ಕರ್ನಾಟಕಕ್ಕೆ ಉತ್ತರ ಪ್ರದೇಶ ಮಾದರಿ...

Update: 2018-01-13 18:37 GMT

ಉತ್ತರ ಪ್ರದೇಶದ ಅದ್ಯಾವುದೋ ಕಟ್ಟಡಕ್ಕೆ ಕೇಸರಿ ಬಣ್ಣ ಬಳಿಯುತ್ತಿದ್ದ ಯೋಗಿ ಆದಿತ್ಯನಾಥರಿಗೆ ಕರ್ನಾಟಕದಿಂದ ಫೋನ್ ಬಂತು. ಫೋನ್ ಕಿವಿಗಿಟ್ಟೊಡನೆ ‘ಬಚಾವೋ ಬಚಾವೋ...’ ಎಂಬ ಆರ್ತನಾದ ಕೇಳಿತು. ಇದು ಕರ್ನಾಟಕ ಬಿಜೆಪಿಯ ಆಕ್ರಂದನವೆ ನ್ನುವುದು ಮನವರಿಕೆಯಾಗಿ ಬಣ್ಣ ಬಳಿಯುವ ಕೆಲಸವನ್ನು ಅರ್ಧಕ್ಕೇ ನಿಲ್ಲಿಸಿ ಕರ್ನಾಟಕದೆಡೆಗೆ ಧಾವಿಸಿದರು. ಯೋಗಿ ಆದಿತ್ಯನಾಥರು ಕರ್ನಾ ಟಕಕ್ಕೆ ಕಾಲಿಡುತ್ತಿರುವುದು ಕೇಳಿ ಪತ್ರಕರ್ತ ಎಂಜಲು ಕಾಸಿ ಸಂಭ್ರ ಮಿಸತೊಡಗಿದ. ಇನ್ನಾದರೂ ಬಿಜೆಪಿ ಕಚೇರಿಯ ಪತ್ರಿಕಾಗೋಷ್ಠಿಯಲ್ಲಿ ಕೇಸರಿಬಾತ್ ಪೂರೈಕೆ ಶುರುವಾಗಬಹುದು ಎನ್ನುವ ಆಸೆ ಅವನದು. ಆದಿತ್ಯನಾಥರ ಪ್ರಚಾರಗಳೆಲ್ಲ ಮುಗಿದ ಬಳಿಕ ನೇರವಾಗಿ ಬಿಜೆಪಿ ಕಚೇರಿಗೆ ಹೊರಟ. ಮುಂಜಾಗೃತೆಯಾಗಿ ಆತ ಕೇಸರಿಜುಬ್ಬಾ, ಕೇಸರಿ ಜೋಳಿಗೆ, ಕೇಸರಿ ಪೆನ್ನುಗಳ ಜೊತೆಗೇ ಹೊರಟ. ಬಿಜೆಪಿಯ ಕಚೇರಿಗೆ ಹೋದರೆ ಅಲ್ಲಿಯ ಟಾಯ್ಲೆಟ್‌ಗಳಿಗೆ ಕಾರ್ಯಕರ್ತರು ಕೇಸರಿ ಬಣ್ಣ ಬಳಿಯುತ್ತಿದ್ದರು.

‘‘ಇದ್ಯಾಕೆ ಟಾಯ್ಲೆಟ್‌ಗಳಿಗೆಲ್ಲ ಕೇಸರಿ ಬಣ್ಣ ಬಳಿಯುತ್ತಿದ್ದೀರಿ?’’ ಕಾಸಿ ಅರ್ಥವಾಗದೆ ಕಾರ್ಯಕರ್ತರಲ್ಲಿ ಕೇಳಿದ.

‘‘ಇದು ಉತ್ತರ ಪ್ರದೇಶದ ಅಭಿವೃದ್ಧಿ. ಬಿಜೆಪಿಯವರು ಇನ್ನು ಮುಂದೆ ಗುಜರಾತ್ ಮಾದರಿಯನ್ನು ಕೈ ಬಿಟ್ಟು ಉತ್ತರಪ್ರದೇಶದ ಮಾದರಿಯನ್ನು ಕೈಗೆತ್ತಿಕೊಳ್ಳಬೇಕು ಎಂದು ಕೇಶವಕೃಪಾದಿಂದ ಆಜ್ಞೆಯಾಗಿದೆ...’’ ಕಾರ್ಯಕರ್ತನೊಬ್ಬ ಹೇಳಿದ.

‘‘ಅದಕ್ಕಾಗಿ ಟಾಯ್ಲೆಟ್‌ಗಳಿಗೆಲ್ಲ ಕೇಸರಿ ಬಣ್ಣ ಬಳಿಯುವುದೇ?’’ ಕಾಸಿ ಅರ್ಥವಾಗದೆ ಕೇಳಿದ.

‘‘ಹೌದು. ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಮಲವಿಸರ್ಜನಾದಿ ಗಳು ಕೇಸರಿ ಬಣ್ಣದಲ್ಲೇ ಇರಬೇಕು ಎಂದು ಎಲ್ಲ ನಾಯಕರಿಗೂ, ಕಾರ್ಯಕರ್ತರಿಗೂ ಆದಿತ್ಯನಾಥರು ಆದೇಶ ನೀಡಿದ್ದಾರೆ....’’ ಕಾರ್ಯಕರ್ತ ವಿವರಿಸಿದ.

