ಮಾದಕ ದ್ರವ್ಯ ಜಾಲದಲ್ಲಿ ಸಿಲುಕಿದ ಉಳ್ಳಾಲ

Update: 2017-11-01 07:20 GMT

►ಹದಿಹರೆಯದ ಯುವಕರೇ ‘ಟಾರ್ಗೆಟ್’

►ಜಾಲದ ಚಕ್ರವ್ಯೂಹದಲ್ಲಿ ಯುವಜನತೆ

►ಬಡ-ಮಧ್ಯಮ-ಶ್ರೀಮಂತರೆಂಬ ಭೇದವಿಲ್ಲದೆ ಎಲ್ಲರ ಮಕ್ಕಳಿಗೂ ಅಪಾಯ

►ಗಾಂಜಾ ಪೂರೈಕೆಯಲ್ಲಿ ಮಹಿಳೆಯರೂ ಶಾಮೀಲು

►ಜೈಲಿನಲ್ಲೂ ಮಾದಕ ವ್ಯಸನಿಗಳ ಜಾಲ ಸಕ್ರಿಯ

►ಕಣ್ಣಿಗೆ ರಾಚುವ ಪೊಲೀಸರು-ರಾಜಕಾರಣಿಗಳ ಕೃಪಾಕಟಾಕ್ಷ


ಐತಿಹಾಸಿಕ ಕಾರಣಕ್ಕಾಗಿ ಪ್ರಸಿದ್ಧಿ ಪಡೆದಿರುವ ‘ಉಳ್ಳಾಲ’ ಇಂದು ನಾನಾ ಕಾರಣಕ್ಕಾಗಿ ಕುಖ್ಯಾತಿಗೊಳಗಾಗುತ್ತಿದೆ. ಹಲ್ಲೆ, ಕೊಲೆ, ಕೊಲೆಯತ್ನ, ಲೂಟಿ, ಧಮ್ಕಿ, ಅಪಹರಣ, ಬ್ಲಾಕ್‌ಮೇಲ್ ಉಳ್ಳಾಲದಲ್ಲಿ ಎಗ್ಗಿಲ್ಲದೆ ನಡೆಯುತ್ತಿವೆ. ‘ಒಂದೆಡೆ ರಾಜಕಾರಣಿಗಳ ಬೆಂಬಲ, ಇನ್ನೊಂದೆಡೆ ಕೆಲವು ಪೊಲೀಸರ ವೈಫಲ್ಯದಿಂದಲೇ ಇಲ್ಲಿನ ಯುವಕರು ದಾರಿ ತಪ್ಪುತ್ತಿದ್ದಾರೆ’ ಎನ್ನುವುದು ಉಳ್ಳಾಲದ ನಾಗರಿಕರ ಅಳಲು. ಇವರನ್ನು ಸರಿದಾರಿಗೆ ತರಲಾಗದೆ ಹಿರಿಯರು, ಧರ್ಮಗುರುಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ನಶೆ ಏರಿದವರ ಬಗ್ಗೆ ಮಾತನಾಡಲು, ಅವರ ಬಗ್ಗೆ ಮಾಹಿತಿ ನೀಡಲು ಇಲ್ಲಿನ ಬಹುತೇಕ ಮಂದಿ ಹಿಂದೇಟು ಹಾಕುತ್ತಿದ್ದಾರೆ. ವಸ್ತುಶಃ ಉಳ್ಳಾಲ ಮಾದಕ ದ್ರವ್ಯ ಜಾಲದಲ್ಲಿ ಸಿಲುಕಿದೆ. ಹಾಗಾಗಿಯೇ ಉಳ್ಳಾಲದಲ್ಲಿ ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರ ಅಡಗಿದೆ ಎನ್ನುವುದು ಇಡೀ ಉಳ್ಳಾಲದ ಒಕ್ಕೊರಲ ಧ್ವನಿಯಾಗಿದೆ. ಈ ನಿಟ್ಟಿನಲ್ಲಿ ‘ವಾರ್ತಾಭಾರತಿ’ಯ ವಿಶೇಷ ತಂಡ ಉಳ್ಳಾಲದ ಜನಸಾಮಾನ್ಯರು, ವಿವಿಧ ಕ್ಷೇತ್ರಗಳ ನಾಯಕರು, ಸಾಮಾಜಿಕ ಕಾರ್ಯಕರ್ತರು ಹಾಗೂ ಪೊಲೀಸ್ ಇಲಾಖೆಯನ್ನು ಭೇಟಿ ಮಾಡಿ ಹೊರತಂದ ಸ್ಫೋಟಕ ಮಾಹಿತಿ ಇಲ್ಲಿದೆ.


