"ಪವನ್ ಕುಮಾರ್ ಅಥವಾ 'ತಿಥಿ' ನಿರ್ದೇಶಕರು ಪಾತ್ರ ನೀಡಿದರೆ ಕನ್ನಡದಲ್ಲೂ ನಟಿಸುವೆ"

Update: 2017-08-12 13:26 GMT

ಕರ್ನಾಟಕ ಚಲನಚಿತ್ರ ಅಕಾಡಮಿಯ ವತಿಯಿಂದ ಬೆಂಗಳೂರಿನಲ್ಲಿ‌ 'ಮಲಯಾಳಂ ಚಲನಚಿತ್ರೋತ್ಸವ' ನಡೆಯುತ್ತಿದೆ. ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಹಮ್ಮಿಕೊಳ್ಳಲಾದ ಸಮಾರಂಭದ ಉದ್ಘಾಟನೆ ಶುಕ್ರವಾರ ನಡೆಯಿತು. ಅತಿಥಿಗಳಾಗಿ ಆಗಮಿಸಿದವರಲ್ಲಿ‌ ಮಲಯಾಳಂನ ಖ್ಯಾತ ನಟ ವಿನಯ್ ಫೋರ್ಟ್ ಕೂಡ ಪ್ರಮುಖರು. ಅವರೊಂದಿಗೆ 'ವಾರ್ತಾಭಾರತಿ' ನಡೆಸಿದ ವಿಶೇಷ ಮಾತುಕತೆ ಇಲ್ಲಿದೆ.

ಮಲಯಾಳಂ ಚಲನಚಿತ್ರೋತ್ಸವಕ್ಕೆ ಆಗಮಿಸಿ ಹೇಗೆ ಅನಿಸಿದೆ?

ವಿನಯ್: ಇಂತಹ ಫೆಸ್ಟಿವಲ್ ಗಳು ಹೆಚ್ಚು ಹೆಚ್ಚು ನಡೆಯಬೇಕು. ಆಗ ಕಮರ್ಷಿಯಲಾಗಿ ಗುರುತಿಸಲ್ಪಡದ ಉತ್ತಮ ಚಿತ್ರಗಳನ್ನು ಕೂಡ ಬೇರೆ ಬೇರೆ ರಾಜ್ಯಗಳ ಮಂದಿ ವೀಕ್ಷಿಸಲು ಅವಕಾಶ ಸಿಗುತ್ತದೆ. ಇದು ಖಂಡಿತ ಉತ್ತಮ ಬೆಳವಣಿಗೆ.

ಇಲ್ಲಿ ನೀವು ನಟಿಸಿರುವ ಎಷ್ಟು ಚಿತ್ರಗಳು ಪ್ರದರ್ಶಿತಗೊಳ್ಳಲಿವೆ?

ವಿನಯ್: 'ಗಾಡ್ ಸೇ', 'ಕಿಸ್ಮತ್' , 'ಕಮ್ಮಟ್ಟಿಪ್ಪಡಂ' ಎಂಬ ಮೂರು ಚಿತ್ರಗಳಿವೆ. ಅವುಗಳಲ್ಲಿ 'ಗಾಡ್ ಸೇ' ಯ ಪಾತ್ರಕ್ಕಾಗಿ ತುಂಬ ಶ್ರಮಪಟ್ಟಿದ್ದೇನೆ. 'ಕಿಸ್ಮತ್' ಅದಕ್ಕಿಂತ ಭಿನ್ನವಾಗಿ ನಿಲ್ಲುವ ಮತ್ತೊಂದು ಪಾತ್ರ.

ಕರ್ನಾಟಕದೊಂದಿಗಿನ‌ ನಿಮ್ಮ ಸಂಬಂಧ ಹೇಗಿದೆ?

ವಿನಯ್: ಕರ್ನಾಟಕಕ್ಕೆ ನಾನು ಸಿನಿಮಾ ಚಿತ್ರೀಕರಣಕ್ಕಾಗಿ ಬರುತ್ತಿರುತ್ತೇನೆ. ಬೆಂಗಳೂರಿಗಂತೂ ಹಲವಾರು ಬಾರಿ ಬಂದಿದ್ದೇನೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುವ ಅಭ್ಯಾಸ ಇರಿಸಿಕೊಂಡಿದ್ದೇನೆ.

ಕನ್ನಡ ಚಿತ್ರೋದ್ಯಮದಲ್ಲಿ ಸ್ನೇಹಿತರು ಇದ್ದಾರೆಯೇ?

ವಿನಯ್: ನನಗೆ ಕರ್ನಾಟಕದಲ್ಲಿ ಬಹಳಷ್ಟು ಸ್ನೇಹಿತರು ಇದ್ದಾರೆ. ಚಿತ್ರೋದ್ಯಮದಲ್ಲಿ ಶ್ರದ್ಧಾ ಶ್ರೀನಾಥ್ ಸದಾ ಸಂಪರ್ಕದಲ್ಲಿರುವ ಸ್ನೇಹಿತೆ. ಆಕೆ 'ಯು ಟರ್ನ್' ನಲ್ಲಿ ನಟಿಸುವುದಕ್ಕೂ ಮೊದಲೇ 'ಕೊಹಿನೂರ್' ಎಂಬ ಮಲಯಾಳಂ ಚಿತ್ರದಲ್ಲಿ ನನ್ನೊಂದಿಗೆ ನಟಿಸಿದ್ದರು.

ಯಾವುದಾದರೂ ಕನ್ನಡ ಚಿತ್ರಗಳನ್ನು ನೋಡಿದ್ದೀರಾ? ಹೇಗೆ ಅನಿಸಿತು?

