'ದಶರಥ' ನೃತ್ಯ ಸಂಭ್ರಮ

Update: 2017-08-24 04:22 GMT

ಎಂ.ಎಸ್.ರಮೇಶ್ ನಿರ್ದೇಶನದಲ್ಲಿ ಪ್ರಥಮ ಬಾರಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸುತ್ತಿರುವ ಚಿತ್ರ 'ದಶರಥ'ದ ಚಿತ್ರೀಕರಣ ಭರದಿಂದ ಸಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಸುತ್ತಮುತ್ತ ನಡೆಯುತ್ತಿರುವ ಚಿತ್ರೀಕರಣದ ವೇಳೆ 'ವಾರ್ತಾಭಾರತಿ'ಗೆ ಕಂಡ ಸನ್ನಿವೇಶಗಳು ಹೀಗಿವೆ.

ಚಿತ್ರದಲ್ಲಿ ಕನ್ನಡದ ನವನಾಯಕಿ ಚೆಲುವೆ ಮೇಘಶ್ರೀ ರವಿಚಂದ್ರನ್ ‌ರ ಪುತ್ರಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಆಕೆ ಅಪಘಾತಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿರುವ ಸನ್ನಿವೇಶದಲ್ಲಿ ಆತಂಕದಿಂದ ಬಂದು ವೀಕ್ಷಿಸುವ ತಂದೆ ತಾಯಿಯಾಗಿ ರವಿಚಂದ್ರನ್ ಮತ್ತು ಸೋನಿಯಾ ಅಗರವಾಲ್ ನಟಿಸಿದ ದೃಶ್ಯಗಳನ್ನು ಈ‌ ಸಂದರ್ಭದಲ್ಲಿ ಚಿತ್ರೀಕರಿಸಲಾಯಿತು.

'ಚಂದು' ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರ ಗಮನ ಸೆಳೆದಿದ್ದ ಸೋನಿಯಾ ಅಗರವಾಲ್ ದೊಡ್ಡದೊಂದು ಅಂತರದ ಬಳಿಕ‌ ಚಂದನವನದತ್ತ ಮುಖ ಮಾಡಿದ್ದಾರೆ. ಚಿತ್ರದಲ್ಲಿ ಮೇಘ ಶ್ರೀ ಜೋಡಿಯಾಗಿ ಯುವನಟ ಅಭಿಲಾಷ್ ನಟಿಸುತ್ತಿದ್ದಾರೆ. ಅವರ ಸಹೋದರನ ಪಾತ್ರದಲ್ಲಿ ಮತ್ತೋರ್ವ ನಟ ಭರತ್ ಕಾಣಿಸಿಕೊಳ್ಳುತ್ತಿದ್ದಾರೆ.

ಸಾಮಾನ್ಯವಾಗಿ ರಾಮಾಯಣ ಓದಿದವರೆಲ್ಲರಿಗೂ ದಶರಥನ ನಾಲ್ಕು ಗಂಡುಮಕ್ಕಳ ಕತೆಯಷ್ಟೇ ತಿಳಿದಿರುತ್ತದೆ. ಆದರೆ ಚಿತ್ರದ ಮೂಲಕ ಎಂ.ಎಸ್.ರಮೇಶ್ ದಶರಥ ನ ಪುತ್ರಿಯ ಕತೆಯನ್ನು ಹೇಳುತ್ತಿದ್ದಾರೆ! ಚಿತ್ರದಲ್ಲಿ 'ರಕ್ತಕಣ್ಣೀರು' ಖ್ಯಾತಿಯ  ಅಭಿರಾಮಿ ವಿಶೇಷ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಬಿಡದಿ ಸಮೀಪ ಇನೋವೇಟಿವ್ ಸಿಟಿಯಲ್ಲಿ ಚಿತ್ರದ ಹಾಡಿನ ಚಿತ್ರೀಕರಣ ಅದ್ಧೂರಿಯಾಗಿ ನಡೆದಿತ್ತು. ಗುರುಕಿರಣ್ ಸಂಗೀತ ನಿರ್ದೇಶನದ ಹಾಡಿನಲ್ಲಿ ರವಿಚಂದ್ರನ್, ಸೋನಿಯಾ ಅಗರವಾಲ್ ಜೊತೆಗೆ ಮೇಘಶ್ರೀ ಸೇರಿದಂತೆ ಕಲಾವಿದರನೇಕರು ಪಾಲ್ಗೊಂಡಿದ್ದರು. ಈಗಾಗಲೇ ತೆಲುಗು ಚಿತ್ರಗಳಲ್ಲಿ ನಟಿಸುವ ಮೂಲಕ ಗುರುತಿಸಿಕೊಂಡಿರುವ ಕರಾವಳಿಯ ಕನ್ನಡತಿ ಮೇಘಶ್ರೀಗೆ ಈ ವಾರ ತೆರೆ ಕಾಣುತ್ತಿರುವ 'ಮಾರ್ಚ್ 22' ಪ್ರಥಮ ಕನ್ನಡ ಚಿತ್ರವಾಗಲಿದೆ. 'ದಶರಥ' ತಮ್ಮ ಬಹು ನಿರೀಕ್ಷಿತ ಚಿತ್ರ ಎನ್ನುವುದು ಅವರ ಅಭಿಮತ.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News