'777 ಚಾರ್ಲಿ'ಗೆ ರಕ್ಷಿತ್ ನಿರ್ಮಾಪಕ

Update: 2017-10-06 12:12 GMT

‘ಕಿರಿಕ್ ಪಾರ್ಟಿ’ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದ ಸಿನೆಮಾವೆಂದು ಬಣ್ಣಿಸಿದಲ್ಲಿ ಅದು ತಪ್ಪಾಗಲಾರದು. ಕಿರಿಕ್ ಪಾರ್ಟಿಯ ನಟ ರಕ್ಷಿತ್ ಶೆಟ್ಟಿಗೂ ಹೊಸ ಇಮೇಜ್ ತಂದುಕೊಟ್ಟಿದೆ. ಹಾಗೆಯೇ ಈ ನಟನ ಬಗ್ಗೆ ಪ್ರೇಕ್ಷಕರ ನಿರೀಕ್ಷೆಯೂ ಹೆಚ್ಚಾಗಿದೆ. ರಕ್ಷಿತ್ ಮಾತ್ರವಲ್ಲ ಕಿರಿಕ್ ಪಾರ್ಟಿಯ ಉಳಿದ ತಾರೆಯರಿಗೂ, ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆ ದೊರೆತಿದೆ. ಆ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಯ ಗೆಳೆಯನ ಪಾತ್ರ ನಿರ್ವಹಿಸಿದ್ದ ಅರವಿಂದ್ ಅಯ್ಯರ್ ಕೂಡಾ ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿಯಾಗಿದ್ದು, ಆತನ ಕೈಯಲ್ಲಿ ಈಗ ಎರಡು ಚಿತ್ರಗಳವೆ. ಒಂದೆಡೆ ಅಯ್ಯರ್ ವಿಭಿನ್ನ ಕಥಾವಸ್ತುವಿನ ‘ಭೀಮಸೇನ ನಳಮಹಾರಾಜ’ದ ಜೊತೆಗೆ ೆ 777 ಚಾರ್ಲಿ ಚಿತ್ರದಲ್ಲೂ ನಟಿಸುತ್ತಿದ್ದಾರೆ. 777 ಚಾರ್ಲಿಯ ವಿಶೇಷವೆಂದರೆ ಈ ಚಿತ್ರಕ್ಕೆ ಸ್ವತಃ ರಕ್ಷಿತ್ ಶೆಟ್ಟಿ ನಿರ್ಮಾಪಕರಾಗಿದ್ದಾರೆ. ಈ ಚಿತ್ರದ ಕೆಲವು ಸ್ಟಿಲ್‌ಗಳು ಆನ್‌ಲೈನ್‌ನಲ್ಲಿ ಬಿಡುಗಡೆಗೊಂಡಿದ್ದು, ನೋಡುಗರಿಗೆ ಹೊಸತನದ ಫೀಲ್ ನೀಡುತ್ತಿದೆ. ಈ ಚಿತ್ರವು ಸ್ಯಾಂಡಲ್‌ವುಡ್‌ನ ಮಾಮೂಲಿ ಕಮರ್ಶಿಯಲ್ ಚಿತ್ರಗಳಿಗಿಂತ ತೀರಾ ಭಿನ್ನವೆಂಬುದನ್ನು ಹೇಳಲು ಈ ಸ್ಟಿಲ್ಸ್‌ಗಳೇ ಸಾಕು ಎಂಬುದು ಸ್ಯಾಂಡಲ್‌ವುಡ್ ಚಿತ್ರಪ್ರೇಮಿಗಳ ಅಂಬೋಣ. ಮಾನವ ಹಾಗೂ ಸಾಕು ನಾಯಿಯ ನಡುವಿನ ಬಾಂಧವ್ಯದ ಕಥೆ ಹೇಳುವ ಚಾರ್ಲಿಗೆ, ರಕ್ಷಿತ್ ಅವರ ಚಿತ್ರಗಳಲ್ಲಿ ಕೆಲಸ ಮಾಡಿರುವ ಕಿರಣ್ ರಾಜ್ ನಿರ್ದೇಶನ ನೀಡಲಿದ್ದಾರೆ. ಇದು ಕಿರಣ್‌ರಾಜ್‌ರ ಚೊಚ್ಚಲದ ನಿರ್ದೇಶನ ಚಿತ್ರವೂ ಹೌದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News