×
Ad

ನೋಟು ನಿಷೇಧ: ಮೋದಿಯನ್ನು ತುಘ್ಲಕ್‌ಗೆ ಹೋಲಿಸಿದ ಯಶವಂತ ಸಿನ್ಹಾ

Update: 2017-11-15 17:55 IST

ಅಹ್ಮದಾಬಾದ್‌ನ.15: ನೋಟು ನಿಷೇಧ ಕುರಿತಂತೆ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ತನ್ನ ವ್ಯಂಗ್ಯಕ್ಕೆ ವಸ್ತುವನ್ನಾಗಿಸಿಕೊಂಡ ಮಾಜಿ ವಿತ್ತ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಯಶವಂತ ಸಿನ್ಹಾ ಅವರು, 700 ವರ್ಷಗಳ ಹಿಂದೆ...14ನೇ ಶತಮಾನದಲ್ಲಿ ದಿಲ್ಲಿಯನ್ನಾಳಿದ್ದ ದೊರೆ ಮುಹಮ್ಮದ್ ಬಿನ್ ತುಘ್ಲಕ್ ಕೂಡ ನೋಟು ನಿಷೇಧವನ್ನು ಜಾರಿಗೊಳಿಸಿದ್ದ ಎಂದು ಹೇಳಿದರು.ವಿವಾದಾತ್ಮಕ ನೋಟು ನಿಷೇಧಕ್ಕಾಗಿ ಮೋದಿಯವರನ್ನು ಟೀಕಿಸಿದ ಸಿನ್ಹಾ, ಇದರಿಂದಾಗಿ ದೇಶದ ಆರ್ಥಿಕತೆಗೆ 3.75ಲ.ಕೋ.ರೂ.ಗಳ ನಷ್ಟವುಂಟಾಗಿದೆ ಎಂದರು.

ಹಿಂದೆಯೂ ಹಲವಾರು ಅರಸರು ತಮ್ಮದೇ ಆದ ನಾಣ್ಯಗಳನ್ನು ಚಲಾವಣೆಗೆ ತಂದಿದ್ದರು. ಕೆಲವರು ಹೊಸ ನಾಣ್ಯಗಳ ಚಲಾವಣೆಯ ಜೊತೆಗೆ ಹಿಂದಿನ ನಾಣ್ಯಗಳನ್ನೂ ಉಳಿಸಿಕೊಂಡಿದ್ದರು. ಆದರೆ ತುಘ್ಲಕ್ ಹಳೆಯ ನಾಣ್ಯಗಳನ್ನು ರದ್ದುಗೊಳಿಸಿ ತನ್ನದೇ ಆದ ನಾಣ್ಯಗಳನ್ನು ಚಲಾವಣೆಗೆ ತಂದಿದ್ದ ಎಂದ ಅವರು, ಹೀಗಾಗಿ ನೋಟು ನಿಷೇಧ 700 ವರ್ಷಗಳ ಹಿಂದಯೇ ಆಗಿತ್ತು ಎಂದು ಹೇಳಬಹುದು. ತನ್ನ ರಾಜಧಾನಿಯನ್ನು ದಿಲ್ಲಿಯಿಂದ ದೌಲತಾಬಾದ್‌ಗೆ ವರ್ಗಾಯಿಸಿ ತುಘ್ಲಕ್ ಕುಖ್ಯಾತನಾಗಿದ್ದರೂ ಆತ ಅಪನಗದೀಕರಣವನ್ನೂ ಮಾಡಿದ್ದ ಎಂದರು.

ಸಾಮಾಜಿಕ ಕಾರ್ಯಕರ್ತರ ಗುಂಪೊಂದು ‘ಲೋಕಶಕ್ತಿ ಬಚಾವೋ ಅಭಿಯಾನ’ದಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೋಟು ನಿಷೇಧ ಮತ್ತು ಜಿಎಸ್‌ಟಿ ಜಾರಿ ಕುರಿತು ತನ್ನ ಅಭಿಪ್ರಾಯಗಳನ್ನು ಹಂಚಿಕೊಂಡ ಸಿನ್ಹಾ, ನಿರುದ್ಯೋಗವು ಇಂದು ದೇಶದ ಅತ್ಯಂತ ದೊಡ್ಡ ಸಮಸ್ಯೆಯಾಗಿದೆ. ಪ್ರಚಲಿತ ಸ್ಥಿತಿಯಲ್ಲಿ ಆರ್ಥಿಕತೆಯ ಉಳಿವಿಗಾಗಿ ಏನನ್ನಾದರೂ ಮಾಡಲು ಸಮಯವು ಮೀರುತ್ತಿದೆ ಎಂದರು.

‘ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ’ಯ ವರದಿಯೊಂದನ್ನು ಉಲ್ಲೇಖಿಸಿದ ಅವರು,ಹೊಸ ನೋಟುಗಳ ಮುದ್ರಣದಂತಹ ನೋಟು ನಿಷೇಧಕ್ಕೆ ಸಂಬಂಧಿಸಿದ ನೇರ ವೆಚ್ಚವೇ 1,28,000 ಕೋ.ರೂ.ಗಳಾಗಿವೆ. ನೋಟು ನಿಷೇಧದಿಂದಾಗಿ ಆರ್ಥಿಕತೆಯು ಶೇ.1.5ರಷ್ಟು ಹಿಂಜರಿಕೆ ಕಂಡಿರುವುದನ್ನು ಪರಿಗಣಿಸಿದರೆ ಅದು ದೇಶದ ಬೊಕ್ಕಸಕ್ಕೆ 2,25,000 ಕೋ.ರೂ.ಗಳ ಹಾನಿಯನ್ನುಂಟು ಮಾಡಿದೆ. ಹೀಗಾಗಿ ನೋಟು ನಿಷೇಧವು ಒಟ್ಟು 3.75 ಲ.ಕೋ.ರೂ.ಗೂ ಅಧಿಕ ನಷ್ಟಕ್ಕೆ ಕಾರಣವಾಗಿದೆ ಎಂದರು.

ನೋಟು ನಿಷೇಧ ಮತ್ತು ಜಿಎಸ್‌ಟಿ ಜಾರಿ ಇವೆರಡನ್ನೂ ‘ಮಾಧ್ಯಮಗಳ ಘಟನೆ’ಗಳೆಂದು ಪರಿಗಣಿಸಲಾಗಿದೆ ಎಂದ ಅವರು, ನಾವು ಅದನ್ನೇಕೆ ಮಾಡಿದೆವು ಎಂಬ ಬಗ್ಗೆ ಯೋಚಿಸಬೇಕಿದೆ. ಅದನ್ನು ನಮಗಿಂತ ಮೊದಲು ಯಾರೂ ಮಾಡಿರಲಿಲ್ಲ ಎಂದು ನಾವು ಭಾವಿಸಲು ತೊಡಗಿದ್ದೆವು. ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಸರಕಾರವೂ ಅಧಿಕಾರದಲ್ಲಿತ್ತು ಎನ್ನುವುದನ್ನು ಮರೆಯಕೂಡದು. ಅವರೇನೂ ಮಾಡಿರದಿದ್ದರೆ ನಾವೇಕೆ ಅವರಿಗೆ ಭಾರತರತ್ನ ಪ್ರಶಸ್ತಿಯನ್ನು ನೀಡಿದ್ದೇವೆ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News