ಭಾರತ-ಚೀನಾ ಸೇನಾಧಿಕಾರಿಗಳ ಮಾತುಕತೆ
ಹೊಸದಿಲ್ಲಿ, ಆ. 16: ಗಡಿ ವಿವಾದ ಹಾಗೂ ನಿಯಂತ್ರಣದ ಬಗ್ಗೆ ಮಾತುಕತೆ ನಡೆಸಲು ಚೀನಾ ಹಾಗೂ ಭಾರತದ ಸೇನೆಯ ಹಿರಿಯ ಅಧಿಕಾರಿಗಳು ಬುಧವಾರ ಲಡಾಖ್ನಲ್ಲಿ ಧ್ವಜ ಸಭೆ ನಡೆಸಿದರು.
ಪ್ಯಾಂಗಾಂಗ್ ಲೇಕ್ ಬಳಿ ಮಂಗಳವಾರ ಭಾರತದ ಗಡಿ ಪ್ರವೇಶಿಸಲು ಪ್ರಯತ್ನಿಸಿದ ಚೀನಾ ಸೇನಾ ಪಡೆಯನ್ನು ಭಾರತೀಯ ಸೇನಾ ಪಡೆ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. ಈ ಸಂದರ್ಭ ಚೀನಾ ಸೇನಾ ಪಡೆಯ ಯೋಧರು ಕಲ್ಲು ತೂರಾಟ ನಡೆಸಿದ್ದರು. ಭಾರತೀಯ ಯೋಧರು ಕೂಡಾ ಪ್ರತಿದಾಳಿ ನಡೆಸಿದ್ದರು. ಇದರಿಂದ ಎರಡೂ ಕಡೆಯ ಯೋಧರು ಗಾಯಗೊಂಡಿದ್ದರು.
ಈ ಘರ್ಷಣೆಯನ್ನು ಹಿರಿಯ ಸೇನಾಧಿಕಾರಿಗಳು ನಿರಾಕರಿಸಿಲ್ಲ. ಪೂರ್ವ ಹಿಮಾಲಯದ ಸಿಕ್ಕಿಂನ ಡೋಕಾ ಲಾದಲ್ಲಿ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಇರುವ ಈ ಸಂದರ್ಭ ಲಡಾಖ್ನ ಈ ಘರ್ಷಣೆ ಭಾರತ ಹಾಗೂ ಚೀನದ ನಡುವಿನ ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ಹೇಳಲಾಗುತ್ತಿದೆ.
ಆದರೆ, ಡೋಕಾ ಲಾ ಗಡಿಯಲ್ಲಿ ಚೀನಾ ಭಾರತ ನಡುವೆ ಘರ್ಷಣೆ ನಡೆದ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದು ಚೀನಾ ಸರಕಾರದ ವಕ್ತಾರ ಹೇಳಿದ್ದಾರೆ.
ಸರಕಾರ ಹೇಳಿಕೆ ನೀಡುವ ವಿಚಾರ ಇದಲ್ಲ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.