ಗುರ್ಮಿತ್ ಸಿಂಗ್ ಗೆ ಜೈಲಿನಲ್ಲಿ ಕೆಲಸವೇನು ? ದಿನಕ್ಕೆ ಎಷ್ಟು ಕೂಲಿ ?
ಚಂಡೀಗಢ,ಸೆ.5: ಅತ್ಯಾಚಾರ ಪ್ರಕರಣಗಳಲ್ಲಿ ಜೈಲುಶಿಕ್ಷೆಗೆ ಗುರಿಯಾಗಿ ತಾನು ಅನುಭವಿಸುತ್ತಿದ್ದ ಎಲ್ಲ ಐಷಾರಾಮಗಳಿಂದ ವಂಚಿತನಾಗಿರುವ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮಿತ್ ಸಿಂಗ್ ಶೀಘ್ರವೇ ಜೈಲಿನಲ್ಲಿ ತೋಟದ ಮಾಲಿಯಾಗಿ ಕೆಲಸ ಮಾಡಲಿದ್ದಾನೆ. ಇದಕ್ಕಾಗಿ ಅತನಿಗೆ ದಿನಕ್ಕೆ 40 ರೂ.ಕೂಲಿ ದೊರೆಯಲಿದೆ. ರೋಹ್ಟಕ್ನ ಸುನರಿಯಾ ಜೈಲಿನಲ್ಲಿಯ ಪರಿಸ್ಥಿತಿಗೆ ಹೊಂದಿಕೊಳ್ಳಲು ಇನ್ನೂ ಸಾಧ್ಯವಾಗದೆ ಕಕ್ಕಾಬಿಕ್ಕಿಯಾಗಿರುವ ಗುರ್ಮಿತ್ಗೆ ಮಾಲಿಯ ಕೆಲಸವೂ ದೊಡ್ಡಹೊರೆಯೇ ಆಗಲಿದೆ. ಜೈಲಿನ ಕ್ಯಾಂಟೀನ್ನಲ್ಲಿ ದೊರೆಯು ತ್ತಿರುವ ಮಿನರಲ್ ವಾಟರ್ನ್ನಷ್ಟೇ ಆತ ಕುಡಿಯುತ್ತಿರುವುದು ಆತನ ಸ್ಥಿತಿಯನ್ನು ವಿವರಿಸುತ್ತದೆ.
ಜೈಲಿನಲ್ಲಿ ತನ್ನನ್ನಿರಿಸಲಾಗಿರುವ 8x8 ಅಳತೆಯ ಕೋಣೆಯಲ್ಲಿ ಅವಿಶ್ರಾಂತವಾಗಿ ಅತ್ತಿತ್ತ ಓಡಾಡುತ್ತಲೇ ಇರುವ ಗುರ್ಮಿತ್ ಗೋಡೆಗಳೊಂದಿಗೆ ಮಾತನಾಡುತ್ತಿರುತ್ತಾನೆ ಎಂದು ಮೂಲಗಳು ತಿಳಿಸಿವೆ.
ಅತ್ಯಾಚಾರ ಪ್ರಕರಣದಲ್ಲಿ ಗುರ್ಮಿತ್ ಅಪರಾಧಿ ಎಂದು ಆ.25ರಂದು ಘೋಷಿಸಿದ್ದ ಪಂಚಕುಲಾದ ವಿಶೇಷ ಸಿಬಿಐ ನ್ಯಾಯಾಲಯವು ಆ.28ರಂದು ಆತನಿಗೆ 20 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದೆ. ಆತನ ವಿರುದ್ಧದ ಎರಡು ಕೊಲೆ ಪ್ರಕರಣಗಳ ವಿಚಾರಣೆಯು ಅಂತಿಮ ಹಂತದಲ್ಲಿದೆ.
ಜೈಲಿನಲ್ಲಿ ತನ್ನನ್ನು ನೋಡಿಕೊಳ್ಳಲು ದತ್ತುಪುತ್ರಿ ಹನಿಪ್ರೀತ್ ಇನ್ಸಾನ್ಳ ವಾಸಕ್ಕೆ ಅವಕಾಶ ನೀಡುವಂತೆ ಗುರ್ಮಿತ್ ಮಾಡಿಕೊಂಡಿದ್ದ ಮನವಿಯನ್ನು ಅಧಿಕಾರಿಗಳು ಈಗಾಗಲೇ ತಿರಸ್ಕರಿಸಿದ್ದಾರೆ. ಆತನ ನೆರವಿಗಾಗಿ ಇಬ್ಬರು ಕೈದಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಲಾಗಿದೆ. ಗುರ್ಮಿತ್ಗೆ ಜೈಲುಕೋಣೆಯಲ್ಲಿರುವ ಏಕೈಕ ಅನುಕೂಲವೆಂದರೆ ಆತನ ಎರಡು ಹೊದಿಕೆಗಳು ಮತ್ತು ಹತ್ತಿಯ ಹಾಸಿಗೆ ಮಾತ್ರ.