ಉಳ್ಳಾಲದ ಮೇಲಂಗಡಿ, ಮಾಸ್ತಿಕಟ್ಟೆ, ಮುಕ್ಕಚೇರಿ, ಕೋಟೆಪುರ, ಕಡಪ್ಪರ, ಉಳ್ಳಾಲ ಮುಡಾ ಸೈಟ್, ಉಳ್ಳಾಲ ಬೊಟ್ಟು, ಉಳ್ಳಾಲ ಕೋಡಿ, ತೊಕ್ಕೊಟ್ಟು, ಒಳಪೇಟೆ, ಅಳೇಕಲ, ಮಾರ್ಗತಲೆ, ಕಟ್ಟತ್ತಲ ಮತ್ತಿತರ ಪ್ರದೇಶಗಳಲ್ಲದೆ, ಆಸುಪಾಸಿನ ಕಲ್ಲಾಪು, ಮೊಗವೀರಪಟ್ಣ, ಹಾಗೂ ಸಮೀಪದ ತಲಪಾಡಿ, ಕೆ.ಸಿ. ರೋಡ್, ಕುಂಪಲ, ದೇರಳಕಟ್ಟೆ, ಕುತ್ತಾರ್, ಶಾಂತಿಬಾಗ್, ಮುಡಿಪು, ಕೊಣಾಜೆ, ತೌಡುಗೋಳಿ ಕ್ರಾಸ್ ಹೀಗೆ ಉಳ್ಳಾಲ ಮತ್ತು ಕೊಣಾಜೆ ಠಾಣಾ ವ್ಯಾಪ್ತಿಯ ಹಲವು ಕಡೆ ಮಾದಕ ದ್ರವ್ಯ ಜಾಲ ಹಬ್ಬಿದ್ದು, ಸಮಾಜ ಬಾಹಿರ ಕೃತ್ಯಗಳಿಗೆ ಕಾರಣವಾಗುತ್ತಿದೆ ಎಂದು ಉಳ್ಳಾಲದ ನಾಗರಿಕರು ಅಳಲು ವ್ಯಕ್ತಪಡಿಸುತ್ತಿದ್ದಾರೆ.

