ಸ್ಯಾಂಡಲ್‌ವುಡ್‌ನಲ್ಲಿ ಕಾಫಿತೋಟ

Update: 2017-08-05 11:13 GMT

‘ಮುಕ್ತಾ’ ಸೀರಿಯಲ್ ಮೂಲಕ ಕನ್ನಡ ಟಿವಿ ಪ್ರೇಕ್ಷಕರ ಮನೆಮಾತಾಗಿರುವ ಟಿ.ಎನ್.ಸೀತಾರಾಮ್, ಬರೋಬ್ಬರಿ 10 ವರ್ಷಗಳ ಸುದೀರ್ಘ ಗ್ಯಾಪ್ ಬಳಿಕ ಸ್ಯಾಂಡಲ್‌ವುಡ್‌ಗೆ ಪುನರಾಗಮಿಸಿದ್ದಾರೆ. ಹೌದು. ಅವರ ನಿರ್ದೇಶನದ ನೂತನ ಚಿತ್ರ ಕಾಫಿತೋಟ ಸಿದ್ಧಗೊಂಡಿದ್ದು, ಆಗಸ್ಟ್ 18ರಂದು ಬಿಡುಗಡೆಗೊಳ್ಳಲಿದೆ. ಸೀತಾರಾಮ್ ಈ ಮೊದಲು ನಿರ್ದೇಶಿಸಿದ್ದ ಮೀರಾ ಮಾಧವ 2007ರಲ್ಲಿ ಬಿಡುಗಡೆಯಾಗಿತ್ತು. ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ಮುಗ್ಗರಿಸಿದ ಕಾರಣವೇನೋ, ಸೀತಾರಾಮ್ ಬೆಳ್ಳಿತೆರೆಯ ಯೋಚನೆ ಬಿಟ್ಟು, ಕಿರುತೆರೆಯತ್ತಲೇ ಗಮನಹರಿಸಿದ್ದರು.

ಇದೀಗ ಕಾಫಿತೋಟದ ಮೂಲಕ ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ಅದೃಷ್ಟ ಪರೀಕ್ಷಿಸಲು ಹೊರಟಿದ್ದಾರೆ. ಚಿತ್ರದ ಟೀಸರ್ ಟ್ರೇಲರ್ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದು, ತುಂಬಾ ಕುತೂಹಲ ಕೆರಳಿಸಿದೆ. ವಿಶೇಷವೆಂದರೆ ಈ ಚಿತ್ರದಲ್ಲಿ ಕೇವಲ ಎರಡೇ ಹಾಡುಗಳಿವೆ. ಆದಾಗ್ಯೂ ಎರಡೂ ಹಾಡುಗಳಿಗೆ ಬೇರೆ ಬೇರೆ ಸಂಗೀತ ನಿರ್ದೇಶಕ ರಿದ್ದಾರೆ. ಒಂದನ್ನು ಅನೂಪ್ ಸಿಳಿನ್ ಹಾಗೂ ಮತ್ತೊಂದನ್ನು ಮಿಥುನ್ ಮುಕುಂದ್ ಸಂಯೋಜಿಸಿದ್ದಾರೆ. ಜಯಂತ್ ಕಾಯ್ಕಿಣಿ ಹಾಗೂ ಜೋಗಿ ಚಿತ್ರಕ್ಕೆ ಹಾಡುಗಳನ್ನು ಬರೆದಿದ್ದಾರೆ. ಮನ್ವಂತರ ಬ್ಯಾನರ್‌ನಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ರಘು ಮುಖರ್ಜಿ ಹಾಗೂ ರಾಧಿಕಾ ಚೇತನ್ ಮುಖ್ಯ ಪಾತ್ರಗಳಲ್ಲಿದ್ದಾರೆ. ಸಂಯುಕ್ತ ಹೊರನಾಡು, ಅಪೇಕ್ಷಾ ಪುರೋಹಿತ್, ಅಚ್ಯುತ್ ಕುಮಾರ್, ರಾಹುಲ್ ಮಾಧವ್ ಮತ್ತಿತರ ಪ್ರತಿಭಾವಂತ ಕಲಾವಿದರ ದಂಡೇ ಇದೆ. ಸ್ಯಾಂಡಲ್‌ವುಡ್ ಅಂಗಳದಲ್ಲಿ ಸೀತಾರಾಮ್‌ರ ಕಾಫಿ ತೋಟ ಘಮಘಮಿಸಲಿದೆಯೇ ಎಂಬುದನ್ನು ಕಾದುನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News