“ಶೌಚಾಲಯಕ್ಕಾಗಿ ಗುಂಡಿ ತೋಡಿ”
ಮಧ್ಯಪ್ರದೇಶ, ಸೆ.17: ಪ್ರಧಾನಿ ನರೇಂದ್ರ ಮೋದಿವರ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾದ ‘ಸ್ವಚ್ಛತಾ ಹೈ ಸೇವಾ’ ಆಂದೋಲನದಂಗವಾಗಿ ಮಧ್ಯಪ್ರದೇಶ ಸರಕಾರವು ಟಿಕಾಂಗರ್ ಜಿಲ್ಲೆಯ ಶಿಕ್ಷಕರಿಗೆ ಶೌಚಾಲಯಕ್ಕಾಗಿ ಗುಂಡಿ ತೋಡುವ ಕೆಲಸ ನೀಡಿದೆ.
ಕಾರ್ಯಕ್ರಮದಡಿ ಶಿಕ್ಷಕರು ಶೌಚಾಲಯಕ್ಕಾಗಿ ವಿವಿಧ ಗ್ರಾಮಗಳಲ್ಲಿ ಗುಂಡಿಗಳನ್ನು ತೋಡಬೇಕು ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಶುಕ್ರವಾರ ಆದೇಶ ಹೊರಡಿಸಿದ್ದರು. ಆದೇಶದಲ್ಲಿ ಕಾರ್ಯಕ್ರಮದ ಹೆಸರನ್ನು ನೀಡಲಾಗಿತ್ತು. ಆದರೆ ಪ್ರಧಾನಿಯ ಜನ್ಮ ದಿನದ ವಿಚಾರವಿರಲಿಲ್ಲ.
“ಜಿಲ್ಲಾಡಳಿತದ ವತಿಯಿಂದ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛತಾ ಆಂದೋಲವನ್ನು ಉತ್ತೇಜಿಸಲು ಈ ನಿರ್ಧಾರ ಕೈಗೊಳ್ಳಲಾಯಿತು. ಸ್ವಚ್ಛತಾ ರ್ಯಾಲಿಯನ್ನು ಹಮ್ಮಿಕೊಳ್ಳಲು ಹಾಗೂ ಪಂಚಾಯತ್ ಗಳಿಗೆ ನೆರವಾಗಲು ಶೌಚಾಲಯದ ಗುಂಡಿ ತೋಡಲು ನಿರ್ಧರಿಸಲಾಯಿತು. ಪತ್ರದಲ್ಲಿ ನಾವು ಪ್ರಧಾನಿಯವರ ಹುಟ್ಟುಹಬ್ಬದ ಬಗ್ಗೆ ಉಲ್ಲೇಖಿಸಿರಲಿಲ್ಲ” ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಆದರೆ ಸರಕಾರದ ಈ ಆದೇಶವು ಶಿಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. “ಶೌಚಾಲಯ ನಿರ್ಮಾಣಕ್ಕಾಗಿ ಶಿಕ್ಷಕರು ಗುಂಡಿ ತೋಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಶಿಕ್ಷಕರ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಯಾವುದೇ ಆಂದೋಲನ ಅಥವಾ ಕಾರ್ಯಕ್ರಮವನ್ನು ನಡೆಸಬಾರದು” ಎಂದು ಮಧ್ಯಪ್ರದೇಶ ಅಧ್ಯಾಪಕ ಸಂಘರ್ಷ್ ಸಮಿತಿಯ ಉಪಾಧ್ಯಕ್ಷ ವಿವೇಕ್ ಖರೆ ಹೇಳಿದ್ದಾರೆ.