ಆ. 27ಕ್ಕೆ ವಿಷ್ಣು ರಾಷ್ಟ್ರೀಯ ಹಬ್ಬ

Update: 2017-08-22 18:25 GMT

ನಟನೊಬ್ಬನ ಹೆಸರಿನಲ್ಲಿ ರಾಷ್ಟ್ರೀಯ ಉತ್ಸವವನ್ನು ಹಮ್ಮಿಕೊಳ್ಳುತ್ತಿರುವುದು ಇದೇ ಪ್ರಥಮ. ಆಗಸ್ಟ್ 27ರಂದು ಭಾನುವಾರ ದೆಹಲಿಯಲ್ಲಿ ಅದ್ಧೂರಿಯಾಗಿ ನಡೆಯಲಿರುವ 'ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ'ದ ವಿವರವಾದ ಮಾಹಿತಿಯನ್ನು ಪತ್ರಿಕಾಗೋಷ್ಠಿಯಲ್ಲಿ ‌ನೀಡಲಾಯಿತು.

ಡಾ. ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ನೇತೃತ್ವದಲ್ಲಿ ನಡೆಯಲಿರುವ ಉತ್ಸವದ ಕುರಿತು ಅವರೇ ಮಾತನಾಡಿ, "ಕಾರ್ಯಕ್ರಮವು ನವದೆಹಲಿಯ   ಎಂ ವಿಶ್ವೇಶ್ವರಯ್ಯ ಮೆಟ್ರೋ ಹತ್ತಿರ ಮೋತಿಭಾಗ್ ನಲ್ಲಿ ಅಲ್ಲಿನ ಕರ್ನಾಟಕ ಸಂಘದ ಸಹಯೋಗದಲ್ಲಿ ನಡೆಯಲಿದೆ.

ಬೆಳಿಗ್ಗೆ 6ಗಂಟೆಯಿಂದ ರಾತ್ರಿ 12ರವರೆಗೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಮುಖ್ಯವಾಗಿ, ವಿಷ್ಣುವರ್ಧನ್ ಅವರ 6ಅಡಿ ಎತ್ತರದ ಪ್ಲಾಸ್ಟರ್ ಆಫ್ ಪ್ಯಾರಿಸ್ ಪ್ರತಿಮೆಯ ಅನಾವರಣ ಮತ್ತು ಅವರ ಸಿನಿಮಾ ಮತ್ತು ಖಾಸಗಿ ಬದುಕಿನ ವಿವಿಧ ಘಟ್ಟಗಳನ್ನು ನೆನಪಿಸುವಂಥ ಸಾವಿರಾರು ಛಾಯಾಚಿತ್ರಗಳ‌ ಪ್ರದರ್ಶನವನ್ನು ಏರ್ಪಡಿಸಲಾಗಿದೆ'' ಎಂದರು.

ಛಾಯಾಚಿತ್ರ ಪ್ರದರ್ಶನ  'ನೆನಪಿನೋತ್ಸವ' ದ ನೇತೃತ್ವ ವಹಿಸಿರುವ ಚಿತ್ರಲೋಕ ಡಾಟ್ ಕಾಮ್ ನ ಸಂಪಾದಕ ವೀರೇಶ್ ಮಾತನಾಡುತ್ತಾ, " ಈ ಹಿಂದೆ ನಾನು ಕಳೆದ ಮೂರು ದಶಕಗಳಿಂದ ಕ್ಲಿಕ್ಕಿಸಿದ ಮೂರು ಸಾವಿರದಷ್ಟು ಫೊಟೋಗಳನ್ನು ಪ್ರದರ್ಶಿಸಿದಾಗ ಅದು ಲಿಮ್ಕಾ ದಾಖಲೆಯಾಗಿತ್ತು. ಆದರೆ ಈ ಬಾರಿಯ ಪ್ರದರ್ಶನದಲ್ಲಿ ನಾನು ತೆಗೆದಿರುವ ಚಿತ್ರಗಳೊಂದಿಗೆ ಇತರ ಪತ್ರಿಕಾ ಛಾಯಾಗ್ರಾಹಕರು ಮತ್ತು ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕರಿಂದ ಸಂಗ್ರಹಿಸಲಾದ ಚಿತ್ರಗಳೂ ಸೇರಿರುತ್ತವೆ" ಎಂದರು.

