ಕೋರ್ಟ್ ಗೆ ಹಾಜರಾಗದ ಜಯ್ ಶಾ: ವಿಚಾರಣೆ ಮುಂದೂಡಿಕೆ
ಅಹ್ಮದಾಬಾದ್, ನ.13: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ thewire.in ವೆಬ್ ಸೈಟ್ ವಿರುದ್ಧ ದಾಖಲಿಸಿದ್ದ ಮಾನನಷ್ಟ ದಾವೆಯ ವಿಚಾರಣೆ ಇಂದು ಅಹ್ಮದಾಬಾದ್ ನಗರದ ಮೆಟ್ರೊಪಾಲಿಟನ್ ನ್ಯಾಯಾಲಯದಲ್ಲಿ ನಡೆಯಬೇಕಾಗಿತ್ತು. ಆದರೆ ಜಯ್ ಶಾ ವಿಚಾರಣೆಗೆ ಹಾಜರಾಗದ ಕಾರಣ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 16ಕ್ಕೆ ಮುಂದೂಡಲಾಗಿದೆ.
ಇಂದು ತಮಗೆ ಬೇರೊಂದು ಕಾರ್ಯಕ್ರಮವಿರುವುದರಿಂದ ಒಂದು ದಿನದ ಮಟ್ಟಿಗೆ ನ್ಯಾಯಾಲಯದೆದುರು ಹಾಜರಾಗುವುದರಿಂದ ವಿನಾಯಿತಿ ನೀಡಬೇಕೆಂದು ಜಯ್ ಶಾ ತಮ್ಮ ವಕೀಲರ ಮೂಲಕ ವಿನಂತಿಸಿದ ನಂತರ ವಿಚಾರಣೆ ಮುಂದೂಡಲಾಗಿದೆ.
thewire.in ಸಂಪಾದಕರು, ವರದಿಗಾರರು ಹಾಗೂ ಇತರರು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಆಗಮಿಸಿದ್ದರು. ಕಳೆದ ತಿಂಗಳು ನೀಡಿದ್ದ ಆದೇಶದಲ್ಲಿ ಅಹ್ಮದಾಬಾದ್ ನ ನ್ಯಾಯಾಲಯವು 'ದಿ ವೈರ್' ಜಯ್ ಶಾ ಸಂಸ್ಥೆಯ ಆರ್ಥಿಕ ವಹಿವಾಟಿನ ಬಗ್ಗೆ ಯಾವುದೇ ವರದಿ ಪ್ರಕಟಿಸುವುದನ್ನು ನಿರ್ಬಂಧಿಸಿ, ಈ ಮೂಲಕ ದೂರುದಾರರ ಘನತೆಯಿಂದ ಬಾಳುವ ಹಕ್ಕನ್ನು ರಕ್ಷಿಸಬೇಕು ಎಂದು ಹೇಳಿತ್ತು.