ಬಾಲಿವುಡ್ ಆಫರ್ ತಿರಸ್ಕರಿಸಿದ ಅನುಷ್ಕಾ

Update: 2017-11-18 11:55 GMT

ಅರುಂಧತಿ, ಬಾಹುಬಲಿ ಸರಣಿಯ ಚಿತ್ರಗಳಲ್ಲಿ ಜನಪ್ರಿಯತೆಯ ತುತ್ತತುದಿಗೇರಿರುವ ದಕ್ಷಿಣ ಭಾರತದ ನಟಿ ಅನುಷ್ಕಾ ಶೆಟ್ಟಿ, ಬಾಲಿವುಡ್ ಚಿತ್ರವೊಂದರಲ್ಲಿ ನಟಿಸಲು ತನಗೆ ದೊರೆತಿದ್ದ ಆಹ್ವಾನವನ್ನು ತಿರಸ್ಕರಿಸಿದ್ದರೇ?. ಹೌದೆನ್ನುತ್ತದೆ ಟಾಲಿವುಡ್‌ನ ಕೆಲವು ಮೂಲಗಳು.

ಬಾಹುಬಲಿ 2 ಚಿತ್ರದ ಪ್ರಚಂಡ ಗೆಲುವಿನ ಬಳಿಕ ಪ್ರಭಾಸ್‌ಗೆ ಕರಣ್ ಜೋಹರ್ ತನ್ನ ಬಾಲಿವುಡ್ ಚಿತ್ರದಲ್ಲಿ ನಟಿಸುವ ಕೊಡುಗೆ ನೀಡಿದ್ದರು. ಆದರೆ ಪ್ರಭಾಸ್ 20 ಕೋಟಿ ರೂ. ಸಂಭಾವನೆಯ ಬೇಡಿಕೆಯೊಡ್ಡಿದ್ದರಿಂದ, ಮಾತುಕತೆ ಮುರಿದುಬಿತ್ತೆನ್ನಲಾಗಿದೆ. ಅಷ್ಟೇ ‘ಬಾಹುಬಲಿ-2’ನ ಸಹನಟಿ ಅನುಷ್ಕಾ ಶೆಟ್ಟಿ ಕೂಡಾ ಕರಣ್ ಅವರ ಬಾಲಿವುಡ್ ಚಿತ್ರದ ಆಫರನ್ನು ತಿರಸ್ಕರಿಸಿರುವುದು ಕೂಡಾ ಇದೀಗ ಬೆಳಕಿಗೆ ಬಂದಿದೆ.

ಕರಣ್ ಜೋಹರ್ ಅವರು ತಾನು ನಿರ್ಮಿಸಲಿರುವ ಚಿತ್ರಕ್ಕೆ ಮೊದಲಿಗೆ ಅನುಷ್ಕಾ ಶೆಟ್ಟಿಯನ್ನು ಆಯ್ಕೆ ಮಾಡಿದ್ದರು. ಆದರೆ ತನ್ನ ಪಾತ್ರಕ್ಕೆ ಚಿತ್ರದಲ್ಲಿ ಅವಕಾಶಗಳು ಕಡಿಮೆಯೆಂದು ಮನಗಂಡ ಆಕೆ ಚಿತ್ರದಲ್ಲಿ ನಟಿಸಲು ಒಲ್ಲೆ ಎಂದಿದ್ದರಂತೆ. ಆದಾಗ್ಯೂ, ಈ ಚಿತ್ರದಲ್ಲಿ ನಟಿಸಲು ನಿರಾಕರಿಸುವ ಮುನ್ನ ಅನುಷ್ಕಾ, ಪ್ರಭಾಸ್‌ರ ಸಲಹೆಯನ್ನು ಕೂಡಾ ಪಡೆದುಕೊಂಡಿದ್ದರೆನ್ನಲಾಗಿದೆ.

ಅನುಷ್ಕಾ ಈ ಹಿಂದೆ ‘ತಮಾಷಾ’ ಚಿತ್ರದ ನಾಯಕಿ ಪಾತ್ರವನ್ನು ಕೂಡಾ ಇದೇ ಕಾರಣಗಳಿಗಾಗಿ ನಿರಾಕರಿಸಿದ್ದರೆನ್ನಲಾಗಿದೆ. ಅಷ್ಟೇ ಅಲ್ಲ, ಅನುಷ್ಕಾ ಶೆಟ್ಟಿಗೆ ಬಾಲಿವುಡ್ ಚಿತ್ರಗಳಾದ ‘ಸಿಂಗಮ್ 3’ ಹಾಗೂ ‘ಗೋಲ್‌ಮಾಲ್’ ಸರಣಿಗಳಲ್ಲೂ ನಟಿಸಲು ಅಹ್ವಾನ ಬಂದಿತ್ತು. ಅವುಗಳನ್ನು ಕೂಡಾ ಆಕೆ ಕಾಲ್‌ಶೀಟ್ ಸಮಸ್ಯೆಯಿಂದಾಗಿ ತಿರಸ್ಕರಿಸಿದ್ದರಂತೆ.

ಈ ಮಧ್ಯೆ ಅನುಷ್ಕಾ ‘ಭಾಗ್‌ಮತಿ’ ಚಿತ್ರದ ಬಗ್ಗೆ ಭಾರೀ ಭರವಸೆಯನ್ನು ಹೊಂದಿದ್ದಾರೆ. ತೆಲುಗು, ತಮಿಳಿನಲ್ಲಿ ತನಗೆ ಅಪಾರ ಅವಕಾಶಗಳಿರುವಾಗ ಅವನ್ನು ಬಿಟ್ಟು ಬಾಲಿವುಡ್‌ನೆಡೆಗೆ ಕೈಚಾಚುವುದು ಜಾಣತನವಲ್ಲವೆಂದು ಅನುಷ್ಕಾ ಭಾವಿಸಿರಲಿಕ್ಕೂ ಸಾಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News