 ಈ ಪ್ರದೇಶದ ನಿರ್ಜನ ಪ್ರದೇಶಗಳು, ಕಾಲನಿಗಳು, ನಿರ್ಮಾಣ ಹಂತದ ಕಟ್ಟಡಗಳು, ಜನವಾಸವಿಲ್ಲದ ಮನೆಗಳು, ಪಾಳುಬಿದ್ದ ಕಟ್ಟಡಗಳು, ಸಣ್ಣಪುಟ್ಟ ಡೇರೆಗಳು, ನೀರಿನ ಟ್ಯಾಂಕ್‌ನ ಸುತ್ತಮುತ್ತಲ ಪ್ರದೇಶಗಳನ್ನು ಮಾದಕ ದ್ರವ್ಯ ವ್ಯಸನಿಗಳು ತಮ್ಮ ಅಡ್ಡೆಗಳನ್ನಾಗಿಸಿದ್ದಾರೆ. ಅಲ್ಲೇ ಹೆಚ್ಚಾಗಿ ಠಳಾಯಿಸುತ್ತಾರೆ. ಅದೂ ರಾತ್ರಿ-ಹಗಲೆನ್ನದೆ, ಕೆಲವೊಮ್ಮೆ ಮಾರಕಾಯುಧಗಳೊಂದಿಗೆ!. ಆದರೆ ಪೊಲೀಸ್ ಇಲಾಖೆ ಇದನ್ನೆಲ್ಲಾ ಕಂಡೂ ಕಾಣದಂತೆ ವರ್ತಿಸುತ್ತಿದೆ ಎಂದು ಇಲ್ಲಿನ ಜನರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಕಳೆದ 10 ವರ್ಷಗಳಿಂದ ಈ ಜಾಲ ಸಕ್ರಿಯವಾಗಿದ್ದರೂ ಕಡಿವಾಣ ಹಾಕದೆ ಬಿಟ್ಟಿದ್ದರಿಂದ ಇತ್ತೀಚಿನ ದಿನಗಳಲ್ಲಿ ಇದರ ಹಾವಳಿ ಮಿತಿ ಮೀರಿದೆ. ಇಲ್ಲಿ ಹಲ್ಲೆ, ಕೊಲೆ, ಕೊಲೆಯತ್ನ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ಆರೋಪಿಗಳಿಗೂ ಮಾದಕ ದ್ರವ್ಯ ಜಾಲಕ್ಕೂ ಬಿಡಿಸಲಾಗದ ನಂಟಿದೆ. ಹಾಗಾಗಿಯೇ ಇಲ್ಲಿ ರಾತ್ರಿ-ಹಗಲು ಅಪರಾಧ ಪ್ರಕರಣಗಳು ನಡೆಯುತ್ತಿವೆ. ಬಡವರು, ಶ್ರೀಮಂತರು, ಮಧ್ಯಮ ವರ್ಗದವರು, ಸುಸಂಸ್ಕೃತರ ಮಕ್ಕಳು ಎಂಬ ಭೇದವಿಲ್ಲದೆ ದೊಡ್ಡ ಸಂಖ್ಯೆಯಲ್ಲಿ ಯುವಜನರು ಇದರ ದಾಸರಾಗುತ್ತಿದ್ದಾರೆ. ಯಾರು, ಯಾವ ಕ್ಷಣ ಈ ಚಕ್ರವ್ಯೆಹದೊಳಗೆ ಸಿಲುಕುತ್ತಾರೆ ಎಂದು ಹೇಳಲಿಕ್ಕಾಗದ ಸಂದಿಗ್ಧ ಸ್ಥಿತಿ ಉಳ್ಳಾಲದಲ್ಲಿ ನಿರ್ಮಾಣವಾಗಿದೆ. ಈ ಬಗ್ಗೆ ಯಾರೂ ಮುಕ್ತವಾಗಿ ಮಾತನಾಡಲು ಧೈರ್ಯ ತೋರುತ್ತಿಲ್ಲ. ಹಾಗಾಗಿ ಮಾದಕ ದ್ರವ್ಯ ಜಾಲದೊಳಗೆ ಸಿಲುಕಿರುವ ‘ಉಳ್ಳಾಲ’ವನ್ನು ಪಾರು ಮಾಡುವುದು ಸದ್ಯದ ಮಟ್ಟಿಗೆ ಯಕ್ಷಪ್ರಶ್ನೆಯಾಗಿ ಬಿಟ್ಟಿದೆ.

