ಇಸ್ರೇಲ್ ದೌರ್ಜನ್ಯದ ವಿರುದ್ಧ ಎದ್ದು ನಿಲ್ಲಿ: ಪಿಎಫ್‌ಐ ಕರೆ

Update: 2017-07-24 13:41 GMT

ಹೊಸದಿಲ್ಲಿ, ಜು.23: ಜೆರುಸಲೇಂನ ಅಲ್ ಅಕ್ಸಾ ಮಸೀದಿಯನ್ನು ಆಕ್ರಮಿಸಿರುವ ಇಸ್ರೇಲ್ ಹೇರಿರುವ ನಿರ್ಬಂಧಗಳು ಮತ್ತು ಪವಿತ್ರ ಮಸೀದಿಗೆ ತೆರಳುವ ಫೆಲೆಸ್ತೀನಿಯರ ಮೇಲೆ ನಡೆಸಿರುವ ದೌರ್ಜನ್ಯವನ್ನು ಪಿಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಇ.ಅಬೂಬಕರ್ ಖಂಡಿಸಿದ್ದಾರೆ.

ಫೆಲೆಸ್ತೀನಿಯರಿಗೆ ಅಲ್ ಅಕ್ಸಾ ಮಸೀದಿಗೆ ಪ್ರವೇಶ ನಿರಾಕರಿಸಲಾಗಿದೆ ಮತ್ತು ಅಲ್ಲಿರುವ ಇಸ್ಲಾಮಿ ವಕ್ಫ್‌ಗಳ ಕಾರ್ಯಾಲಯಗಳನ್ನು ಮುಚ್ಚಲಾಗಿದೆ. ಇಸ್ರೇಲ್ ಸೇನೆಯು ಕಬ್ಬಿಣದ ತಡೆಬೇಲಿಯ ಮೂಲಕ ಹಳೆಯ ನಗರಗಳನ್ನು ಸಂಪೂರ್ಣವಾಗಿ ಮುಚ್ಚಿದ್ದು, ಜೆರುಸಲೇಂ ನಿವಾಸಿಗಳು ಅದರೊಳಗೆ ಪ್ರವೇಶಿಸುವುದನ್ನು ತಡೆದಿದೆ. ಯಹೂದಿ ನಿವಾಸಿಗಳು ನಡೆಸುತ್ತಿರುವ ಆಕ್ರಮಣಗಳಿಂದ ಮಸೀದಿಯ ಸುತ್ತಮುತ್ತ ಹಿಂಸಾತ್ಮಕ ಘರ್ಷಣೆಗಳು ಆಗಾಗ್ಗೆ ನಡೆಯುತ್ತಿರುತ್ತವೆ.

ಇದೀಗ ಇಸ್ರೇಲ್ ಪ್ರಸಕ್ತ ಪರಿಸ್ಥಿತಿಯನ್ನು ನೆಪವಾಗಿಟ್ಟುಕೊಂಡು ಅಲ್ಲಿ ತನ್ನ ನಿಯಂತ್ರಣ ಸಾಧಿಸಲು ಬಯಸುತ್ತಿದ್ದು, ಜೆರುಸಲೇಂನಿಂದ ಫೆಲೆಸ್ತೀನಿ ಮುಸ್ಲಿಮರನ್ನು ಬಲವಂತವಾಗಿ ಹೊರಹಾಕುವ ಹುನ್ನಾರದಲ್ಲಿದೆ. ಈ ಮೂಲಕ ಜೆರುಸಲೇಂ ಅನ್ನು ಯಹೂದಿ ನಗರವಾಗಿ ಬದಲಿಸುವ ಗೂಢಾಲೋಚನೆಯಲ್ಲಿದೆ.

ಅಲ್ ಅಕ್ಸಾ ಮಸೀದಿಯಲ್ಲಿ ವಿಶ್ವಾಸಿಗಳ ಹಕ್ಕುಗಳ ಉಲ್ಲಂಘನೆ ಮತ್ತು ಯಹೂದಿ ರಾಜ್ಯದ ದೌರ್ಜನ್ಯದ ವಿರುದ್ಧ ಜಗತ್ತಿನಾದ್ಯಂತ ಮುಸ್ಲಿಮರು ತಮ್ಮ ಮೌನ ಮುರಿದು ಬೀದಿಗಿಳಿಯಬೇಕು. ತಮ್ಮ ತೃತೀಯ ಪವಿತ್ರ ಸ್ಥಳ, ಪ್ರಥಮ ಕಿಬ್ಲಾ ಮತ್ತು ಪ್ರವಾದಿ(ಸ.ಅ.)ಯವರ ರಾತ್ರಿ ಪಯಣದ ಗಮ್ಯಸ್ಥಳದ ಉಲ್ಲಂಘನೆ ಮತ್ತು ಅಪಹಾಸ್ಯದ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರಕಾರಗಳ ಮೇಲೆ ಒತ್ತಡ ಹೇರಬೇಕಾಗಿದೆ ಎಂದು ಇ.ಅಬೂಬಕರ್ ಒತ್ತಾಯಿಸಿದ್ದಾರೆ.

ಫೆಲೆಸ್ತೀನ್ ಜನತೆಯ ವಿರುದ್ಧ ಅಂತಾರಾಷ್ಟ್ರೀಯ ಕಾನೂನು ಮತ್ತು ಮಾನವ ಹಕ್ಕು ಉಲ್ಲಂಘನೆಗಾಗಿ ಇಸ್ರೇಲ್‌ನ್ನು ಉತ್ತರದಾಯಿಯನ್ನಾಗಿ ಮಾಡಲು ಅಂತಾರಾಷ್ಟ್ರೀಯ ಸಮುದಾಯವನ್ನು ಆಗ್ರಹಿಸಿರುವ ಇ. ಅಬೂಬಕರ್, ಪ್ರಸಕ್ತ ನಡೆಯುತ್ತಿರುವ ಇಸ್ರೇಲ್‌ನ ಎಲ್ಲಾ ಆಕ್ರಮಣವನ್ನು ತಡೆಯಲು ಮಧ್ಯಪ್ರವೇಶಿಸಬೇಕು ಮತ್ತು ಅಕ್ರಮ ವಸಾಹತಿನ ಮೂಲಕ ಫೆಲೆಸ್ತೀನ್ ಭೂಮಿಯನ್ನು ಕಳವು ಮಾಡುವುದನ್ನು ತಡೆಯಬೇಕು ಎಂದು ವಿಶ್ವಸಂಸ್ಥೆಯನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News