ಮಳೆ ನಿಲ್ಲುವುದಕ್ಕಾಗಿ ಬರಗಾಲ ಬಿತ್ತನೆ ಬೀಜ

Update: 2017-10-15 05:14 GMT

ಇಡೀ ಬೆಂಗಳೂರು ತೇಲುವ ದ್ವೀಪವಾಗಿ ಪರಿವರ್ತನೆ ಗೊಂಡಿರುವುದು ನೋಡಿ ಕಾಸಿ ರೋಮಾಂಚನಗೊಂಡ. ಕೊನೆಗೂ ಬೆಂಗಳೂರನ್ನು ಸಿದ್ದರಾಮಯ್ಯ ಬದಲಾಯಿಸಿ ಬಿಟ್ಟರಲ್ಲ ಎಂದವನೇ, ಬೆಂಗಳೂರಿನ ವಿವಿಧ ಗಲ್ಲಿಗಳಲ್ಲಿ ಈಜುತ್ತಾ ಈಜುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸ ಸೇರಿದ. ಸಿದ್ದರಾಮಯ್ಯರು ಅಲ್ಲಿ ತಮ್ಮ ಪಂಚೆ ಎತ್ತಿ ಕಟ್ಟಿ ದೋಣಿಯ ಮೇಲೆ ಕುಳಿತು ಅಧಿಕಾರಿಗಳ ಜೊತೆಗೆ ಸಭೆ ನಡೆಸುತ್ತಿದ್ದರು. ಪಕ್ಕ ತಿರುಗಿ ನೋಡಿದಾಗ ದೂರದಲ್ಲೇ ಕಾಸಿ ಈಜುತ್ತಾ ಬರುತ್ತಿದ್ದಾನೆ ‘‘ಏನ್ರೀ ಅದು...ಈ ಮಳೆಯಲ್ಲೂ ಬಿಡೋದಿಲ್ವಲ್ರೀ ನೀವು....ಎತ್ತಿ ದೋಣಿಯೊಳಗೆ ಹಾಕ್ರಿ ಅವ್ನನ್ನ....’’ ಎಂದು ಸಿದ್ದರಾಮಯ್ಯ ಅಧಿಕಾರಿಗಳಿಗೆ ಆಜ್ಞಾಪಿಸಿದರು. ಅಧಿಕಾರಿಗಳು ತಕ್ಷಣ ಕಾಸಿಯನ್ನು ಎತ್ತಿ ಸಿಎಂ ಇರುವ ದೋಣಿಯೊಳಗೆ ಹಾಕಿದರು.

ಕಾಸಿ ಹಲ್ಲು ಕಿರಿಯುತ್ತಾ ‘‘ಏನ್ ಸಾರ್...ಇಡೀ ಬೆಂಗಳೂರು ಮಳೆಯಿಂದ ಮುಳುಗಿ ಬಿಟ್ಟಿದೆ...’’ ಎಂದು ಶುರು ಮಾಡಿದ.

‘‘ಮಳೆ ಬರಲಿಲ್ಲಾ ಅಂದ್ರೆ ಮಳೆಯಿಲ್ಲಾ ಅಂತ ನನ್ನ ವಿರುದ್ಧ ಬರೀತೀರಿ. ಈಗ ನೋಡಿದ್ರೆ ಮಳೆ ಬಂದಿದೆ ಎಂದು ನನ್ನ ಹಿಂದೆ ಬಿದ್ದಿದ್ದೀರಿ...’’ ಸಿದ್ದರಾಮಯ್ಯ ಅವರು ಕಾಸಿಯ ವಿರುದ್ಧ ಕಿಡಿ ಕಾರಿದರು.

‘‘ಹಾಗಲ್ಲ ಸಾರ್...ಬೆಂಗಳೂರಿನ ರಸ್ತೆಗಳೆಲ್ಲ ಮುಳುಗಿವೆ...’’ ಕಾಸಿ ಹೇಳಿದ.

‘‘ಒಳ್ಳೆದೇ ಆಯ್ತಲ್ರೀ...ಟ್ರಾಫಿಕ್ ಸಮಸ್ಯೆಯೇ ಮುಗಿದೋಯ್ತು’’ ಸಿದ್ದರಾಮಯ್ಯ ಪ್ರಶ್ನೆಯನ್ನು ನಿವಾರಿಸಿದರು.

‘‘ರಸ್ತೆಯಲ್ಲಿ ಹೊಂಡಗಳು ತುಂಬ್ಕೊಂಡಿವೆ ಸಾರ್...’’ ಮತ್ತೆ ಕಾಸಿ ರಾಗ ಎಳೆದ.

