ಹಸಿವು ಮತ್ತು ಬಡತನದ ಬಗ್ಗೆ ಮೊದಲ ಗಮನವಿರಲಿ

Update: 2017-11-08 18:58 GMT

‘ವ್ಯಾಪಾರೋದ್ಯಮ ಮಾಡುವುದು ಸುಲಭ’ ಎಂಬುದು ಬದಿಗಿರಲಿ; ತುರ್ತಾಗಿ ಗಮನಹರಿಸಬೇಕಾಗಿರುವುದು ಹಸಿವು ಮತ್ತು ಬಡತನದ ಸಮಸ್ಯೆಗಳ ಬಗ್ಗೆ ಎನ್ನುವುದನ್ನು ಭಾರತ ಮರೆಯದಿರಲಿ.


ವಿಶ್ವಬ್ಯಾಂಕ್ ಇತ್ತೀಚೆಗೆ ಪ್ರಕಟಿಸಿದ ‘‘ವಾಣಿಜ್ಯೋದ್ಯಮ ನಡೆಸುವುದು ಸುಲಭ’’ ರ್ಯಾಂಕ್ ನೀಡಿಕೆಯ ಬಗ್ಗೆ ಮೋದಿ ಸರಕಾರ ತನ್ನನ್ನು ತಾನೇ ಅಭಿನಂದಿಸಿಕೊಳ್ಳುವ ಭರಾಟೆಯಲ್ಲಿ ಮುಳುಗಿದೆ.

ಸೂಚ್ಯಂಕದಲ್ಲಿ ಮೇಲಿನ ರ್ಯಾಂಕಿಂಗ್ ಗಳಿಸಿದೆ ಎಂದರೆ ವ್ಯಾಪಾರೋದ್ಯಮ ನಡೆಸಲು ಹೆಚ್ಚು ಉತ್ತಮವಾದ, ಸಾಮಾನ್ಯವಾಗಿ ತುಂಬ ಸರಳವಾದ ನಿಯಮ -ನಿಯಂತ್ರಣಗಳು ಮತ್ತು ಆಸ್ತಿ ಹಕ್ಕುಗಳಿಗೆ ಹೆಚ್ಚು ಬಲಿಷ್ಠವಾದ ರಕ್ಷಣೆಗಳು ಇವೆ ಎಂದೇ ಅರ್ಥ. ವಿಶ್ವಬ್ಯಾಂಕ್ ಪ್ರಕಟಿಸಿರುವ ‘‘ ದಿ ಈಸ್ ಆಫ್ ಬ್ರಿಂಗ್ ಬಿಸಿನೆಸ್’’ (ವ್ಯಾಪಾರೋದ್ಯಮ ಮಾಡುವುದು ಸುಲಭ) ಸೂಚ್ಯಂಕವೂ ವ್ಯಾಪಾರೋದ್ಯಮಗಳ ಮೇಲೆ ನೇರವಾಗಿ ಪರಿಣಾಮ ಬೀರುವ ನಿಯಂತ್ರಣಗಳನ್ನು ಅಳೆಯುವುದಕ್ಕಾಗಿ ಇದೆಯೇ ಹೊರತು, ಅದು ರಾಷ್ಟ್ರವೊಂದರ ಮೂಲ ಚೌಕಟ್ಟಿನ ಗುಣಮಟ್ಟ, ಬೃಹತ್ ಮಾರುಕಟ್ಟೆಗಳಿಗಿರುವ ಸಾಮೀಪ್ಯ, ಹಣದುಬ್ಬರ ಅಥವಾ ಅಪರಾಧದಂತಹ ಸಾಮಾನ್ಯ ಪರಿಸ್ಥಿತಿಗಳನ್ನು ಅದು ನೇರವಾಗಿ ಅಳೆಯುವುದಿಲ್ಲ.

