ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ 'ಜಾನಿ ಜಾನಿ ಎಸ್ ಪಾಪ'

Update: 2017-12-08 12:51 GMT

ಬ್ಲ್ಯಾಕ್ ಕೋಬ್ರ ವಿಜಯ್ ನಿರ್ಮಿಸಿ, ನಾಯಕರಾಗಿ ನಟಿಸುತ್ತಿರುವ 'ಜಾನಿ ಜಾನಿ ಎಸ್ ಪಾಪ' ಸಿನಿಮಾದ ಚಿತ್ರೀಕರಣ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಭರದಿಂದ ಸಾಗಿದೆ.

ಚಿತ್ರೀಕರಣದ ವೇಳೆ ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಜಯ್, 'ಜಾನಿ ಮೇರಾ ನಾಮ್ ಪ್ರೀತಿ ಮೇರ ಕಾಮ್' ಚಿತ್ರದ ಬಗ್ಗೆ ಇಂದಿಗೂ ಬಹಳ ಮಂದಿ ನನ್ನಲ್ಲಿ ಹೇಳುತ್ತಿರುತ್ತಾರೆ. ಅದೇ ಕಾರಣಕ್ಕೆ ನಿರ್ಮಾಣದ ವಿಚಾರ ಬಂದಾಗ ಅದೇ ಚಿತ್ರದ ಭಾಗ ಎರಡನ್ನು ನಾನೇ ನಿರ್ಮಿಸಲು ಮುಂದಾದೆ. ರಘು ಅಣ್ಣ (ರಂಗಾಯಣ ರಘು) ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಹಾಸ್ಯದ ಜತೆಯಲ್ಲೇ ಅಭಿಮಾನಿಗಳು‌ ಬಯಸುವಂಥ ಸಿಕ್ಸ್ ಪ್ಯಾಕ್ ಹೊಡೆದಾಟದ ದೃಶ್ಯಗಳೂ‌ ಚಿತ್ರದಲ್ಲಿವೆ ಎಂದರು.

ಅವರು ಮುಂಜಾನೆ ‌ನಾಲ್ಕು ಗಂಟೆಯ ತನಕ ಚಿತ್ರೀಕರಣದಲ್ಲಿ ತೊಡಗಿಸಿಕೊಂಡು ಸುಸ್ತಾದ ಮುಖದೊಂದಿಗಿದ್ದರು. ಚಿತ್ರದಲ್ಲಿ ರಚಿತಾ ರಾಮ್ ಜತೆಗೆ "ನನ್ನ ಲೈಫಿನ್ ಲೈಟಾನ್ ಮಾಡೋ ಹೊಸ ಪದ್ಮಾವತಿ" ಎಂಬ ಹಾಡು ಇದೆ. ಅದು 'ಊರಿಗೊಬ್ಳೇ ಪದ್ಮಾವತೀ" ಹಾಡಿನ‌ ದಾಖಲೆ ಮುರಿದು ಮುನ್ನುಗ್ಗುವ ಭರವಸೆ ವಿಜಯ್ ಗಿದೆ.

ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶಕರು. ಚಿತ್ರದ ಎಲ್ಲಾ ಹಾಡುಗಳನ್ನು ಧನಂಜಯ ಬರೆದಿದ್ದಾರೆ.

ಎರಡು ಹಾಡುಗಳನ್ನು ವಿಜಯ ಪ್ರಕಾಶ್ ಹಾಡಿದ್ದಾರೆ. 'ದುನಿಯಾ ಟಾಕೀಸ್'  ಹೆಸರಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಒಟ್ಟು 60 ದಿನಗಳ ಕಾಲ ಚಿತ್ರೀಕರಣ ನಡೆಸುವ ಯೋಜನೆ ಹಾಕಲಾಗಿದೆ.

ನಿರ್ದೇಶಕ ಪ್ರೀತಮ್ ಮಾತನಾಡಿ, 'ಜಾನಿ ಮೇರ ನಾಮ್ ಪ್ರೀತಿ ಮೇರ ಕಾಮ್' ಚಿತ್ರದ ಪಾತ್ರಗಳನ್ನೇ ಇಲ್ಲಿಯೂ ಮುಂದುವರಿಸ್ತೇನೆ. ಜಾನಿ ಡಾಟ್ ಕಾಮ್  ಎನ್ನುವುದು ಆತನ ಕಚೇರಿ. ನಾಯಕನ‌‌‌ ಲಾಕೆಟಲ್ಲಿ ಮೂರು ಧರ್ಮಗಳ ದೇವರ ಚಿಹ್ನೆಗಳಿರುತ್ತವೆ. ಹಾಗೆಯೇ ಆತ ಹಿಂದೂ, ಕ್ರಿಶ್ಚಿಯನ್, ಮುಸಲ್ಮಾನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುತ್ತಾನೆ. ಊರಲ್ಲಿ ಪೊಲೀಸ್ ಸ್ಟೇಷನ್ ಇದ್ದರೂ ಜನರು ಜಾನಿಯಲ್ಲೇ ಹೆಚ್ಚು ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿರು ತ್ತಾರೆ  ಎಂದರು.