ಈ ಭಯಾನಕ ಪರಿಸ್ಥಿತಿ ಬಗ್ಗೆ ಪೊಲೀಸ್ ಇಲಾಖೆಯ ಅಧಿಕಾರಿಗಳ ಗಮನ ಸೆಳೆದಾಗ ‘ಮಾಧ್ಯಮದಲ್ಲಿ ಪ್ರಸಾರವಾದಂತೆ ಉಳ್ಳಾಲ-ಕೊಣಾಜೆ ಠಾಣಾ ಸರಹದ್ದಿನಲ್ಲಿ ಈ ಜಾಲ ಅಷ್ಟೇನೂ ಸಕ್ರಿಯವಾಗಿಲ್ಲ. ನೀವು ನೀಡುವ ಚಿತ್ರಣಕ್ಕೂ ಉಳ್ಳಾಲ-ಕೊಣಾಜೆ ವ್ಯಾಪ್ತಿಯ ಸನ್ನಿವೇಶಕ್ಕೂ ಅಜಗಜಾಂತರವಿದೆ’ ಎಂದು ಹಾರಿಕೆಯ ಉತ್ತರ ನೀಡಿ ಜಾರಿಕೊಳ್ಳುತ್ತಾರೆ. ಹಾಗಿದ್ದರೆ ಈ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳು ಮಿತಿ ಮೀರಲು ಕಾರಣ ಏನು ಎಂದು ಕೇಳಿದರೆ, ಕ್ರಿಮಿನಲ್ ಕೃತ್ಯಕ್ಕೂ ಮಾದಕ ದ್ರವ್ಯ ವ್ಯಸನಕ್ಕೂ ಸಂಬಂಧ ಕಲ್ಪಿಸುವ ಅಗತ್ಯವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಪ್ಪೆ ಸಾರಿಸುತ್ತಾರೆ.
***
 ಅವನೊಬ್ಬ ಸುಸಂಸ್ಕೃತ ಕುಟುಂಬದ ಯುವಕ. ಹೆಸರು ರಫೀಕ್(ಹೆಸರು ಬದಲಿಸಲಾಗಿದೆ). ಆ ಕುಟುಂಬಕ್ಕೆ ಧಾರ್ಮಿಕ ಹಿನ್ನೆಲೆಯೂ ಇದೆ. ಅಂತಹ ಯುವಕನನ್ನು ಮಾದಕ ವ್ಯಸನಿಗಳು ಬಲೆಗೆ ಕೆಡವಿದರು. ಅದರ ದಾಸನಾದ ಯುವಕ ಅಪರಾಧ ಚಟುವಟಿಕೆಯಲ್ಲೂ ತೊಡಗಿಸಿಕೊಂಡ. ಇದನ್ನು ತಿಳಿದ ಮನೆಮಂದಿಗೆ ದಿಗಿಲು. ವಿಷಯ ಬಹಿರಂಗಗೊಂಡರೆ ಕುಟುಂಬದ ಮಾನ ಹರಾಜು ಎಂಬ ಭಯ. ಅಂತೂ ಅವರಿವರ ಬಳಿ ಅಂಗಲಾಚಿ ‘ಇದೇ ಕೊನೆ. ಇನ್ನು ಮುಂದೆ ನಿಮ್ಮ ಸಹಾಯಕ್ಕೆ ನಾವು ಬರುವುದಿಲ್ಲ’ ಎಂದು ಯುವಕನಿಗೆ ಬುದ್ಧಿವಾದ ಹೇಳಿದರು. ಪೊಲೀಸರು ಪ್ರಕರಣ ದಾಖಲಿಸಿದರೂ ವಿಷಯ ಗೌಪ್ಯವಾಗಿಡಲಾಯಿತು. ಅಂತೂ ಯುವಕ ಅಮಲಿನಿಂದ ಮುಕ್ತಿ ಪಡೆದ.

ಅವನು ಮಧ್ಯಮ ವರ್ಗದ ಬಾಲಕ. ಹೆಸರು ಯೂನುಸು(ಹೆಸರು ಬದಲಿಸಲಾಗಿದೆ). ಶಾಲೆಗೆ ಹೋಗುತ್ತಿದ್ದ ಈ ಬಾಲಕನನ್ನು ಈ ಜಾಲದ ಸದಸ್ಯರು ಪುಸಲಾಯಿಸಿಕೊಂಡು ಆಸುಪಾಸಿನ ಫಾಸ್ಟ್ ಫುಡ್ ಸೆಂಟರ್‌ಗೆ ಕರೆದೊಯ್ದು ಹೊಟ್ಟೆತುಂಬಾ ತಿನ್ನಿಸಿದರು. ಕಾರಲ್ಲೇ ಅತ್ತಿಂದಿತ್ತ ಕರೆದೊಯ್ದರು. ಜೊತೆಗೆ ಮಾದಕ ದ್ರವ್ಯದ ಪರಿಚಯ ಕೂಡ ಮಾಡಿಕೊಟ್ಟರು. ಮನೆಯವರಿಗೆ ವಿಷಯ ತಿಳಿಯುವ ಮುನ್ನ ಬಾಲಕ ಮಾದಕ ವ್ಯಸನಿಯಾಗಿದ್ದ. ಬಳಿಕ ಅಲ್ಲಿಂದ ಆ ಬಾಲಕನನ್ನು ಪಾರು ಮಾಡಲು ಮನೆಯವರು ಪಟ್ಟ ಸಾಹಸ ಅಷ್ಟಿಷ್ಟಲ್ಲ.