‘‘ನೋಡ್ರಿ....ಅವೆಲ್ಲ ಬೆಂಗಳೂರು ನಗರದ ಕೆರೆಗಳು. ಕೆರೆಗಳನ್ನು ಒತ್ತುವರಿ ಮಾಡಿಕೊಂಡರೆ ಇನ್ನೇನಾಗತ್ತೆ....ಇದೀಗ ನಗರಗಳನ್ನು ಕೆರೆಗಳು ಒತ್ತುವರಿ ಮಾಡಿಕೊಂಡಿವೆ. ಕೆರೆಗಳೆಲ್ಲ ಹೀಗೆ ನಗರದ ಜನರ ವಿರುದ್ಧ ಸೇಡು ತೀರಿಸ್ಕೊಂಡಿವೆ....’’

‘‘ಸಾರ್....ಇದು ನಿಮ್ಮ ವೈಫಲ್ಯವಲ್ಲವೇ?’’ ಕಾಸಿ ಮತ್ತೆ ಕೇಳಿದ.

 ‘‘ನೋಡ್ರೀ...ನಾವು ಮಾಡಿರುವ ಮೋಡ ಬಿತ್ತನೆ ಯಶಸ್ವಿಯಾಗಿದೆ ಎನ್ನುವುದನ್ನು ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆ ಹೇಳಿದೆ. ಮುಂದಿನ ವರ್ಷ, ಇನ್ನಷ್ಟು ಬಿತ್ತನೆ ಮಾಡಲು ಬೀಜಗಳನ್ನು ಸಂಗ್ರಹಿಸಿಡಲಿದ್ದೇವೆ. ಹಾಗೆಯೇ ಮೋಡ ಬಿತ್ತನೆ ಬೀಜಗಳನ್ನು ಪ್ರತೀ ಹಳ್ಳಿ ಹಳ್ಳಿಗೆ ರವಾನಿಸಲಿದ್ದೇವೆ.... ಇದನ್ನು ಮೋಡ ಬಿತ್ತನೆ ಭಾಗ್ಯ ಯೋಜನೆಯ ಮೂಲಕ ಜಾರಿಗೆ ತರಲಿದ್ದೇವೆ...’’

‘‘ರೈತರಿಗೆ ಮೋಡ ಬಿತ್ತನೆ ಬೀಜ ಭಾಗ್ಯವೆ?’’ ಕಾಸಿ ಅಚ್ಚರಿಯಿಂದ ಕೇಳಿದ.

‘‘ಹೌದ್ರೀ....ಯಾಕೆ ಅನುಮಾನಾನ?’’ ಸಿದ್ದರಾಮಯ್ಯ ಕೆಂಪು ಕಣ್ಣು ಮಾಡುತ್ತಾ ಕೇಳಿದರು.

‘‘ರೈತರಿಗೆ ಬಿತ್ತನೆ ಬೀಜ ಯಾವಾಗ ಕೊಡ್ತೀರಿ ಸಾರ್...’’ ಕಾಸಿ ಕೇಳಿದ.

‘‘ನೋಡಿ, ಎಲ್ಲ ಬೀಜಗಳನ್ನು ಒಟ್ಟೊಟ್ಟಿಗೆ ಕೊಡುವುದಕ್ಕೆ ಸಾಧ್ಯವಿಲ್ಲ. ಮೊದಲು ಮೋಡಬಿತ್ತನೆ ಬೀಜ ಕೊಡುತ್ತೇವೆ. ಆಗ ಹಳ್ಳಿ ಹಳ್ಳಿಯ ರಸ್ತೆಗಳಲ್ಲಿ ಕೆರೆಗಳು ನಿರ್ಮಾಣವಾಗುತ್ತವೆ. ಹೀಗೆ ನಾವು ಹಳ್ಳಿ ಹಳ್ಳಿಗಳಿಗೆ ಕೆರೆಗಳನ್ನು ಹಂಚಿದಂತೆ ಆಗುತ್ತದೆ. ಇದು ರಸ್ತೆಗಳಲ್ಲಿ ಕೆರೆ ಯೋಜನೆ ಭಾಗ್ಯದ ಅಡಿಯಲ್ಲಿ ಬರುತ್ತದೆ....’’ ಸಿದ್ದರಾಮಯ್ಯ ಯೋಜನೆಯನ್ನು ವಿವರಿಸಿದರು.