ಸಂಗ್ರಹಿತ ಅನುದಾನಗಳೊಂದಿಗೆ ನಡೆಸಬೇಕಾದ ಇಂಥ ದೊಡ್ಡ ಸಿನಿ‌ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೀರಕಪುತ್ರ ಶ್ರೀನಿವಾಸ್ ಒಬ್ಬರೇ ತಮ್ಮ‌ ಕೈಯಿಂದಲೇ ದುಡ್ಡು ಹಾಕುತ್ತಿರುವುದು ಅವರ ಅಭಿಮಾನದ ಪರಾಕಾಷ್ಠೆಯನ್ನು ತೋರಿಸುತ್ತದೆ ಎಂದು ವೀರೇಶ್ ಹೇಳಿದರು. ದೆಹಲಿಯಲ್ಲಿ 'ಡಾ. ವಿಷ್ಣುವರ್ಧನ್ ರಾಷ್ಟ್ರೀಯ ಪ್ರಶಸ್ತಿ'ಗೆ ಭಾಜನರಾಗಲಿರುವ  ವಿಷ್ಣುವರ್ಧನ್ ರ ಆತ್ಮೀಯ, ಹಿರಿಯ ನಟ ಶಿವರಾಮ್ ಅವರು , "ವಿಷ್ಣುವರ್ಧನ್ ಸಂಪತ್ ಕುಮಾರ್ ಹೆಸರಿನಲ್ಲಿ ಕಾಲೇಜಿನಲ್ಲಿದ್ದ ದಿನಗಳಿಂದಲೇ ನನಗೆ ಪರಿಚಿತ. ಚಿತ್ರರಂಗಕ್ಕೆ ಬಂದಮೇಲೆ ಆತ್ಮೀಯನಾದ. ಆತನ ನಿಧನ ಅನಿರೀಕ್ಷಿತವಾಗಿತ್ತು. ಆದರೆ ಅಭಿಮಾನಿಗಳು ಇಂದಿಗೂ‌ ವಿಷ್ಣುವನ್ನು ಜೀವಂತವಾಗಿರಿಸಿದ್ದಾರೆ. ಆತನಿಗಾಗಿ ಇದುವರೆಗೆ ತಾವು ಆಗಸದಲ್ಲಿ ಮಾತ್ರ ಕಂಡಿದ್ದ ವಿಮಾನದಲ್ಲಿ ಖುದ್ದಾಗಿ ಟಿಕೆಟ್ ಗಳನ್ನು ಕಾಯ್ದಿರಿಸಿದ್ದಾರೆ. ರೈಲ್ವೇ ಟಿಕೆಟ್ ಗಳನ್ನು ಕೂಡ ಬುಕ್ ಮಾಡಿದ್ದು ಬೋಗಿಗಳು‌ ತುಂಬಿರುವುದು ಅವರ ಅವರ ಅಭಿಮಾನಕ್ಕೆ ಸಾಕ್ಷಿಯಾಗಿದೆ" ಎಂದರು. ವಿಷ್ಣುವರ್ಧನ್ ಅಭಿಮಾನಿ ತಿಮ್ಮೇಗೌಡರು ಉಪಸ್ಥಿತರಿದ್ದರು.

ವಿಶೇಷ ಕಾರ್ಯಕ್ರಮಗಳು

ಬೆಳಿಗ್ಗೆ 7ಕ್ಕೆ ಜಾನಪದ ಕಲಾ ತಂಡಗಳೊಂದಿಗೆ ಡಾ.ವಿಷ್ಣುವರ್ಧನ್ ಭಾವಚಿತ್ರ ಮೆರವಣಿಗೆ.

9 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮನು ಬಳಿಗಾರ್ ಅವರಿಂದ ನಟ ಡಾ.ವಿಷ್ಣುವರ್ಧನ್ ಪ್ರತಿಮೆಯ ಅನಾವರಣ.

10 ಗಂಟೆಗೆ ಛಾಯಾಚಿತ್ರ ಪ್ರದರ್ಶನದ ಉದ್ಘಾಟನೆ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ ಎ ನಾರಾಯಣ ಗೌಡರಿಂದ.

10 ಗಂಟೆಗೆ ಸಾಹಿತಿ ಪುರುಷೋತ್ತಮ ಬಿಳಿಮಲೆಯವರಿಂದ ಸಮಾರಂಭದ ಉದ್ಘಾಟನೆ.

ಕನ್ನಡ ಸಾಂಸ್ಕೃತಿಕ ಲೋಕಕ್ಕೆ ವಿಷ್ಣುವರ್ಧನ್ ಕೊಡುಗೆಯ ಬಗ್ಗೆ ಸಿನಿಮಾ ಪತ್ರಕರ್ತರಿಂದ ಅಭಿಪ್ರಾಯ ಮಂಡನೆ.

ಅಪರಾಹ್ನ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ವಿಷ್ಣುವರ್ಧನ್ ಚಿತ್ರಗಳ‌ ವಿಶೇಷ ರಸಮಂಜರಿ.

ಇವಿಷ್ಟು ಉತ್ಸವದ ವಿಶೇಷತೆಗಳಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಚಲನಚಿತ್ರ ಅಕಾಡೆಮಿಯ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ  ಸಾ ರಾ ಗೋವಿಂದು, ರಾಜೇಂದ್ರ ಸಿಂಗ್ ಬಾಬು, ಆದಿತ್ಯ, ತಾರಾ, ಚರಣ್ ರಾಜ್, ಶೋಭರಾಜ್, ಸಾಧುಕೋಕಿಲ, ರಾಗಿಣಿ ಸೇರಿದಂತೆ ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News