ವಿನಯ್: 'ಲೂಸಿಯಾ', 'ಯು ಟರ್ನ್' ಮೊದಲಾದ ಚಿತ್ರಗಳನ್ನು ನೋಡಿದ್ದೇನೆ. ಹಳೆಯ ಚಿತ್ರಗಳನ್ನು ಟಿವಿಯಲ್ಲಿಯೂ ನೋಡಿದ್ದೇನೆ. 'ಯು ಟರ್ನ್', 'ತಿಥಿ'ಯಂಥ ಸಿನಿಮಾಗಳು ಹೊಸ ಮಾದರಿಯ ಭರವಸೆಯ ಚಿತ್ರಗಳಾಗಿ ಗೋಚರಿಸಿದೆ.

ನೀವು ಸ್ಟಾರ್ ಇಮೇಜ್ ನ ಚಿತ್ರಗಳಿಂದ ಬದಲಾಗಲು ಕಾರಣವೇನು?

ವಿನಯ್: ಅದು ನಾನು ಉದ್ದೇಶಪೂರ್ವಕವಾಗಿ ಮಾಡಿಕೊಂಡ ಬದಲಾವಣೆಯಲ್ಲ. ಈ ಟ್ರೆಂಡ್ ಎನ್ನುವುದು ಇಮೇಜ್ ಗಳನ್ನು ಸೃಷ್ಟಿಸುತ್ತದೆ. ಉದಾಹರಣೆಗೆ 'ಪ್ರೇಮಂ' ಚಿತ್ರದ ಗೆಲುವಿನಿಂದ ಉಂಟಾದ ಟ್ರೆಂಡ್ ನನಗೆ ಸಾಲು-ಸಾಲು ಹಾಸ್ಯ ಪಾತ್ರಗಳ ಆಫರ್ ಸಿಗುವಂತೆ ಮಾಡಿವೆ. ನಾನು ನಾಯಕನ ಪಾತ್ರಕ್ಕೆ ಜೀವ ನೀಡಲು ತಯಾರಿದ್ದೇನೆ. ಸ್ಟಾರ್ ಎನ್ನುವುದಕ್ಕಿಂತಲೂ ಕಮರ್ಷಿಯಲ್ ಆಗಿ ಗುರುತಿಸಲ್ಪಡುವ ಕಲಾವಿದನಾಗುವುದು ಮುಖ್ಯ.

ಕನ್ನಡ ಚಿತ್ರಗಳಿಂದ ಆಫರ್ ಬಂದರೆ ಒಪ್ಪಿಕೊಳ್ಳುತ್ತೀರಾ?

ವಿನಯ್: ಕಲಾವಿದನಿಗೆ ಭಾಷೆ ಸಮಸ್ಯೆಯಾಗಬಾರದು. 'ದಿ ಬ್ಲೂಬರಿ ಹಂಟ್' ಎಂಬ ಹಿಂದಿ-ಇಂಗ್ಲಿಷ್ ದ್ವಿಭಾಷಾ ಚಿತ್ರದಲ್ಲಿ ನಾನೀಗಾಗಲೇ ನಟಿಸಿದ್ದೇನೆ.
ಕನ್ನಡದಲ್ಲಿ ಪವನ್ ಕುಮಾರ್ ಅಥವಾ 'ತಿಥಿ' ಚಿತ್ರದ ನಿರ್ದೇಶಕರು ನನಗೊಂದು ಒಳ್ಳೆಯ ಪಾತ್ರ ನೀಡಿದರೆ ನಟಿಸಲು ಸಿದ್ದ.

ಒಳ್ಳೆಯ ಚಿತ್ರಗಳು ಕೆಲವೊಮ್ಮೆ ಸೋಲುವುದೇಕೆ ಎಂದು ಅವಲೋಕಿಸಿದ್ದೀರಾ?

ವಿನಯ್: ಒಳ್ಳೆಯದೆನ್ನಬಹುದಾದ ನನ್ನ ಚಿತ್ರಗಳೂ ಸೋತಿವೆ.‌ ಬಹುಶಃ ನಾನು ದೊಡ್ಡ ಸ್ಟಾರ್ ಆಗಿದ್ದರೆ  ಚಿತ್ರದ ಕ್ವಾಲಿಟಿಯಾದರೂ ಹೆಚ್ಚು ಗಮನಿಸಲ್ಪಡುತ್ತಿತ್ತು. ಈಗ ಕಮರ್ಷಿಯಲ್ ಮಾರ್ಕೆಟ್ ಇದ್ದರೆ ಮಾತ್ರ ನಾವು ಸದಾ ನೆನಪಿಸಿಕೊಳ್ಳುವಂಥ ಚಿತ್ರ ಮಾಡಲು ಸಾಧ್ಯ. ಹೊಸಬರ ಸಿನಿಮಾಗಳು ಸಣ್ಣ ಬಜೆಟ್ ನ ದ್ದಾಗಿದ್ದರೆ ವಾರಕ್ಕಿಂತ ಹೆಚ್ಚು ದಿನ ಥಿಯೇಟರ್ ನಲ್ಲಿ ನೆಲೆಸುವುದು ಕಷ್ಟ. ದೊಡ್ಡ ವಿತರಕರಿಂದ ಮಾತ್ರ ಇಂಥ ಸಂದರ್ಭದಲ್ಲಿ ಕೈ ಹಿಡಿಯಲು ಸಾಧ್ಯ.

Writer - ಸಂದರ್ಶನ: ಶಶಿಕರ ಪಾತೂರು

contributor

Editor - ಸಂದರ್ಶನ: ಶಶಿಕರ ಪಾತೂರು

contributor

Similar News