾ ಏರಿ ‘‘ಮನೆ ಕಡೆ ನಡೆಯಪ್ಪ’’ ಎಂದರು. ಅವರು ಗದ್ಗದಿತರಾಗಿದ್ದರು.

‘‘ಮೇಷ್ಟ್ರೇ...ಎಂತಾಯಿತು ಮೇಷ್ಟ್ರೇ...ಅಮ್ಮನಿಗೇನಾದರೂ ಹುಷಾರಿಲ್ಲವಾ? ಡಾಕ್ಟರತ್ರ ಕರಕೊಂಡು ಹೋಗಲಿಕ್ಕಿದ್ರೆ ಹೇಳಿ...ನಾನು ಬರುವೆ...’’ ಎಂದ.

ಭಟ್ಟರು ಕೂತಲ್ಲೇ ಬಿಕ್ಕಿ ಬಿಕ್ಕಿ ಅಳುತ್ತಿದ್ದರೇ ಹೊರತು ಪ್ರತಿಯಾಡುತ್ತಿರಲಿಲ್ಲ. ಹೊರಗೆ ಸಣ್ಣಗೆ ಪಿರಿಪಿರಿ ಮಳೆ ಶುರು ಹಚ್ಚಿತ್ತು.

‘‘ಮೇಷ್ಟ್ರೇ...ನೀವೇ ಹೀಗೆ ಮಾಡಿದರೆ ಹೇಗೆ? ಎಂತಾಯಿತು ಹೇಳಿ. ಸರಿ ಮಾಡುವ...’’ ಕಬೀರ ಮತ್ತೆ ಮತ್ತೆ ಕೇಳುತ್ತಿದ್ದ.

ಆದರೆ ಮೇಷ್ಟ್ರು ಏನೂ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ. ಊರು ಹತ್ತಿರವಾಯಿತು. ಬಜತ್ತೂರಿನಲ್ಲಿ ಇಳಿಯದೇ ರಿಕ್ಷಾವನ್ನು ಸೀದಾ ಮನೆಯ ಕಡೆಗೆ ಸಾಗಲು ಹೇಳಿದರು. ಮಣ್ಣ ರಸ್ತೆಯಲ್ಲಿ ಸಾಗಿ ಕಿರುಸೇತುವೆಯವರೆಗೆ ರಿಕ್ಷಾ ಸಾಗಿತು. ರಿಕ್ಷಾದಿಂದ ಇಳಿದವರೇ ‘‘ನೀನು ಇಲ್ಲೇ ಇರು, ನಾನು ಬಂದೆ...’’ ಮನೆಯ ಕಡೆಗೆ ಧಾವಿಸಿದರು. ಅವರು ಪಿರಿಪಿರಿ ಮಳೆಯಲ್ಲಿ ಒದ್ದೆಯಾಗುತ್ತಲೇ ಹೊರಟದ್ದು ನೋಡಿ ‘‘ಮೇಷ್ಟ್ರೇ...ಕೊಡೆ ಬಿಟ್ಟು ಹೋಗಿದ್ದೀರಿ...ಕೊಡೆ ತೆಗೆದುಕೊಳ್ಳಿ...’’ ಕೂಗಿದ.

ಅವರು ಕೇಳುವ ಸ್ಥಿತಿಯಲ್ಲಿರಲಿಲ್ಲ. ಕೊಡೆಯ ಜೊತೆಗೆ ಭಟ್ಟರನ್ನು ಕಬೀರ ಹಿಂಬಾಲಿಸಿದ.

ಭಟ್ಟರು ಮನೆ ಸೇರಿದಾಗ ಸಂಜೆ ಆರು ಗಂಟೆ. ಮಬ್ಬುಗತ್ತಲು. ಒಳ ಬಂದವರೇ ಪತ್ನಿಯನ್ನು ಕೂಗಿ ಕರೆದರು. ಪ್ರತಿಕ್ರಿಯೆ ಇಲ್ಲ. ಮಗನ ಕೋಣೆಯೊಳಗೆ ಇಣುಕಿದರೆ ಅದು ಖಾಲಿಯಾಗಿತ್ತು. ಗೋಡೆಯಲ್ಲಿ ತೂಗು ಹಾಕಿದ್ದ ಕೋವಿಯೂ ಇದ್ದಿರಲಿಲ್ಲ.