ಸೂಚ್ಯಂಕದಲ್ಲಿ ಯಾವುದೇ ಒಂದು ರಾಷ್ಟ್ರದ ರ್ಯಾಂಕಿಂಗ್ ಹತ್ತು ಉಪಸೂಚ್ಯಂಕಗಳು ಹೀಗಿವೆ: ಒಂದು ವ್ಯಾಪಾರ ಅಥವಾ ಉದ್ಯಮವನ್ನು ಆರಂಭಿಸಲು ತಗಲುವ ಸಮಯ; ಕಟ್ಟಡ ಮಂಜೂರಾತಿಗಳನ್ನು ಪಡೆಯುವುದು ಆದರೆ ಜಮೀನನ್ನು ಕೊಂಡುಕೊಳ್ಳುವುದಲ್ಲ; ವಿದ್ಯುತ್ ಸಂಪರ್ಕವನ್ನು ಪಡೆಯುವುದು; ಆಸ್ತಿ ಕೊಂಡು ಕೊಂಡಾಗ ನೋಂದಣಿ ಮಾಡಿಸುವುದು; ಸಾಲ ಮಂಜೂರು ಮಾಡಿಸಿಕೊಳ್ಳುವುದು; ಹೂಡಿಕೆದಾರರ ರಕ್ಷಣೆ; ತೆರಿಗೆ ಪಾವತಿಗೆ ಸಂಬಂಧಿಸಿದ ನಿಯಮಗಳು; ವಿದೇಶ ವ್ಯಾಪಾರ; ಕಾಂಟ್ರಾಕ್ಟ್‌ಗಳ ಅನುಷ್ಠಾನ; ದಿವಾಳಿತನಕ್ಕೆ ಅರ್ಜಿ ಸಲ್ಲಿಸುವಿಕೆ ಅಥವಾ ಬಲತ್ಕಾರ ಪೂರ್ವಕವಾಗಿ ದಿವಾಳಿತನವನ್ನು ಹೇರುವುದು. ಈ ಎಲ್ಲ ಹಂತಗಳು ಬಹುಪಾಲು ತನ್ನಿಂದ ತಾನಾಗಿಯೇ ನಡೆಯಬೇಕು. ಆದರೆ ಇವು ಹೀಗೆ ನಡೆಯುವುದಿಲ್ಲ.

ಪ್ರತಿಯೊಂದು ಹಂತವೂ ಬಾಡಿಗೆ ವಸೂಲಾತಿಯ ಒಂದು ಬಿಂದುವನ್ನು ಪ್ರತಿನಿಧಿಸುತ್ತದೆೆ, ಅಂದರೆ ನಮ್ಮ ವಾಣಿಜ್ಯ ವಾತಾವರಣದಲ್ಲಿ ಮುಂದೆ ಹೋಗಬೇಕಾದರೆ ಕೈಬೆಚ್ಚಗೆ ಮಾಡಬೇಕಾಗುತ್ತದೆ. ನಮ್ಮ ಸಮಸ್ಯೆ ಎಂದರೆ ನಮ್ಮಲ್ಲಿ ಸರಿಯಾದ ಪ್ರಕ್ರಿಯೆಗಳ ಹಾದಿಗಳು ಇಲ್ಲವೆಂದಲ್ಲ. ನಮ್ಮ ಸಮಸ್ಯೆ, ದಿನನಿತ್ಯದ ಸಾಮಾನ್ಯ ವ್ಯವಹಾರಗಳಿಗೆ ಕೂಡ ಬೆದರಿಸಿ ಹಣ ಪಡೆಯುವುದು. ಬಾಡಿಗೆ ವಸೂಲು ಮಾಡುವವರಿಗೆ ಹಣ ಕೊಡಲು ನೀವು ಸಿದ್ಧರಿದ್ದರೆ ವಾಣಿಜ್ಯೋದ್ಯಮ ನಡೆಸುವುದು ಭಾರೀ ಸುಲಭವಾಗಿ ಬಿಡುತ್ತದೆ.

ವಾಸ್ತವಿಕ ಭಾರತದಲ್ಲಿ ಒಂದು ಕಟ್ಟಡದ ಯೋಜನೆ(ಪ್ಲಾನ್)ಯನ್ನು ಮಂಜೂರುಮಾಡಿಸಿಕೊಳ್ಳಲು 123 ದಿನಗಳು ಬೇಕಾಗುತ್ತವೆ ಮತ್ತು ಒಂದು ನಾಗರಿಕ ವಿವಾದದಲ್ಲಿ ನ್ಯಾಯಾಲಯದ ತೀರ್ಪು ಪಡೆಯಲು 1,445 ದಿನಗಳು ತಗಲುತ್ತವೆ. ಆದರೆ ನಾವು ಘೋಷಿಸುವ ಸುಧಾರಣೆಗಳು ನಮ್ಮ ರ್ಯಾಂಕಿಂಗ್ ಅನ್ನು ಹೆಚ್ಚಿಸಿವೆ; ವಾಣಿಜ್ಯ ಹವಾಮಾನದಲ್ಲಿ ಹೇಳಿಕೊಳ್ಳುವಂತಹ ನಿಜವಾದ ಯಾವ ಬದಲಾವಣೆಗಳೂ ಆಗಿಲ್ಲ.

