ಮೀನಾಕುಮಾರಿ ಬಯೋಪಿಕ್ ನಿಂದ ಹೊರನಡೆದ ವಿದ್ಯಾಬಾಲನ್

Update: 2017-11-10 14:08 GMT

ಹಿಂದಿ ಚಿತ್ರರಂಗದ ಜೀವಂತ ದಂತಕತೆಯೆನಿಸಿದ್ದ ನಟಿ ಮೀನಾಕುಮಾರಿಯ ಬಯೋಪಿಕ್‌ನಲ್ಲಿ ವಿದ್ಯಾಬಾಲನ್ ನಟಿಸುವುದು ಬಹುತೇಕ ಖಚಿತವಾಗಿತ್ತು. ಸ್ವತಃ ಚಿತ್ರದ ನಿರ್ದೇಶಕ ತಿಗಮಾಂಶು ಧುಲಿಯಾ ಈ ವಿಷಯವನ್ನು ಬಹಿರಂಗಪಡಿಸಿದ್ದರು. ಆದರೆ ಅನಿರೀಕ್ಷಿತವಾಗಿ ವಿದ್ಯಾಬಾಲನ್ ಆ ಚಿತ್ರದಿಂದ ಹಿಂದೆ ಸರಿದಿದ್ದಾರೆ. ಚಿತ್ರಕತೆ ಹಿಡಿಸದ ಕಾರಣ ತಾನು ಈ ಬಯೋಪಿಕ್‌ನಲ್ಲಿ ನಟಿಸುವುದಿಲ್ಲವೆಂದು ಆಕೆ ಕಾರಣ ನೀಡಿದ್ದಾರೆ. ಚಿತ್ರಕತೆಯು ಪಾತ್ರಕ್ಕೆ ನ್ಯಾಯ ಸಲ್ಲಿಸಬೇಕು. ಕೇವಲ ಮೀನಾಕುಮಾರಿ ಬದುಕಿನ ರೋಚಕ ವಿಷಯಗಳನ್ನೇ ಚಿತ್ರದಲ್ಲಿ ಬಿಂಬಿಸುವುದನ್ನು ತಾನು ಒಪ್ಪಿಕೊಳ್ಳುವುದಿಲ್ಲ. ಆ ಮಹಾನ್ ನಟಿಯ ಬದುಕಿನ ವಿವಿಧ ಮಜಲುಗಳನ್ನು ಚಿತ್ರದಲ್ಲಿ ತೋರಿಸಬೇಕಾಗುತ್ತದೆಯೇ ಹೊರತು ರಂಜನಾತ್ಮಕ ಆಂಶಗಳನ್ನು ಮಾತ್ರ ಅಲ್ಲ. ಹೀಗಾಗಿ ಈ ಚಿತ್ರದಲ್ಲಿ ನಟಿಸದಿರಲು ನಿರ್ಧರಿಸಿರುವುದಾಗಿ, ‘ಡರ್ಟಿ ಪಿಕ್ಚರ್’ ಖ್ಯಾತಿಯ ನಟಿ ಹೇಳಿಕೊಂಡಿದ್ದಾರೆ.

ಅಂದಹಾಗೆ ವಿದ್ಯಾಬಾಲನ್ ಬಯೋಪಿಕ್ ಚಿತ್ರದಲ್ಲಿ ನಟಿಸಲು ಒಲ್ಲೆ ಎಂದಿದ್ದು ಇದು ಮೊದಲೇನಲ್ಲ. ಖ್ಯಾತ ಸಾಹಿತಿ ಕಮಲಾ ಸುರೈಯಾ ಜೀವನಕಥೆಯಾಧಾರಿತ ಮಲಯಾಳಂ ಚಿತ್ರ ‘ಆಮ್ಮಿ’ ಚಿತ್ರಕ್ಕೆ ವಿದ್ಯಾಬಾಲನ್ ಆಯ್ಕೆಯಾಗಿದ್ದರು. ಆದರೆ ಚಿತ್ರೀಕರಣಕ್ಕೆ ಮುನ್ನ ಆಕೆ ಯಾವುದೇ ಕಾರಣ ನೀಡದೆ ಹಿಂದೆ ಸರಿದಿದ್ದರು. ಇದಕ್ಕಾಗಿ ‘ಅಮ್ಮಿ’ ಚಿತ್ರದ ನಿರ್ದೇಶಕ ಕಮಲ್ ಅವರು ವಿದ್ಯಾಬಾಲನ್ ಬಗ್ಗೆ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದರು.

ವಿದ್ಯಾಬಾಲನ್ ಸದ್ಯ ಸುರೇಶ್ ತಿವಾರಿ ನಿರ್ದೇಶನದ ‘ತುಮ್ಹಾರಿ ಸುಲು’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಹಲವಾರು ಕನಸುಗಳನ್ನು ಕಟ್ಟಿಕೊಂಡ, ಅದನ್ನು ನನಸುಗೊಳಿಸಲು ಪ್ರಯತ್ನಿಸುವ ಮಧ್ಯಮವರ್ಗದ ಲವಲವಿಕೆಯ ಯುವತಿಯೊಬ್ಬಳ ಸುತ್ತ ತಿರುಗುವ ಕಥೆಯಿರುವ ‘ತುಮ್ಹಾರಿ ಸುಲು’ ಬಗ್ಗೆ ವಿದ್ಯಾಬಾಲನ್ ಭಾರೀ ಭರವಸೆ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News