ರಂಗಾಯಣ ರಘು ಪ್ರಕಾರ ಚಿತ್ರವು ತಮಾಷೆಯೊಂದಿಗೇ  ಹಿರಿಯರ, ಯುವಕರ ಸಮಸ್ಯೆಗಳ ಬಗ್ಗೆ, ಭಾವನೆಗಳ ಬಗ್ಗೆಯೂ ಹೇಳುತ್ತಾ ಸಾಗುತ್ತದೆಯಂತೆ. ವಿಜಯ್ ಜತೆಗೆ ತಾವು ಕೂಡ ಹಲವಾರು ಗೆಟಪ್ ನಲ್ಲಿ ಪ್ರತ್ಯಕ್ಷಗೊಳ್ಳಲಿರುವುದಾಗಿ ರಘು ತಿಳಿಸಿದರು. ಎಲ್ಲ ಡೀಲ್ ಗಳ ನಡುವೆ ಒಂದು ತಿನ್ ಲೈನ್ ಜನಗಳಿಗೆ ಭಾವನಾತ್ಮಕ ಟಚ್ ನೀಡುತ್ತದೆ ಎಂಬ ನಂಬಿಕೆ ಅವರದು.

ಚಿತ್ರದ ನಾಯಕಿ ರಚಿತಾ ರಾಮ್ "ನಾನು‌ ಪ್ರಥಮ ಬಾರಿಗೆ ವಿಜಯ್ ಅವರಿಗೆ ನಾಯಕಿಯಾಗುತ್ತಿದ್ದೇನೆ. ಅಚ್ಯುತ್ ಕುಮಾರ್ ನನ್ನ ತಂದೆಯ ಪಾತ್ರ ನಿಭಾಯಿಸಿದ್ದಾರೆ. ಹೊಸ ಪದ್ಮಾವತಿ ಹಾಡು ನನ್ನ ಮೇಲೆ ಚಿತ್ರೀಕೃತವಾಗಿರುವುದಕ್ಕೆ ಖುಷಿಯಿದೆ. ಕಿರುತೆರೆಯಲ್ಲಿ ಕಾಮಿಡಿ ಕಾರ್ಯಕ್ರಮಕ್ಕೆ ಜಡ್ಜ್ ಆದ ಮೇಲೆ ಫಸ್ಟ್ ಟೈಮ್ ನಟನೆಯಲ್ಲಿಯೂ ಕಾಮಿಡಿ‌ ಇರುವ ಪಾತ್ರ ದೊರಕಿದೆ.

ಕನ್ನಡ ಇಂಗ್ಲಿಷ್ ಎರಡೂ ಭಾಷೆಗಳನ್ನು ಬಳಸುತ್ತೇನೆ. ಛಾಯಾಗ್ರಾಹಕರು ಗ್ಲಾಮರನ್ನು ಚೆನ್ನಾಗಿ ತೋರಿಸಿದ್ದಾರೆ. ಮುಖ್ಯ ವಿಚಾರ ಏನೆಂದರೆ ವಿಜಯ್ ಮತ್ತು ರಘು‌ ಸರ್ ನಡುವೆ ಸೀನ್ ಪೇಪರ್ ನಲ್ಲಿ ಇಲ್ಲದ ಡೈಲಾಗ್ ಗಳು ಸೆಟ್ ನಲ್ಲಿರುತ್ತವೆ" ಎಂದು ನಕ್ಕರು.

ಅದ್ಧೂರಿ ಸೆಟ್

ಕಲಾ ನಿರ್ದೇಶಕ ಮೋಹನ್ ಬಿ ಕೆರೆಯವರು ಒಂದು ತಿಂಗಳ‌ ಶ್ರಮದಿಂದ ಹೊಸ  ‌ಸೆಟ್ ಹಾಕಿದ್ದಾರೆ. 150 ಜನ ಕಾರ್ಮಿಕರು ಕೆಲಸ ಮಾಡಿದ್ದಾರೆ. 'ಜಾನಿಮೇರ ನಾಮ್' ಚಿತ್ರಕ್ಕೆ ನಾಲ್ಕು ದಾರಿಗಳ ಸೆಟ್ ಅನ್ನು 40 ಲಕ್ಷಗಳಲ್ಲಿ ಹಾಕಿದ್ದೆ. ಅದು ಮೈಸೂರಲ್ಲಿ ಚಿತ್ರೀಕರಣವಾಗಿತ್ತು. ಈ ಬಾರಿ
ಹಳೆಯ ಮೈಸೂರು ಬೀದಿ, ರಸೆಲ್ ಮಾರ್ಕೆಟ್, ಶೃಂಗೇರಿಯ ಅಗ್ರಹಾರದಂಥ ಬೀದಿಯನ್ನೆಲ್ಲ ಇಲ್ಲೇ ಸೆಟ್ ನೊಳಗೆ ತಂದಿದ್ದೇನೆ. ಒಟ್ಟು ಒಂದು ಮುಕ್ಕಾಲು ಕೋಟಿಯ ವೆಚ್ಚ ಸೆಟ್ ಗೇ ಆಗಿದೆ ಎನ್ನುವುದು ಮೋಹನ್ ಅವರ ಅಭಿಪ್ರಾಯ.

ಚಿತ್ರಕ್ಕೆ ವಿನೋದ್ ಮಾಸ್ಟರ್ ಸಾಹಸ ಸಂಯೋಜನೆ ಇದೆ. ಸಾಧು‌ಕೋಕಿಲ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News