ಅವನ ಹೆಸರು ಅನೀಸ್ (ಹೆಸರು ಬದಲಿ ಸಲಾಗಿದೆ). ಬಡ ಕುಟುಂಬದ ಯುವಕ. ನಿಯತ್ತಿನಿಂದ ಕೆಲಸ ಮಾಡುತ್ತಿದ್ದ ಈ ಯುವಕನಿಗೆ ಗೆಳೆಯರ ಸಂಗ ಸಿಕ್ಕಿತು. ಕೆಲಸಕ್ಕೆ ಹೋಗದೆ ಹಗಲು ಹೊತ್ತು ಎಲ್ಲೆಡೆ ತಿರುಗಾಡತೊಡಗಿದ. ರಾತ್ರಿ ಮನೆ ಸೇರುತ್ತಿದ್ದ. ಮನೆ ಸೇರಿ ಸುಮ್ಮನಿರುವ ಬದಲು ನಶೆಯಲ್ಲೇ ತಂದೆ-ತಾಯಿ-ಅಕ್ಕ ಎಂದು ನೋಡದೆ ಮನೆಯವರಿಗೆಲ್ಲಾ ಹೊಡೆಯತೊಡಗಿದ. ಅಷ್ಟೇ ಅಲ್ಲ, ನೆರಮನೆಯವರಿಗೂ ಹಲ್ಲೆ ಮಾಡತೊಡಗಿದ. ಹಣಕ್ಕಾಗಿ ದಾರಿ ಹೋಕರನ್ನು ಬೆದರಿಸತೊಡಗಿದ. ಈಗಲೂ ಈತ ಈ ವ್ಯಸನದಿಂದ ಹೊರ ಬಂದಿಲ್ಲ.

(ಗಾಂಜಾ ಅಡ್ಡೆಯಾಗಿರುವ ಪೆರ್ಮನ್ನೂರು ಸಮೀಪದ ಪ್ರದೇಶ)

ಹೀಗೆ ಉಳ್ಳಾಲ ಮತ್ತು ಆಸುಪಾಸಿನ ಸುಮಾರು 12 ವರ್ಷದ ಬಾಲಕರಿಂದ ಹಿಡಿದು 40 ವರ್ಷದೊಳಗಿನ ವ್ಯಕ್ತಿಗಳು ಮಾದಕ ದ್ರವ್ಯ ಜಾಲಕ್ಕೆ ಸಿಲುಕಿದ್ದು, ಇವರನ್ನು ನಿಯಂತ್ರಿಸಲಾಗದಂತಹ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ. ಮೂಲವೊಂದರ ಪ್ರಕಾರ ಈ ಜಾಲದ ಕಪಿಮುಷ್ಟಿಯಿಂದ ಹೊರ ಬಂದವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಆದರೆ, ಈ ಜಾಲದೊಳಗೆ ಸಿಲುಕಿ ಒದ್ದಾಡುತ್ತಿರುವವರು ಸಾವಿರಾರು ಮಂದಿ. ಆ ಪೈಕಿ ಶೇ.85ರಷ್ಟು ಮುಸ್ಲಿಂ ಯುವಕರು ಎಂಬುದು ಗಮನಾರ್ಹ.
ಅಂದಹಾಗೆ ಮನೆ, ಕುಟುಂಬದವರಿಗೂ ಮಾರಿಗಳಾಗಿರುವ ಈ ವ್ಯಸನಿಗಳಿಗೆ ಕೆಲವು ಪ್ರಭಾವಿ ರಾಜಕಾರಣಿಗಳು ಮತ್ತು ಪೊಲೀಸರ ಸಹಕಾರ, ಬೆಂಬಲ, ಪ್ರೋತ್ಸಾಹ ಸಿಗುತ್ತಿರುವುದೇ ಉಳ್ಳಾಲದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಕಾರಣ ಎಂಬ ಆರೋಪ ಪಕ್ಷಭೇದವಿಲ್ಲದೆ ಸಾರ್ವತ್ರಿಕವಾಗಿ ಕೇಳಿ ಬರುತ್ತಿದೆ.

