ಸ್ಯಾಂಡಲ್‌ವುಡ್ ಕುರುಕ್ಷೇತ್ರದಲ್ಲಿ ನಯನತಾರಾ ದ್ರೌಪದಿ

Update: 2017-07-07 14:11 GMT

ಬಾಹುಬಲಿ ಚಿತ್ರದ ಪ್ರಚಂಡ ಗೆಲುವು ಇಡೀ ಭಾರತೀಯ ಚಿತ್ರರಂಗವನ್ನು ಮೂಕವಿಸ್ಮಿತ ಗೊಳಿಸಿರುವುದಂತೂ ಎಲ್ಲರಿಗೂ ಗೊತ್ತಿರುವಂತಹದ್ದೇ. ಇದಕ್ಕೆ ನಮ್ಮ ಸ್ಯಾಂಡಲ್‌ವುಡ್ ಕೂಡಾ ಹೊರತಾಗಿಲ್ಲ. ಮಹಾಭಾರತ ಕಥೆಯನ್ನು ಆಧರಿಸಿದ ಬಿಗ್ ಬಜೆಟ್ ಚಿತ್ರವೊಂದು ಕನ್ನಡದಲ್ಲಿ ನಿರ್ಮಾಣಗೊಳ್ಳಲಿದೆಯೆಂಬ ಸುದ್ದಿ ಕೇಳಿಯೇ ಕನ್ನಡ ಚಿತ್ರಪ್ರೇಮಿಗಳು ರೋಮಾಂಚನ ಗೊಂಡಿದ್ದಾರೆ. ಕುರುಕ್ಷೇತ್ರ ಎಂದು ಹೆಸರಿಡಲಾದ ಈ ಚಿತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ದ್ರೌಪದಿಯಾಗಿ ತೆರೆಯಲ್ಲಿ ವಿಜೃಂಭಿಸಲಿದ್ದಾರೆ.

ರನ್ನನ ಗದಾಯುದ್ಧ ಕಾವ್ಯವನ್ನು ಆಧರಿಸಿದ ಈ ಚಿತ್ರದಲ್ಲಿ ದರ್ಶನ್ ದುರ್ಯೋಧನನಾಗಿ ನಟಿಸಲಿದ್ದಾರೆ. ಭೀಷ್ಮನಾಗಿ ಅಂಬರೀಷ್, ಯುಧಿಷ್ಠಿರನಾಗಿ ರವಿಚಂದ್ರನ್ ಚಿತ್ರಪ್ರೇಮಿಗಳ ಮನಸೂರೆಗೊಳ್ಳಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಈ ತಿಂಗಳ 23ಕ್ಕೆ ಕುರುಕ್ಷೇತ್ರದ ಮುಹೂರ್ತ ನಡೆಯಲಿದೆ.

ನಿರ್ಮಾಪಕ-ರಾಜಕಾರಣಿ ಮುನಿರತ್ನಂ ಈ ಚಿತ್ರಕ್ಕಾಗಿ ಹಣ ಸುರಿಯಲಿದ್ದಾರೆ. ಬರೋಬ್ಬರಿ 250 ಕೋಟಿ ರೂ.ವೆಚ್ಚದಲ್ಲಿ ತಯಾರಾಗಲಿರುವ ಈ ಚಿತ್ರವು ಸ್ಯಾಂಡಲ್‌ವುಡ್‌ನಲ್ಲಿ ಹೊಸ ಮೈಲುಗಲ್ಲಾಗಲಿದೆಯೆಂದು ಅವರು ಹೇಳುತ್ತಾರೆ. ಕರ್ನಾಟಕದಲ್ಲಿ ಬಾಹುಬಲಿ ಚಿತ್ರದ ಅದ್ವಿತೀಯ ಯಶಸ್ಸು, ಸ್ಯಾಂಡಲ್‌ವುಡ್ ಮಂದಿಯನ್ನು ಕೂಡಾ ಬಿಗ್‌ಬಜೆಟ್ ಚಿತ್ರಗಳ ನಿರ್ಮಾಣಕ್ಕೆ ಪ್ರೇರೇಪಿಸಿದೆಯೆಂದು ಕರ್ನಾಟಕ ವಾಣಿಜ್ಯೋದ್ಯಮ ಮಂಡಳಿಯ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಅವರ ಅಂಬೋಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News