ನಮ್ಮ ಕೆಲಸ ಮಾಡಿಸಿಕೊಳ್ಳುವ ಏಜಂಟ್‌ಗಳು ಅಥವಾ ಸಮಾಲೋಚಕರ ನೆರವಿಲ್ಲದೆ ಯಾವುದೇ ಭಾರತೀಯ ವ್ಯಾಪಾರೋದ್ಯಮ ಆರಂಭವಾಗಲಾರದು ಅಥವಾ ಕಾರ್ಯಾಚರಿಸಲಾರದು. ದಕ್ಷಿಣ ದಿಲ್ಲಿಯ ಸಂಪತ್ತಿನ ಬಹುದೊಡ್ಡ ಭಾಗ ಈ ನೆರವಿನ ಚಟುವಟಿಕೆಗಳಿಂದಾಗಿಯೇ ಸಾಧ್ಯವಾಗಿದೆ. ರಾಜ್ಯಗಳ ರಾಜಧಾನಿಗಳಲ್ಲಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಕೂಡ ಇದೇ ಪರಿಸ್ಥಿತಿ ಇದೆ.

ಆದ್ದರಿಂದ ‘ದಿ ಈಸ್ ಆಫ್ ಡುಯಿಂಗ್ ಬಿಸಿನೆಸ್’ನ ಸೂಚ್ಯಂಕ ವನ್ನಾಧರಿಸಿ ಭಾರತದ ವಾಣಿಜ್ಯ ಹವಾಮಾನವನ್ನು ನಿರ್ಧರಿಸುವುದು, ಅದರ ಬಗ್ಗೆ ತೀರ್ಪು ನೀಡುವುದೆಂದರೆ ಒಬ್ಬ ಪೊಲೀಸ್ ಪೇದೆಯನ್ನು, ಅಧಿಕಾರಿಯನ್ನು ಅವರ ವೃತ್ತಿಪರ ಕೌಶಲ್ಯ ಮತ್ತು ಭ್ರಷ್ಟಾಚಾರದ ಕುರಿತಾದ ಅವನ ಒಲವಿಗೆ ಬದಲಾಗಿ ಅವನ ಸಮವಸ್ತ್ರದ ಸ್ವಚ್ಛತೆ ಮತ್ತು ಗರಿಗರಿತನವನ್ನಾಧರಿಸಿ ಅವನ ಬಗ್ಗೆ ತೀರ್ಪು ನೀಡುವುದಕ್ಕೆ ಸಮನಾಗುತ್ತಿದೆ. ಆದರೆ ಒಂದು ರಾಷ್ಟ್ರವಾಗಿ, ಸಂದರ್ಭಕ್ಕೆ ಸರಿಯಾಗಿ ವೇಷತೊಡುವುದರಲ್ಲಿ ನಾವು ನಿಸ್ಸೀಮರು.

ಇನ್ನಷ್ಟು ಕ್ರಮಗಳು
ರಾಷ್ಟ್ರೀಯ ಆದ್ಯತೆಗಳನ್ನು ಗುರುತಿಸಲು ಉಪಯೋಗವಾಗುವ ಮತ್ತು ಹೆಚ್ಚು ಪ್ರಸ್ತುತವಾದ ಬೇರೆ ಸೂಚ್ಯಂಕಗಳಿವೆ. ಅಕ್ಟೋಬರ್‌ನಲ್ಲಿ ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ ಜಾಗತಿಕ ಹಸಿವು ಸೂಚ್ಯಂಕ(ಗ್ಲೋಬಲ್ ಹಂಗರ್ ಇಂಡೆಕ್ಸ್)ವನ್ನು ಬಿಡುಗಡೆ ಮಾಡಿತು. ಈ ಸೂಚ್ಯಂಕದಲ್ಲಿ ಭಾರತದ ರ್ಯಾಂಕಿಂಗ್ ಸಂತೋಷ ತರುವಂತಹದ್ದೇನೂ ಅಲ್ಲ. ಈ ಸಂಸ್ಥೆಯ ವರದಿ ಹೀಗೆ ಹೇಳಿದೆ. ‘‘119 ದೇಶಗಳಲ್ಲಿ ಭಾರತ 100ನೆ ಸ್ಥಾನದಲ್ಲಿದೆ ಮತ್ತು ಸಮಗ್ರ ಏಶ್ಯಾದಲ್ಲಿ (ಹಸಿವಿನಲ್ಲಿ) ತೃತೀಯ ಅತ್ಯಂತ ಹೆಚ್ಚು ಅಂಕಗಳಿಸಿದೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಮಾತ್ರ ಭಾರತಕ್ಕಿಂತ ಕೆಳಗಿನ ರ್ಯಾಂಕ್ ಪಡೆದಿದೆ.