ಕಾಸಿ ತಲೆತುರಿಸುತ್ತಾ ಬಿಜೆಪಿ ಕಚೇರಿಯನ್ನು ಹೊಕ್ಕರೆ, ಅಲ್ಲಿ ಕೆರಂದ್ಲಾಜೆ ಕೇಸರಿ ಸೀರೆ ಉಟ್ಟು, ತಮ್ಮ ವಿಶಾಲವಾಗಿರುವ ಕೇಸರಿ ಹಲ್ಲುಗಳ ಜೊತೆಗೆ ಕಾಸಿಯನ್ನು ಸ್ವಾಗತಿಸಿದರು.

‘‘ಮೇಡಂ, ಯಡಿಯೂರಪ್ಪರನ್ನು ಹುಡುಕಿಕೊಂಡು ಬಂದೆ. ಅವರ ಇಂಟರ್ಯೂ ಬೇಕಾಗಿತ್ತು...’’ ಹಲ್ಲು ಗಿಂಜಿ ಕೇಳಿದ.

‘‘ಯಡಿಯೂರಪ್ಪ ಅವರನ್ನು ಕೇಸರಿ ಬಣ್ಣದ ಡಬ್ಬಾದ ಜೊತೆಗೆ ಉತ್ತರ ಪ್ರದೇಶಕ್ಕೆ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶ ಮಾದರಿಯಲ್ಲಿ ಕರ್ನಾಟಕವನ್ನು ಕಟ್ಟಲು ಅವರು ತರಬೇತಿ ಪಡೆದು ಬರುತ್ತಾರೆ...’’ ಕೋಭಾ ಕೆರಂದ್ಲಾಜೆ ಹೇಳಿದರು. ‘‘ಉತ್ತರ ಪ್ರದೇಶದಲ್ಲಿ ನಡೆದ ಅಭಿವೃದ್ಧಿಯ ಬಗ್ಗೆ ವಿವರಿಸುತ್ತೀರಾ ಮೇಡಂ?’’ ಕಾಸಿ ಕೇಳಿದ. ‘‘ನೋಡ್ರಿ...ಅವರು ಅಧಿಕಾರಕ್ಕೆ ಬಂದ ಇಂದಿನವರೆಗೆ ನೂರಾರು ಕಾಂಪೌಂಡ್‌ಗಳಿಗೆ ಕೇಸರಿ ಬಣ್ಣ ಬಳಿಯಲಾಗಿದೆ. ಇಂದು ಉತ್ತರ ಪ್ರದೇಶದ ಯಾವುದೇ ಟಾಯ್ಲೆಟ್‌ಗಳನ್ನು ಇಣುಕಿ ನೋಡಿದರೆ ಅವು ಕೇಸರಿ ಬಣ್ಣದಿಂದ ಕಂಗೊಳಿಸುತ್ತಿರುತ್ತವೆ...ಈ ಅಭಿವೃದ್ಧಿಯನ್ನು ನಾವು ಕರ್ನಾಟಕದಲ್ಲೂ ಮಾಡಲಿದ್ದೇವೆ...’’ ಕೆರಂದ್ಲಾಜೆ ವಿವರಿಸಿದರು.

‘‘ಮೇಡಂ...ಟಾಯ್ಲೆಟ್‌ನ್ನು ಸರಿಯಾಗಿ ಶುಚಿಗೊಳಿಸದೇ ಇದ್ದರೆ ಅದು ಕೇಸರಿ ಬಣ್ಣವಲ್ಲದೆ ಬಿಳಿಯಾಗಿ ಕಾಣಿಸಲು ಸಾಧ್ಯವೇ?’’ ಕಾಸಿ ಅರ್ಥವಾಗದೆ ಕೇಳಿದ.

‘‘ಹಾಗಲ್ಲರೀ...ಎಲ್ಲ ಟಾಯ್ಲೆಟ್‌ಗಳಿಗೆ ಕೇಸರಿ ಕಮೋಡ್ ಅಳವಡಿಸಲಾಗಿದೆ. ಈಗಾಗಲೇ ವಿದೇಶಗಳಿಂದ ಭಾರೀ ಪ್ರಮಾಣದ ಕೇಸರಿ ಪೇಂಟ್‌ಗಳನ್ನು ಆಮದು ಮಾಡಲಾಗಿದೆ. ಯೋಗಿಯ ಆಡಳಿತಾವಧಿಯಲ್ಲಿ ಇಡೀ ಉತ್ತರ ಪ್ರದೇಶ ಕೇಸರಿಬಣ್ಣಮಯವಾಗಲಿದೆ. ಕರ್ನಾಟಕದಲ್ಲೂ ನಾವು ಅದೇ ಮಾದರಿಯನ್ನು ಅಳವಡಿಸಲಿದ್ದೇವೆ’’

‘‘ಅದು ಹೇಗೆ ಮೇಡಂ...ಮರಗಿಡಗಳೆಲ್ಲ ಹಸಿರು ಎಲೆಗಳಿಂದ ಕೂಡಿರುತ್ತದೆಯಲ್ಲ....’’ ಕಾಸಿ ಪ್ರಶ್ನಿಸಿದ.

‘‘ನೋಡ್ರೀ...ಈ ಭಾರತದ ಸಂವಿಧಾನವೇ ