ಅಕ್ಟೋಬರ್ ನಲ್ಲಿ 'ಒನ್ಸ್ ಮೋರ್ ಕೌರವ' ಆಗಮನ

Update: 2017-09-19 12:57 GMT

ಒಂದಷ್ಟು ಗ್ಯಾಪ್ ಬಳಿಕ ನಿರ್ದೇಶಕ ಮಹೇಂದರ್ ಮರಳಿ ಬರುತ್ತಿರುವ ಚಿತ್ರವೇ 'ಒನ್ಸ್ ಮೋರ್ ಕೌರವ.' ಅಕ್ಟೋಬರ್ 13ರಂದು ತೆರೆಗೆ ಬರಲಿರುವ ಚಿತ್ರದ ಪತ್ರಿಕಾಗೋಷ್ಠಿ ಮಲ್ಲೇಶ್ವರಂ ಎಸ್ ಆರ್ ವಿ ಸಭಾಂಗಣದಲ್ಲಿ ನಡೆಯಿತು.

ನಿರ್ದೇಶಕ ಮಹೇಂದರ್ ಮಾತನಾಡುತ್ತಾ "ಇದು  ಎರಡು ಆಯಾಮಗಳ ಕತೆ. ಚಿತ್ರದಲ್ಲಿ ಬರುವ ಫ್ಲ್ಯಾಶ್‌ ಬ್ಯಾಕ್ ದೃಶ್ಯಗಳಲ್ಲಿ ಹಳೆಯ ಕಾಲದ ಕಲಾವಿದರನ್ನು ಬಳಸಿದ್ದೇನೆ. ಆದರೆ ಇದಕ್ಕೂ ಹಿಂದೆ ನಾನೇ ನಿರ್ದೇಶಿಸಿದ್ದ 'ಕೌರವ' ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ " ಎಂದು ಸ್ಪಷ್ಟಪಡಿಸುತ್ತಾರೆ ಮಹೇಂದರ್.

"ಕೆ. ಕಲ್ಯಾಣ್ ಸಾಹಿತ್ಯ ಶ್ರೀಧರ್ ಸಂಭ್ರಮ್ ಅವರು ನೀಡಿರುವ ಸಂಗೀತ ಚಿತ್ರದ ಪ್ರಮುಖ ಆಕರ್ಷಕ ಅಂಶವಾಗಿದ್ದು, ಮಹೇಂದರ್ ರ  ಆತ್ಮೀಯ ಛಾಯಾಗ್ರಾಹಕ ಕೃಷ್ಣ ಕುಮಾರ್ ನೀಡಿರುವ ಚೇತೋಹಾರಿ ದೃಶ್ಯಗಳು ಕೂಡ ಪ್ರಮುಖ ಬೆಂಬಲವಾಗಿದೆ" ಎಂದು ಚಿತ್ರದ ನಾಯಕ ಮತ್ತು ನಿರ್ಮಾಪಕರಾಗಿರುವ ನರೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಯುಎ ಸರ್ಟಿಫಿಕೇಟ್ ದೊರಕಿರುವ ಚಿತ್ರದ ಸಂಗೀತ ನಿರ್ದೇಶಕ ಶ್ರೀಧರ ಸಂಭ್ರಮ್, "ನಾನು ನೀಡಿದ ಟ್ಯೂನ್ ಗೆ  ಅದ್ಭುತವಾಗಿ ಸಾಹಿತ್ಯ ಬರೆದವರು ಕಲ್ಯಾಣ್" ಎಂದರು. ಚಿತ್ರದ ನಾಯಕಿ ಅನುಷಾ ಮಾತನಾಡಿ " ನಾನು ಹಳ್ಳಿಯ ಬಜಾರಿ ಹುಡುಗಿ ಪಾತ್ರ ಮಾಡಿದ್ದೇನೆ. ಕನ್ನಡದ ಅಭಿಮಾನವುಳ್ಳ ಹುಡುಗಿ" ಎಂದು ತಮ್ಮ ಪಾತ್ರವೈಖರಿಯ ಬಗ್ಗೆ ತಿಳಿಸಿದರು. ಬೆಣ್ಣೆ ಕರಿಯಪ್ಪನಾಗಿ ನಟಿಸಿರುವ ವಿಜಯ್ ಚೆಂಡೂರ್, ರಂಗಭೂಮಿ ಕಲಾವಿದರಾದ ಶ್ರೀಧರ್ ದಿಲೀಪ್ ಗೌಡ ಜತೆಗೆ ಚಿನ್ಮಯಿ ಮತ್ತು ಜಯೇಶ್ ಎಂಬ ಬಾಲತಾರೆಯರೂ ಚಿತ್ರದಲ್ಲಿದ್ದಾರೆ.

ಈ ಸಂದರ್ಭದಲ್ಲಿ ನೃತ್ಯ ನಿರ್ದೇಶಕ ಮಾಲೂರು ಶ್ರೀನಿವಾಸ್, ಛಾಯಾಗ್ರಾಹಕ ಕೃಷ್ಣ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News