ಅಡ್ಡೆ ಗೊತ್ತಿದ್ದೂ ಪೊಲೀಸರು ಮೌನ
 ಅಂದಹಾಗೆ, ಈ ಜಾಲದ ಸದಸ್ಯರು ಎಲ್ಲೆಲ್ಲಿ ಸಕ್ರಿಯರಾಗಿದ್ದಾರೆ. ಯಾವಾಗ ಎಲ್ಲಿರುತ್ತಾರೆ ಎಂಬುದು ಪೊಲೀಸರಿಗೆ ಚೆನ್ನಾಗಿ ಗೊತ್ತು. ಆದರೆ, ಪೊಲೀಸರು ಅವರನ್ನು ಬಂಧಿಸಿ ಮಾದಕ ದ್ರವ್ಯ/ಪದಾರ್ಥ ಜಾಲವನ್ನು ಭೇದಿಸಲು ಮಾತ್ರ ಮುಂದಾಗುತ್ತಿಲ್ಲ. ಅಂದಹಾಗೆ, ಕೆಲವೊಮ್ಮೆ ಇವರು ‘ಭೂಗತ’ ರೀತಿಯಲ್ಲೇ ಕಾರ್ಯಾಚರಿಸುತ್ತಾರೆ. ಎಲ್ಲೂ ಸಣ್ಣ ಸುಳಿವು ಕೊಡದೆ ಗಾಂಜಾ ಪೂರೈಕೆ ಮಾಡುತ್ತಾರೆ, ಯುವಕರನ್ನು ಬಲೆಗೆ ಕೆಡಹುತ್ತಾರೆ. ಇವರ ಜೀವನವೂ ಐಷಾರಾಮಿ. ಇದನ್ನು ಕಂಡವರು ಐಷಾರಾಮಿ ಬದುಕಿಗೆ ಹಾತೊರೆಯುತ್ತಿರುವುದು ಸುಳ್ಳಲ್ಲ.

ಪೊಲೀಸರಿಗೆ ಹಲ್ಲೆ ನಡೆಸಿದರೂ ರಾಜಿ ಪಂಚಾಯಿತಿ
 ಕೆಲವು ದಿನದ ಹಿಂದೆ ಇಲ್ಲಿನ ಒಬ್ಬ ಪೊಲೀಸ್ ಸಿಬ್ಬಂದಿಗೆ ಇದೇ ಮಾದಕ ದ್ರವ್ಯ ವ್ಯಸನಿಗಳು ಹಲ್ಲೆ ನಡೆಸಿದ್ದರು. ಪೊಲೀಸರು ಮನಸ್ಸು ಮಾಡಿದ್ದರೆ ಕರ್ತವ್ಯಕ್ಕೆ ಅಡ್ಡಿ ಆರೋಪದಲ್ಲಿ ಪ್ರಕರಣ ದಾಖಲಿಸಬಹುದಿತ್ತು. ಆದರೆ, ಪೊಲೀಸರೇ ಈ ವ್ಯಸನಿಗಳ ಜೊತೆ ರಾಜೀ ಪಂಚಾಯಿತಿಗೆೆ ಮುಂದಾದರು. ಹಲ್ಲೆಗೊಳಗಾದ ಪೊಲೀಸ್ ಕಳೆದ 7-8 ವರ್ಷಗಳಿಂದ ಉಳ್ಳಾಲದಲ್ಲೇ ಬೀಡು ಬಿಟ್ಟಿದ್ದಾರೆ. ಹಲ್ಲೆಗೊಳಗಾದರೂ ಸರಿ, ಈ ಪೊಲೀಸ್‌ಗೂ ಉಳ್ಳಾಲವೇ ಬೇಕು. ಹೀಗೆ ಪೊಲೀಸರ ಅತಿಯಾದ ಪ್ರೀತಿ-ಮಮತೆಯಿಂದ ಉಳ್ಳಾಲದಲ್ಲಿ ಈಗ ಮಾದಕ ವ್ಯಸನಿಗಳೇ ಡಾನ್‌ಗಳಾಗುತ್ತಿದ್ದಾರೆ.