ಇದೇ ರೀತಿಯಾಗಿ, (ಇತರ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಕೂಡ) ಭಾರತವು ವಿಶ್ವದ ಮಾನವ ಅಭಿವೃದ್ಧಿ ಸೂಚ್ಯಂಕ (ಹ್ಯೂಮನ್ ಡೆವಲೆಪ್‌ಮೆಂಟ್ ಇಂಡೆಕ್ಸ್)ದಲ್ಲಿ ತುಂಬ ಕಳಪೆ ಸಾಧನೆ ತೋರಿದೆ.

ಯಾದಿಯಲ್ಲಿರುವ 168 ದೇಶಗಳಲ್ಲಿ ಭಾರತ 131ನೆ ರ್ಯಾಂಕ್ ಪಡೆದಿದೆ. ಹೊಸ ಅಂತಾರಾಷ್ಟ್ರೀಯ ಬಹು ಆಯಾಮವುಳ್ಳ ಬಡತನ ಸೂಚ್ಯಂಕದ (ಮಲ್ಟಿ ಡಿಮೆಸ್ಕಸಲ್ ಪಾವರ್ಟಿ ಇಂಡೆಕ್ಸ್) ಪ್ರಕಾರ, ಪೌಷ್ಟಿಕ ಆಹಾರದ ಮೂಲ ಮಟ್ಟಗಳನ್ನು ಕಾಯ್ದುಕೊಳ್ಳುವಲ್ಲಿ ಭಾರತದ ಅತ್ಯಂತ ಕೆಳಮಟ್ಟದ ದಾಖಲೆಯು ಅದರ ಬಡತನಕ್ಕೆ ಅತ್ಯಂತ ದೊಡ್ಡ ಕೊಡುಗೆ ನೀಡುವ ಅಂಶವಾಗಿದೆ. ಈ ಸೂಚ್ಯಂಕದ ಪ್ರಕಾರ ಸುಮಾರು 645 ಮಿಲಿಯನ್ ಮಂದಿ (ಭಾರತದ ಜನಸಂಖ್ಯೆಯ ಸುಮಾರು ಶೇ.55) ಬಡವರು ಅಲ್ಲದೆ, ಹೊಸ ಮಾನದಂಡಗಳ ಪ್ರಕಾರ, ಹರ್ಯಾಣ, ಗುಜರಾತ್, ಕರ್ನಾಟಕದಂತಹ, ಸಾಮಾನ್ಯವಾಗಿ ಶ್ರೀಮಂತ ರಾಜ್ಯಗಳೆಂದು ಪರಿಗಣಿತವಾಗಿರುವ ರಾಜ್ಯಗಳಲ್ಲಿ ಕೂಡ ಜನಸಂಖ್ಯೆಯ ಶೇ.40ಕ್ಕಿಂತ ಹೆಚ್ಚು ಮಂದಿ ಬಡವರು. ಬಡವರು ಶೇ.20ಕ್ಕಿಂತ ಕಡಿಮೆ ಇರುವ ಏಕೈಕ ರಾಜ್ಯವೆಂದರೆ ಕೇರಳ. ಬಡತನದ ಹತ್ತು ಸೂಚಕಗಳ ಪೈಕಿ ಮೂರನ್ನು ಹೊಂದಿರದ ವ್ಯಕ್ತಿಯನ್ನು ಬಡವ ಎಂದು ವ್ಯಾಖ್ಯಾನಿಸಲಾಗಿದೆ. ಈ ವ್ಯಾಖ್ಯಾನದ ಪ್ರಕಾರ, ಭಾರತದ ಶೇ.55 ಜನರು ಬಡವರು. ಸುಮಾರು ಶೇ.20 ಭಾರತೀಯರು ಹತ್ತರಲ್ಲಿ ಆರು ಇಂಡಿಕೇಟರ್‌ಗಳಿಂದ ವಂಚಿತರಾದವರು.

