ಹೊಸ ಚಿತ್ರಕ್ಕೆ ರಾಜಮೌಳಿ ಸ್ಕೆಚ್

Update: 2017-10-20 18:08 GMT

ಬಾಹುಬಲಿ ಸರಣಿಯ ಚಿತ್ರಗಳ ಮೂಲಕ ಜಗತ್ತಿನಾದ್ಯಂತ ಅಭಿಮಾನಿ ಬಳಗವನ್ನು ಸೃಷ್ಟಿಸಿರುವ ನಿರ್ದೇಶಕ ಎಸ್.ಆರ್.ರಾಜಮೌಲಿ ಮತ್ತೆ ಯಾವಾಗ ಡೈರೆಕ್ಟರ್ ಕ್ಯಾಪ್ ಧರಿಸಲಿದ್ದಾರೆ?. ‘ಬಾಹುಬಲಿ 2’ ಪ್ರಚಂಡ ಯಶಸ್ಸಿನ ಬಳಿಕ ಅವರ ಅಭಿಮಾನಿಗಳನ್ನು ಕಾಡುವ ಮಿಲಿಯನ್ ಡಾಲರ್ ಪ್ರಶ್ನೆಯಿದು. ‘ಬಾಹುಬಲಿ 2’ ರಿಲೀಸ್ ಆಗಿ 6 ತಿಂಗಳು ಕಳೆದರೂ ರಾಜಮೌಳಿ ತನ್ನ ನಿರ್ದೇಶನದ ಹೊಸ ಚಿತ್ರ ಯಾವುದೆಂಬ ಬಗ್ಗೆ ಈ ತನಕ ತುಟಿಬಿಚ್ಚಿರಲಿಲ್ಲ. ಆದರೆ ಕೊನೆಗೂ, ಅವರು ಈ ವಿಷಯದಲ್ಲಿ ವೌನ ಮುರಿದಿದ್ದಾರೆ. ಹೌದು. ಇತ್ತೀಚೆಗೆ ಅವರು ಮಾಸ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಶೀಘ್ರದಲ್ಲೇ ತಾನು ಹೊಸ ಚಿತ್ರಕ್ಕೆ ಸಿದ್ಧತೆ ಆರಂಭಿಸುವ ಸುಳಿವು ನೀಡಿದ್ದಾರೆ.

‘ದೇಶಮುದುರು’, ‘ಕ್ಯಾಮರಾಮ್ಯಾನ್’, ‘ಗಂಗಾ ತೊ ರಾಂಬಾಬು’ ಎಂಬ ಸೂಪರ್‌ಹಿಟ್ ಟಾಲಿವುಡ್ ಚಿತ್ರಗಳ ನಿರ್ಮಾಪಕರಾಗಿರುವ ಧನಯ್ಯ ಅವರಿಗಾಗಿ ರಾಜಮೌಳಿ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ. ಆದರೆ ಅದು ಬಹುಭಾಷಾ ಚಿತ್ರವೇ ಮತ್ತು ಅದರಲ್ಲಿ ನಟಿಸಲಿರುವ ನಟನಟಿಯರ್ಯಾರು ಎಂಬಿತ್ಯಾದಿ ವಿಷಯಗಳ ಬಗ್ಗೆ ರಾಜಮೌಳಿ ಯಾವುದೇ ವಿವರವನ್ನು ನೀಡಿಲ್ಲ. ಆದರೆ ಧನಯ್ಯ ನಿರ್ಮಾಣದ ಚಿತ್ರದ ಬಳಿಕ ಅವರು ಮಹೇಶ್‌ಬಾಬು ಅಭಿನಯದ ಚಿತ್ರವೊಂದಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಆ ಚಿತ್ರಕ್ಕೆ ಕೆ.ಎಲ್.ನಾರಾಯಣನ್ ನಿರ್ಮಾಪಕರಾಗಲಿದ್ದಾರೆ. ಅದೇನಿದ್ದರೂ 2019ರಲ್ಲಿ ಅವರು ಮಹೇಶ್‌ಬಾಬು ಚಿತ್ರದ ಕೆಲಸವನ್ನು ಆರಂಭಿಸಲಿರುವುದಾಗಿ ರಾಜಮೌಳಿ ತಿಳಿಸಿದ್ದಾರೆ. ಆದರೆ ಬಾಹುಬಲಿಯ ನಟರಾದ ಪ್ರಭಾಸ್ ಹಾಗೂ ರಾಣಾ ದಗುಬಾಟಿ ಮತ್ತೊಮ್ಮೆ ರಾಜಾಮೌಳಿಯ ಚಿತ್ರಗಳಲ್ಲಿ ನಟಿಸಬೇಕೆಂದು ಅಪಾರ ಸಂಖ್ಯೆಯ ಚಿತ್ರಪ್ರೇಮಿಗಳ ಆಕಾಂಕ್ಷೆಯೆಂಬುದನ್ನು ಸ್ವತ ಮೌಳಿ ಒಪ್ಪಿಕೊಳ್ಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News