ಅಷ್ಟರಲ್ಲಿ ಹೊರಗಡೆ ಹಿತ್ತಲ ಭಾಗದಿಂದ ಯಾರೋ ಜೋರಾಗಿ ‘‘ಭೋಲೋ ಭಾರತ್ ವಾತಾಕಿ ಜೈ’’ ಎಂದು ಕೂಗಿದಂತಾಯಿತು.

ಅದು ಪಪ್ಪುವಿನ ಧ್ವನಿ.

ಶಾಸ್ತ್ರಿಗಳು ಹಿತ್ತಲಿಗೆ ಓಡಿದರೆ ನೋಡಿದರೆ ಹಿತ್ತಲ ಬಾಗಿಲಲ್ಲಿ ಸುರಿವ ಮಳೆಯಲ್ಲೇ ಲಕ್ಷ್ಮಮ್ಮ ದಂಗು ಬಡಿದು ನಿಂತಿದ್ದಾರೆ. ಅವರ ಜೊತೆಗೆ ಮೋಂಟ ಮತ್ತು ಅವನ ಪತ್ನಿಯೂ ಇದ್ದಾರೆ.

‘‘ಮಗನೆಲ್ಲಿ...ಮಗನೆಲ್ಲಿ?’’ ಭಟ್ಟರು ಕೇಳಿದರು.

ಲಕ್ಷ್ಮಮ್ಮ ಬೇಲಿಯ ಕಡೆಗೆ ಕೈ ತೋರಿಸಿದರು. ಅಲ್ಲಿ ನೋಡಿದರೆ ಕೋವಿ ಹಿಡಿದುಕೊಂಡ ಪಪ್ಪು ಶತಪತ ತಿರುಗಾಡುತ್ತಿದ್ದ. ಆಗಾಗ ಜೋರಾಗಿ ‘ಭೋಲೋ ಭಾರ್ ಮಾತಾಕಿ ಜೈ’ ಎಂದು ಕೂಗುತ್ತಿದ್ದ.

ತಂದೆಯನ್ನು ನೋಡಿದವನೇ ಓಡಿ ಬಂದ ‘‘ಅಪ್ಪ ಶತ್ರುಗಳು ನುಗ್ಗಿದ್ದಾರೆ...ಅವರು ನಮ್ಮ ಮೇಲೆ ದಾಳಿ ನಡೆಸಲಿದ್ದಾರೆ...ಇನ್ನೇನೂ ಯುದ್ಧ ಶುರುವಾಗತ್ತೆ...ಹೆದರಬೇಡಿ ಅಪ್ಪಾ, ನಾನೊಬ್ಬನೇ ನುಗ್ಗಿ ಅವರನ್ನು ಸದೆ ಬಡಿಯುವೆ. ಅಮ್ಮನನ್ನು ಕರೆದುಕೊಂಡು ಒಳಗೆ ಹೋಗಿ ಅಪ್ಪಾ...ಹೋಗಿ ಅಪ್ಪಾ...’’ ಪಪ್ಪು ವಿಕಾರವಾಗಿ ಚೀರಿದ. ಸಂಪೂರ್ಣ ಒದ್ದೆಯಾಗಿದ್ದ ಅವನ ತಲೆಯಿಂದ ಮಳೆನೀರು ಕೆನ್ನೆಯ ಮೂಲಕ ಭೂಮಿಗಿಳಿಯುತ್ತಿತ್ತು.

ತಲೆಕೂದಲು ಸಂಪೂರ್ಣ ಕೆದರಿತ್ತು. ಕುರುಚಲು ಗಡ್ಡದ ಜೊತೆಗೆ ಧಗಧಗ ಉರಿಯುವ ಕೆಂಪು ಕಣ್ಣುಗಳು. ಜೊತೆಗೆ ಅವನ ಕೈಯಲ್ಲಿರುವ ಕೋವಿ. ಭಯಾನಕವಾಗಿ ಕಾಣುತ್ತಿದ್ದ. ಅವರು ಆ ರೀತಿಯಲ್ಲಿ ಪಪ್ಪುವನ್ನು ೋಡುತ್ತಿರುವುದು ಅದೇ ಮೊದಲು.

