ಉತ್ಕಲ್ ಎಕ್ಸ್ಪ್ರೆಸ್ ದುರಂತ: ಉಗ್ರರ ಸಂಚು ಅಲ್ಲ; ಉ.ಪ್ರ. ಪೊಲೀಸ್
Update: 2017-08-21 16:49 GMT
ಹೊಸದಿಲ್ಲಿ, ಆ. 21: ಖಟೌಲಿಯಲ್ಲಿ ಉತ್ಕಲ್ ಕಳಿಂಗ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿರುವ ಘಟನೆಯಲ್ಲಿ ಭಯೋತ್ಪಾದಕ ಸಂಘಟನೆಗಳು ಭಾಗಿಯಾದ ಬಗ್ಗೆ ಯಾವುದೇ ಪುರಾವೆ ಇಲ್ಲ ಎಂದು ಉತ್ತರಪ್ರದೇಶ ಪೊಲೀಸ್ ಎಡಿಜಿ (ಕಾನೂನು ಹಾಗೂ ಸುವ್ಯವಸ್ಥೆ) ತಿಳಿಸಿದ್ದಾರೆ.
ನಿನ್ನೆಯಿಂದ ಎಟಿಎಸ್ ಘಟನಾ ಸ್ಥಳದಲ್ಲಿ ನೆಲೆಸಿದೆ. ಘಟನೆಯಲ್ಲಿ ಭಯೋತ್ಪಾದಕ ಸಂಘಟನೆ ಭಾಗಿಯಾಗಿರುವ ಬಗ್ಗೆ ಇದುವರೆಗೆ ಯಾವುದೇ ಪುರಾವೆ ದೊರಕಿಲ್ಲ ಎಂದು ಎಡಿಜಿ ಆನಂದ್ ಕುಮಾರ್ ಹೇಳಿದ್ದಾರೆ.
ಇತರ ಕೆಲವು ಅಥವಾ ತಾಂತ್ರಿಕ ಕಾರಣಗಳಿಂದ ರೈಲು ಹಳಿ ತಪ್ಪಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಹಳಿಯಲ್ಲಿ ನಿರ್ವಹಣಾ ಕಾಮಗಾರಿ ನಡೆಯುತ್ತಿತ್ತು ಎಂದು ತೋರುತ್ತದೆ. ಕೆಲವು ನಿರ್ವಹಣಾ ಕೆಲಸ ನಡೆಯುತ್ತಿದ್ದ ಸಂದರ್ಭ ಉತ್ಕಲ್ ಎಕ್ಸ್ಪ್ರೆಸ್ ಬಂದ ಕಾರಣಕ್ಕೆ ಹಳಿ ತಪ್ಪಿದೆ ಎಂದು ರೈಲ್ವೆ ಮಂಡಳಿಯ ಸದಸ್ಯ ಮುಹಮ್ಮದ್ ಜಮ್ಶದ್ ತಿಳಿಸಿದ್ದಾರೆ.