ಜೈಲು ಸೇರಿದ ಎರಡೇ ದಿನಗಳಲ್ಲಿ ಆಹಾರದ ಕಳಪೆ ಗುಣಮಟ್ಟದ ಬಗ್ಗೆ ದೂರಿ ಕೊಂಡಿದ್ದ ಗುರ್ಮಿತ್ ಹೆಚ್ಚಿನ ಆಹಾರ ತಿಂದಿರಲಿಲ್ಲ. ಎದೆನೋವು ಮತ್ತು ಅಧಿಕ ರಕ್ತದೊತ್ತಡದ ಬಗ್ಗೆಯೂ ಆತ ದೂರಿದ್ದ. ಸದ್ಯ ಆತನಿಗೆ ಜೈಲಿನ ಊಟದ ಜೊತೆಗೆ ಹಣ್ಣುಗಳನ್ನು ಒದಗಿಸಲಾಗುತ್ತಿದೆ.
ತನ್ನ ಸಹಕೈದಿಗಳಂತೆ ಗುರ್ಮಿತ ಜೈಲಿನಲ್ಲಿ ಕೆಲಸವನ್ನು ಇನ್ನಷ್ಟೇ ಆರಂಭಿಸಬೇಕಿದೆ. ರಾತ್ರಿ ತಡವಾಗಿ ಮಲಗುವ ಆತ ಬೆಳಿಗ್ಗೆ ಧ್ಯಾನದಲ್ಲಿ ತೊಡಗಿರುತ್ತಾನೆ. ಕಳೆದ ಎರಡು ದಿನಗಳಲ್ಲಿ ಆತ ಜೈಲಿನ ಸ್ಥಿತಿಗೆ ಅನಿವಾರ್ಯವಾಗಿ ಒಗ್ಗಿಕೊಂಡಿರುವಂತಿದೆ.
ಗುರ್ಮಿತ್ ಜೈಲಿನಲ್ಲಿಯ ಇತರ ಕೈದಿಗಳ ಆಕರ್ಷಣೆಯ ಕೇಂದ್ರವಾಗಿದ್ದಾನೆ. ಆದರೆ ಇದೇ ವೇಳೆ ಜೈಲು ಆವರಣ ಪ್ರವೇಶ ಮತ್ತು ನಿರ್ಗಮನವನ್ನು ನಿರ್ಬಂಧಿಸಿರುವುದರಿಂದ ಕಳೆದೊಂದು ವಾರದಲ್ಲಿ ತಮ್ಮ ಜಾಮೀನು ಅರ್ಜಿಗಳ ಸಲ್ಲಿಕೆಗೆ ಕೈದಿಗಳು ಪರದಾಡು ತ್ತಿದ್ದಾರೆ. ಕೆಲವರಿಗೆ ಬಿಡುಗಡೆ ಆದೇಶ ಹೊರಬಿದ್ದಿದ್ದರೂ ಅವರು ಹೊರಬರಲೂ ಕಷ್ಟಪಡುವಂತಾಗಿದೆ ಎಂದು ಇತ್ತೀಚಿಗಷ್ಟೇ ಈ ಜೈಲಿನಿಂದ ಜಾಮೀನು ಬಿಡುಗಡೆ ಗೊಂಡಿರುವ ದಲಿತ ಕಾರ್ಯಕರ್ತ ಸ್ವರಾಜ್ ಕಿರಾಡ್ ಹೇಳಿದ್ದಾರೆ.
ಅಲ್ಲದೆ ಪ್ರತಿ ಬಾರಿ ಗುರ್ಮಿತನನ್ನು ಕೋಣೆಯಿಂದ ಹೊರಗೆ ತರುವಾಗ ಇತರ ಕೈದಿಗಳನ್ನು ಅವರ ಕೋಣೆಗಳಿಗೆ ವಾಪಸ್ ಕಳುಹಿಸಲಾಗುತ್ತಿದೆ. ಅಂದ ಹಾಗೆ ಗುರ್ಮಿತ್ ಇನ್ನೂ ಜೈಲಿನ ಸಮವಸ್ತ್ರವನ್ನು ಧರಿಸಲು ಆರಂಭಿಸಿಲ್ಲ ಎಂದು ವರದಿಗಳು ತಿಳಿಸಿವೆ.