‘‘ಹೋಗಿ ಅಪ್ಪಾ...ಅಮ್ಮನನ್ನು ಕರೆದುಕೊಂಡು ಒಳ ಹೋಗಿ ಅಪ್ಪಾ...’’ ಎಂದು ಮತ್ತೊಮ್ಮೆ ವ್ಯಗ್ರವಾಗಿ ಚೀರಿದ. ಭಟ್ಟರು ಪತ್ನಿಯೊಂದಿಗೆ ಒಳ ಹೋದರು. ಕಿಟಕಿಯಿಂದ ಇಣುಕಿದರೆ ಪಪ್ಪು ಬೇಲಿಯ ಉದ್ದಕ್ಕೂ ಹಿಂದಿಯಲ್ಲಿ ಚೀರಾಡುತ್ತಾ ಓಡಾಡುತ್ತಿದ್ದ. ಯಾರಿಗೋ ಏನೇನೋ ಆದೇಶ ನೀಡುತ್ತಿದ್ದ. ಆಗಾಗ ‘ಭೋಲೋ ಭಾರತ್ ಮಾತಾಕಿ ಜೈ’ ಎಂದು ಘೋಷಣೆ ಕೂಗುತ್ತಿದ್ದ.

‘‘ಎಲ್ಲರನ್ನು ಸರ್ವನಾಶ ಮಾಡುತ್ತೇನೆ....ನಿಮ್ಮ ರುಂಡಗಳನ್ನು ಚೆಂಡಾಡಿ ಗುರೂಜಿಗೆ ಗುರುದಕ್ಷಿೆ ನೀಡುತ್ತೇನೆ...’’ ಅರಚುತ್ತಿದ್ದ.

ಅಷ್ಟರಲ್ಲಿ ಢಂ...ಢಂ ಎಂದು ಗುಂಡು ಹಾರಿದ ಸದ್ದು. ಮಬ್ಬುಗತ್ತಲಲ್ಲಿ ಏನು ನಡೆಯುತ್ತಿದೆ ಎನ್ನುವುದು ಅನಂತ ಭಟ್ಟರಿಗೆ ಗೊತ್ತಾಗುತ್ತಿರಲಿಲ್ಲ. ಅವರು ತತ್ತರಿಸಿದ್ದರು. ಮಗದೊಮ್ಮೆ ‘ಢಂ’ ಎಂಬ ಗುಂಡು ಹಾರುವ ಶಬ್ದ. ಈಗ ಮಗನ ಚೀತ್ಕಾರ ಕೇಳಿತು. ಆ ಬಳಿಕ ಯಾವ ಸದ್ದೂ ಇಲ್ಲ. ಮಗನ ಗದ್ದಲವೂ ಕೇಳುತ್ತಿಲ್ಲ. ಅನಂತರದ ವೌನವೇ ಭಯಾನಕ ಅನ್ನಿಸಿ ಭಟ್ಟರು ಮಗನೆಡೆಗೆ ದಾವಿಸಿದರು. ಅವರನ್ನು ಮೋಂಟನೂ ಹಿಂಬಾಲಿಸಿದ. ಗುಂಡಿನ ಶಬ್ದವನ್ನು ಹಿಂಬಾಲಿಸಿ ಕಬೀರನೂ ಓಡೋಡಿ ಬರುತ್ತಿದ್ದ. ಎಲ್ಲರೂ ಹತ್ತಿರ ಹೋಗಿ ನೋಡಿದರೆ ಸುಬೇದಾರ್ ಪ್ರತಾಪ ಸಿಂಹ ರಕ್ತದ ಮಡುವಿನಲ್ಲಿ ಶಾಂತವಾಗಿ ನಿದ್ರಿಸುತ್ತಿದ್ದ. ಅವನ ಕೋವಿ ಪಾದ ಬುಡದಲ್ಲಿ ಶರಣಾಗತವಾಗಿ ಬಿದ್ದಿತ್ತು.