► ಉಳ್ಳಾಲ ಕೋಡಿಯಲ್ಲಿಹೊರ ಊರವರ ಠಿಕಾಣಿ
ಉಳ್ಳಾಲ ಕೋಡಿಯಲ್ಲೊಂದು ಹೊಟೇಲ್ ಇದೆ. ಖಾದ್ಯ ತಿನ್ನಲು ಹೊರ ಊರಿನ ಯುವಕರು ಸಂಜೆಯಾಗುತ್ತಲೇ ಇಲ್ಲಿಗೆ ಧಾವಿಸುತ್ತಾರೆ. ರಾತ್ರಿಯವರೆಗೂ ಯುವಕರು ಇಲ್ಲೇ ಠಳಾಯಿಸುತ್ತಾರೆ. ಕೇಕೆ ಹಾಕಿ ಕಾಲ ಕಳೆಯುತ್ತಾರೆ. ಹೊರ ಊರಿನಿಂದ ಬಂದ ಇವರಿಗೆ ರಾತ್ರಿಯವರೆಗೆ ಏನು ಕೆಲಸ? ಮಾದಕ ದ್ರವ್ಯ ಜಾಲದ ಜೊತೆ ಈ ಯುವಕರು ಸಂಪರ್ಕ ಹೊಂದಿದ್ದಾರಾ? ಗೊತ್ತಿಲ್ಲ. ಆದರೆ ಈ ಯುವಕರನ್ನು ಈವರೆಗೂ ಪೊಲೀಸರು ವಿಚಾರಣೆಗೊಳಪಡಿಸದಿರುವುದು ಸ್ಥಳೀಯರಲ್ಲಿ ಆತಂಕ ಮತ್ತು ಅನುಮಾನ ಸೃಷ್ಟಿಸಿದೆ.

ಜೈಲಿಗೆ ಹೋದರೂ ಸದಾ ಸಂಪರ್ಕ
ಗಾಂಜಾ ಮತ್ತಿತರ ಅಪರಾಧ ಎಸಗಿ ಜೈಲಿಗೆ ಹೋದರೂ ಆರೋಪಿಗಳು ಹೊರ ಜಗತ್ತಿನೊಂದಿಗೆ ಸದಾ ಸಂಪರ್ಕದಲ್ಲಿರುವುದು ಉಳ್ಳಾಲದ ಮಟ್ಟಿಗೆ
ಹೊಸದೇನಲ್ಲ. ಜೂಲುಗಳಲ್ಲಿ ಮೊಬೈಲ್ ಜಾಮರ್ ಅಳವಡಿಸಿದರೂ ಕೂಡ ಈ ಆರೋಪಿಗಳು ಅದನ್ನು ಭೇದಿಸಿ ಸಂಪರ್ಕ ಸಾಧಿಸುತ್ತಾರೆ. ಕೆಲವರು ಫೇಸ್‌ಬುಕ್ ಲೈವ್‌ನಲ್ಲಿರುವುದು ಕೂಡ ವಿಶೇಷ. ಪೊಲೀಸರಿಗೆ ಇದೆಲ್ಲಾ ಗೊತ್ತಿದ್ದರೂ ಮೌನ ತಾಳಿರುವುದು ವ್ಯವಸ್ಥೆಯ ವ್ಯಂಗ್ಯವಾಗಿದೆ.