‘‘ಸಾರ್...ಹಾಗಾದರೆ ಬೆಂಗಳೂರಿನ ರಸ್ತೆಯಲ್ಲಿರುವ ಕೆರೆಗಳ ಅವಸ್ಥೆ ಏನು ಸಾರ್?’’ ಕಾಸಿ ಆತಂಕದಿಂದ ಪ್ರಶ್ನಿಸಿದ.

‘‘ನೋಡ್ರೀ...ಮುಂದಿನ ಬೇಸಿಗೆಯ ಹೊತ್ತಿಗೆ ಆ ಕೆರೆಗಳೆಲ್ಲ ಬತ್ತಿರುತ್ತವೆ. ಆಗ ಬಿದ್ದವರೆಲ್ಲ ಮೇಲೆ ಬರುತ್ತಾರೆ. ನೀವೇಕೆ ಇಲ್ಲದ ತಲೆಬಿಸಿಯನ್ನು ಹೊತ್ತುಕೊಂಡಿದ್ದೀರಿ...?’’ ಸಿದ್ದರಾಮಯ್ಯ ಸಿಟ್ಟಿನಿಂದ ಕೇಳಿದರು.

‘‘ಸಾರ್...ಈ ಮಳೆ ಯಾವಾಗ ನಿಲ್ಲುತ್ತದೆ ಸಾರ್...?’’ ಕಾಸಿ ಹತಾಶೆಯಿಂದ ಕೇಳಿದ.

‘‘ನೋಡ್ರೀ...ನಾವು ಮೋಡ ಬಿತ್ತನೆಗೆ ಖಾಸಗಿ ಕಂಪೆನಿಯವರಿಗೆ ದುಡ್ಡು ಕೊಟ್ಟಿದ್ದೇವೆ. ಇದೀಗ ಮಳೆ ಸುರಿಯುತ್ತಿದೆ. ನಿಲ್ಲಿಸಿ ಎಂದರೆ ಕೇಳುತ್ತಿಲ್ಲ. ಮಳೆ ನಿಲ್ಲಿಸಬೇಕಾದರೆ ಮತ್ತೆ ಬರಗಾಲ ಬೀಜವನ್ನು ಬಿತ್ತಬೇಕಾಗುತ್ತದೆ, ಅದಕ್ಕಾಗಿ ಇನ್ನು ಹೆಚ್ಚು ಹಣ ನೀಡಬೇಕಾಗುತ್ತದೆಯಂತೆ. ಈಗಾಗಲೇ ಮೋಡ ಬಿತ್ತನೆ ಮಾಡಿ ಖಜಾನೆ ಖಾಲಿಯಾಗಿದೆ. ಇನ್ನು ಮಳೆ ನಿಲ್ಲಿಸುವುದಕ್ಕಾಗಿ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಕೇಂದ್ರ ಸಹಕರಿಸಿದರೆ ಶೀಘ್ರದಲ್ಲೇ ಬರಗಾಲ ಬಿತ್ತನೆ ಯೋಜನೆಯನ್ನು ಆರಂಭಿಸುತ್ತೇವೆ....’’ ಸಿದ್ದರಾಮಯ್ಯ ಪರಿಹಾರ ಸೂಚಿಸಿದರು.

‘‘ಸಾರ್...ಬರಗಾಲ ಬಿತ್ತನೆ ಮಾಡಿದರೆ ರೈತರ ಅವಸ್ಥೆ....’’ ಕಾಸಿ ಬೆಚ್ಚಿ ಕೇಳಿದ.

‘‘ನೋಡ್ರೀ...ನಿಮಗೆ ಟೀಕೆ ಮಾಡೋದು, ಆಕ್ಷೇಪ ಎತ್ತೋದು ಅಭ್ಯಾಸ ಆಗಿದೆ. ಅಹಿಂದ ಸರಕಾರದ ವಿರುದ್ಧ ನೀವು ದೇವೇಗೌಡರ ಜೊತೆ ಸೇರಿ ಸಂಚು ಮಾಡುತ್ತಿದ್ದೀರಿ....ನೋಡ್ರೀ...ಇವನನ್ನು ಎತ್ತಿ ಮತ್ತೆ ನೀರಿಗೆ ಹಾಕಿ....’’ ಸಿದ್ದರಾಮಯ್ಯ ಆದೇಶ ನೀಡಿದ್ದೇ ತಡ, ಕಾಸಿ ಬದುಕಿದೆಯ ಬಡಜೀವ ಎಂದು ನೀರಿಗೆ ಹಾರಿ ಈಜುತ್ತಾ, ತನ್ನ ಕಚೇರಿ ಸೇರಿದ.

Writer - -ಚೇಳಯ್ಯ

contributor

Editor - -ಚೇಳಯ್ಯ

contributor

Similar News