‘‘ಮೇಷ್ಟ್ರೇ...ನಮ್ಮ ಪಪ್ಪುವಿಗೆ ಏನಾಯಿತು ಮೇಷ್ಟ್ರೇ...’’ ಕಬೀರ ಭಯಭೀತನಾಗಿ ಕೇಳಿದ.

ಭಟ್ಟರು ಸ್ತಂಭೀಭೂತರಾಗಿ ನಿಂತಿದ್ದರು. ಕಬೀರ ಬಾಗಿ ಪಪ್ಪುವಿನ ನಾಡಿಮಿಡಿತ ನೋಡಿದ ‘‘ಅಯ್ಯೋ...ನಾಡಿಮಿಡಿತ ಕೈಗೆ ಸಿಗುತ್ತಿಲ್ಲ ಮೇಷ್ಟ್ರೇ....ಬನ್ನಿ ಬನ್ನಿ ಹಿಡಿದುಕೊಳ್ಳಿ....ಆಸ್ಪತ್ರೆಗೆ ಒಯ್ಯೋಣ...ಬನ್ನಿ ಬನ್ನಿ...’’ ಎಂದು ಅವಸರಿಸಿದ.

ಮೋಂಟ ಕಬೀರನಿಗೆ ಜೊತೆಯಾದ. ಇಬ್ಬರು ಪಪ್ಪುವಿನ ದೇಹವನ್ನು ಎತ್ತಿಕೊಂಡು ಗದ್ದೆ ಪುಣಿಯ ದಾರಿಯಲ್ಲಿ ರಿಕ್ಷಾದ ಕಡೆಗೆ ಸಾಗಿದರು. ಭಟ್ಟರು ಅವರನ್ನು ಹಿಂಬಾಲಿಸಿದರು. ಕೋವಿಯ ಸದ್ದಿಗೆ ಅಷ್ಟರಲ್ಲಿ ಒಬ್ಬೊಬ್ಬರಾಗಿ ಭಟ್ಟರ ಮನೆಯ ಮುಂದೆ ನೆರೆಯ ತೊಡಗಿದ್ದರು.

ರಿಕ್ಷಾದಲ್ಲಿ ಮೋಂಟ ಮತ್ತು ಭಟ್ಟರು ಪಪ್ಪುವಿನ ದೇಹವನ್ನು ಮಡಿಲಲ್ಲಿಟ್ಟುಕೊಂಡರು.

‘ಜಾಗೃತೆ...ಜಾಗೃತೆ...’ ಎನ್ನುತ್ತಾ ಕಬೀರ ಮುಂದಿನ ಸೀಟಲ್ಲಿ ಕುಳಿತು ರಿಕ್ಷಾ ಸ್ಟಾರ್ಟ್ ಮಾಡಿದ. ಮಳೆಯ ಸದ್ದು ಜೋರಾಗ ತೊಡಗಿತ್ತು. ಮುಂದೆ ನೋಡಿದರೆ ದಾರಿ ಮಬ್ಬಾಗಿದೆ. ಆದದ್ದಾಗಲಿ ಎಂದು ಅಪ್ಪಳಿಸುವ ಮಳೆ ನೀರನ್ನು ಸೀಳುತ್ತಾ ಕಬೀರ ರಿಕ್ಷಾದೊಂದಿಗೆ ಹೊರಟ.

ಪಪ್ಪುವಿನ ತಲೆ ಭಾಗ ಮೋಂಟನ ಮಡಿಲಲ್ಲಿದ್ದರೆ ಅವನೆರಡು ಕಾಲುಗಳು ಭಟ್ಟರ ಮಡಿಲಲ್ಲಿತ್ತು. ರಕ್ತ ಹನಿಹನಿಯಾಗಿ ಇಳಿದು ಇಬ್ಬರ ಮಡಿಲನ್ನೂ ಒದ್ದೆ ಮಾಡುತ್ತಿತ್ತು. ಕಬೀರನ ‘ದೇಶಪ್ರೇಮಿ’ ರಿಕ್ಷಾ ಏಳುತ್ತಾ ಬೀಳುತ್ತಾ ಇನ್ನಿಲ್ಲದ ವೇಗದಲ್ಲಿ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯ ಕಡೆಗೆ ಸಾಗುತ್ತಿತ್ತು.

ಮುಕ್ತಾಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News