ಸ್ವಲ್ಪಮಟ್ಟಿಗೆ ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳುವ ವರ್ಲ್ಡ್ ಫೋರಂ ನಂತರ ಎನ್‌ಜಿಒಗಳು ಮತ್ತು ಕನ್ಫಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀ, ಎಫ್‌ಐಸಿಸಿಐ ಮತ್ತು ಅಸೋಚಮ್ ನಂತಹ ಇತರ ಕೆಲವು ಅಳತೆಗೋಲುಗಳು ಇವೆ. ಇವುಗಳಲ್ಲಿ ಅತ್ಯಂತ ಜನಪ್ರಿಯವಾದದು ಇಕನಾಮಿಕ್ ಪೋರಂನ ಸೂಚ್ಯಂಕ. ಇದು ವಿಶ್ವಬ್ಯಾಂಕ್‌ನ ‘ಈಸ್ ಆಫ್ ಡುಯಿಂಗ್ ಬಿಸಿನೆಸ್‌ನ, ಹೆಚ್ಚು ಮಂದಿಗೆ ತಿಳಿದಿರುವ ದೊಡ್ಡಣ್ಣ.

ಇಕನಾಮಿಕ್ ಫ್ರೀಡಂ ಎಂದರೇನು?
ವಾರ್ಷಿಕ ‘ಇಕನಾಮಿಕ್ ಪ್ರೀಡಂ ಆಫ್ ದಿ ವರ್ಲ್ಡ್’ ವರದಿಯು ದೇಶದ ಆರ್ಥಿಕ ಸ್ವಾತಂತ್ರದ ಮಟ್ಟವನ್ನನುಸರಿಸಿ ದೇಶಗಳಿಗೆ ರ್ಯಾಂಕ್ ನೀಡುತ್ತದೆ. ಇದರ ಪ್ರಕಾರ ಭಾರತಕ್ಕೆ 111ನೆ ರ್ಯಾಂಕ್.ಆದರೆ ಆರ್ಥಿಕ ಸ್ವಾತಂತ್ರವೆಂದರೆ ಉತ್ತಮ ಸರಕಾರ, ಉತ್ತಮ ಆಡಳಿತವೆಂದು ಅರ್ಥವಲ್ಲ. ಅದು ಆರ್ಥಿಕ ಸಾಧನೆಗಳ ಮಾನದಂಡವೂ ಅಲ್ಲ. ಇದು ಒಂದೊಮ್ಮೆ ರಾಜೀವ್‌ಗಾಂಧಿ ಪ್ರತಿಷ್ಠಾನದಲ್ಲಿದ್ದ ಬಿಟೆಕ್ ದೆೆಬ್ರಾಯ್, ಗುಜರಾತ್‌ಗೆ ಅಭಿವೃದ್ಧಿಯಲ್ಲಿ ಮೊದಲ ಸ್ಥಾನ ನೀಡಿದ್ದ ಸೂಚ್ಯಂಕ. ಇದು ರಾಜೀವ್ ಗಾಂಧಿ ಪ್ರತಿಷ್ಠಾನ ನಡೆಸಿದ ಅಧ್ಯಯನ ವರದಿ/ಸೂಚ್ಯಂಕ ಎಂದು ಮೋದಿ ಪೂರ್ಣ-ಪುಟಗಳ ಜಾಹೀರಾತು ನೀಡಿ ತಮ್ಮ ಸಾಧನೆಯ ಬಗ್ಗೆ ಡಂಗುರ ಸಾರಿಕೊಂಡಿದ್ದರು. ಆದರೆ ಈಗ ಅದೇ ದೆೆಬ್ರಾಯ್, ಪ್ರಧಾನಿ ಮೋದಿಯವರ ಆರ್ಥಿಕ ಸಲಹಾ ಸಮಿತಿಯಲ್ಲಿದ್ದಾರೆ.

ಒಟ್ಟಿನಲ್ಲಿ, ಭಾರತದ ಭವಿಷ್ಯವನ್ನು ಮತ್ತು ಅದರ ಸ್ವಾತಂತ್ರದ ಗುಣಮಟ್ಟವನ್ನು ನಿರ್ಧರಿಸುವುದು ಮಾನವ ಅಭಿವೃದ್ಧಿ ಸೂಚ್ಯಂಕ ಮತ್ತು ಜಾಗತಿಕ ಹಸಿವು ಸೂಚ್ಯಂಕಗಳೇ ಹೊರತು, ‘ವ್ಯಾಪಾರೋದ್ಯಮ ಸುಲಭ’ ಅಥವಾ ‘ಆರ್ಥಿಕ ಸ್ವಾತಂತ್ರ’ಗಳಲ್ಲ.

ಕೃಪೆ: scroll.in

Writer - ಮೋಹನ್ ಗುರುಸ್ವಾಮಿ

contributor

Editor - ಮೋಹನ್ ಗುರುಸ್ವಾಮಿ

contributor

Similar News