ಮಹಿಳೆಯರೂ ಸಾಥ್!
ಆಘಾತಕಾರಿ ವಿಷಯ ಏನೆಂದರೆ, ಇಲ್ಲಿ ಗಾಂಜಾ ಪೂರೈಕೆಯಲ್ಲಿ ಕೆಲವು ಮಹಿಳೆಯರೂ ಸಾಥ್ ನೀಡುತ್ತಾರೆ. ಮನೆಯ ಯಜಮಾನನ ಸೂಚನೆಯ ಮೇರೆಗೆ ಮನೆ ಬಾಗಿಲಿಗೆ ಗಾಂಜಾ ಅರಸಿಕೊಂಡು ಬಂದವರಿಗೆ ದುಪ್ಪಟ್ಟು ಬೆಲೆಗೆ ಗಾಂಜಾ ಮಾರಾಟ ಮಾಡುತ್ತಾರೆ. ಅಲ್ಲದೆ ಜೈಲಿನೊಳಗಿರುವ ಕೈದಿಗಳಿಗೂ ಗಾಂಜಾ ಪೂರೈಕೆ ಮಾಡುವಲ್ಲಿಯೂ ಈ ಮಹಿಳೆಯರು ನಿಸ್ಸೀಮರಾಗಿದ್ದಾರೆ ಎಂದು ತಿಳಿದು ಬಂದಿದೆ.

► ಪೊಲೀಸರ ದಾಳಿ ಒಂದು ಪ್ರಹಸನ

ಪೊಲೀಸರೂ ಅಷ್ಟೇ, ಮಾಹಿತಿ ಅಥವಾ ದೂರು ನೀಡಿದ ತಕ್ಷಣ ನಾಟಕೀಯ ದಾಳಿ ಮಾಡಿ ಸುಮ್ಮನಿರುತ್ತಾರೆ. ಸಡಿಲ ಸೆಕ್ಷನ್ ಹಾಕಿ ಬಿಡುತ್ತಾರೆ. ಕೆಲವು ದಿನ ಜೈಲು ಸೇರುವ ಈ ಯುವಕರು ಬಳಿಕ ಊರಲ್ಲಿ ಮಾಡುವ ದಾದಾಗಿರಿ ಪೊಲೀಸರನ್ನೇ ನಾಚಿಸುವಂತಿದೆ. ಕೂಗಳತೆ ದೂರದಲ್ಲಿ ಠಾಣೆಯಿದ್ದರೂ ಇವರಿಗೆ ಕಾನೂನಿನ ಭಯವಿಲ್ಲ. ಆಸುಪಾಸಿನ ಅಂಗಡಿ, ಹೊಟೇಲ್, ಉದ್ಯಮಿಗಳಿಂದ ಹಫ್ತಾ ವಸೂಲಿ ಮಾಡುತ್ತಾರೆ. ಹಫ್ತಾ ನೀಡಲು ಹಿಂದೇಟು ಹಾಕಿದರೆ ಮಾರಕ ದಾಳಿ ಅಥವಾ ಮಾನಹಾನಿಗೂ ಈ ತಂಡ ಅಥವಾ ಮಾದಕ ವ್ಯಸನಿಗಳು ಹೇಸುವುದಿಲ್ಲ.

ಅಲ್ಲದೆ ಪೊಲೀಸರಿಗೂ ಈ ವ್ಯಸನಿಗಳಿಂದ ಹಫ್ತಾ ಹೋಗುತ್ತದೆ ಎಂಬ ಆರೋಪವಿದೆ. ಕೆಲವರನ್ನು ಪುಂಡು ಪೋಕರಿಗಳಾಗಿ ಬೆಳೆಯಲು ಬಿಡುವ ಪೊಲೀಸರು ಇವರನ್ನೇ ಮಾಹಿತ�

Similar News