ಯಾವುದೇ ಕ್ಷಣ ಯುದ್ಧಕ್ಕೆ ಸಿದ್ಧ: ವಾಯು ಪಡೆ ವರಿಷ್ಠ ಧಾನೋವ
ಹೊಸದಿಲ್ಲಿ, ಅ. 8: ಯಾವುದೇ ಕ್ಷಣದಲ್ಲೂ ನಾವು ಯುದ್ಧಕ್ಕೆ ಸಿದ್ಧರಿದ್ದೇವೆ ಎಂದು ವಾಯು ಪಡೆ ಮುಖ್ಯಸ್ಥ ಬಿ.ಎಸ್. ಧಾನೋವ ರವಿವಾರ ಹೇಳಿದ್ದಾರೆ. ವಾಯು ಪಡೆಯ 85ನೇ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಯಾವುದೇ ಭದ್ರತಾ ಸವಾಲು ಎದುರಿಸಲು ನಾವು ಸನ್ನದ್ಧರಾಗಿದ್ದೇವೆ ಎಂದರು.
ಭಾರತೀಯ ವಾಯು ಪಡೆ ಗಡಿಯಾದ್ಯಂತ ನೆಲೆ ಗುರುತಿಸುವ, ನಿರ್ಧರಿಸುವ ಹಾಗೂ ದಾಳಿ ನಡೆಸುವ ಸಾಮರ್ಥ್ಯವನ್ನು ಭಾರತೀಯ ಸೇನಾ ಪಡೆ ಹೊಂದಿದೆ. ಸರ್ಜಿಕಲ್ ದಾಳಿಯ ಯಾವುದೇ ನಿರ್ಧಾರವನ್ನು ಸರಕಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ ಮೂರು ದಿನದ ಬಳಿಕ ವಾಯು ಪಡೆ ಮುಖ್ಯಸ್ಥ ಮತ್ತೆ ಈ ಹೇಳಿಕೆ ನೀಡಿದ್ದಾರೆ.
ಚೀನಾದ ಯಾವುದೇ ಬೆದರಿಕೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಭಾರತ ಸಿದ್ಧವಾಗಿದೆ. ವಾಯು ಪಡೆ ಮಲ್ಟಿ ಸ್ಪೆಕ್ಟ್ರಂ ವ್ಯೂ ಹಾತ್ಮಕ ಸಾಮರ್ಥ್ಯ ಹೊಂದಿದೆ. ಭಾರತೀಯ ಸೇನೆ ಹಾಗೂ ನೌಕಾ ಪಡೆಯೊಂದಿಗೆ ಜಂಟಿ ಕೌಶಲತೆ ರೂಪಿಸುವಲ್ಲಿ ಬದ್ಧವಾಗಿದೆ ಎಂದು ಧಾನೋವ ಹೇಳಿದ್ದಾರೆ.
ಕಳೆದ ವರ್ಷ ಜನವರಿಯಲ್ಲಿ ಪಠಾಣ್ಕೋಟ್ ವಾಯು ನೆಲೆಯಲ್ಲಿ ಭಯೋತ್ಪಾದಕ ದಾಳಿ ನಡೆದ ಹಿನ್ನೆಲೆಯಲ್ಲಿ ಯಾವುದೇ ಬೆದರಿಕೆಗಳ ವಿರುದ್ಧ ಹೋರಾಡಲು ವಾಯು ಪಡೆಯ ಎಲ್ಲಾ ನೆಲೆಗಳಲ್ಲಿ ಭದ್ರತೆ ವರ್ಧಿಸಲಾಗಿದೆ ಎಂದು ಧಾನೋವ ಹೇಳಿದರು.
ಚೀನಾ ಯೋಧರಿಗೆ ‘ನಮಸ್ತೆ’ಯ ಅರ್ಥ ತಿಳಿಸಿದ ರಕ್ಷಣಾ ಸಚಿವೆ
ಸಿಕ್ಕಿಂನ ಸಿನೊ-ಇಂಡೋ ಗಡಿಗೆ ರವಿವಾರ ಭೇಟಿ ನೀಡಿದ ರಕ್ಷಣಾ ಸಚಿವೆ ನಿರ್ಮಾಲಾ ಸೀತಾರಾಮನ್ ಚೀನಾ ಯೋಧರಿಗೆ ‘ನಮಸ್ತೆ’ಯ ಅರ್ಥ ಕಲಿಸಿದರು. ರಕ್ಷಣಾ ಸಚಿವೆಯ ಕಚೇರಿ ನಿರ್ವಹಿಸುತ್ತಿರುವ ಟ್ವಿಟ್ಟರ್ನಲ್ಲಿ ಸೀತಾರಾಮನ್ ಅವರು ಚೀನಾ ಸೇನಾಧಿಕಾರಿಗಳೊಂದಿಗೆ ಸಂವಹನ ನಡೆಸುತ್ತಿರುವ ಹಾಗೂ ಸೇನಾಧಿಕಾರಿ ತಮ್ಮ ಸಹೋದ್ಯೋಗಿಗಳನ್ನು ಪರಿಚಯಿಸುತ್ತಿರುವ ದೃಶ್ಯಗಳನ್ನು ಅಪ್ಲೋಡ್ ಮಾಡಲಾಗಿದೆ.