ಅಸ್ಸಾಂ:ದುಷ್ಕರ್ಮಿಗಳಿಂದ ಎಬಿಎಂಎಸ್ಯು ಅಧ್ಯಕ್ಷನ ಹತ್ಯೆ
ಕೊಕ್ರಝಾರ್,ಆ.2: ಅಸ್ಸಾಮ್ನ ಕೊಕ್ರಝಾರ್ ಜಿಲ್ಲೆಯಲ್ಲಿ ಬುಧವಾರ ಅಪರಿಚಿತ ದುಷ್ಕರ್ಮಿಗಳು ಅಖಿಲ ಬೋಡೊ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಯೂನಿಯನ್ (ಎಬಿಎಂಎಸ್ಯು) ಅಧ್ಯಕ್ಷ ಲಫೀಕುಲ್ ಇಸ್ಲಾಂ ಅಹ್ಮದ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ಅಹ್ಮದ್ ಟೈಲ್ಗಳ ಖರೀದಿಗಾಗಿ ತಿತಾಗುರಿ ಮಾರುಕಟ್ಟೆಯಲ್ಲಿನ ಅಂಗಡಿಯೊಂದಕ್ಕೆ ತೆರಳಿದ್ದಾಗ ಬೈಕ್ನಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿಗಳಿಬ್ಬರು ಎಕೆ-47 ರೈಫಲ್ನಿಂದ ಅವರತ್ತ ಗುಂಡುಗಳನ್ನು ಹಾರಿಸಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಂಗಡಿಯ ಮಾಲಿಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಎಸ್ಪಿ ರಾಜೇನ್ ಸಿಂಗ್ ತಿಳಿಸಿದರು.
ಹತ್ಯೆಯ ಬಳಿಕ ಕೊಕ್ರಝಾರ್ ಮತ್ತು ಆಸುಪಾಸಿನ ಜಿಲ್ಲೆಗಳಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
ಎಬಿಎಂಎಸ್ಯು ಅಹ್ಮದ್ ಹತ್ಯೆಯನ್ನು ಖಂಡಿಸಿ ಅನಿರ್ದಿಷ್ಟಾವಧಿ ಬಂದ್ಗೆ ಕರೆ ನೀಡಿದ್ದು, ದುಷ್ಕರ್ಮಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದೆ.
ಲೋವರ್ ಅಸ್ಸಾಮಿನ ಎಲ್ಲ ಜಿಲ್ಲೆಗಳಲ್ಲಿ ಪೊಲೀಸ್ ಬಂದೋಬಸ್ತ್ನ್ನು ಹೆಚ್ಚಿಸಲಾಗಿದೆ.
ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರು ಅಹ್ಮದ್ ಹತ್ಯೆಯನ್ನು ಖಂಡಿಸಿದ್ದಾರೆ.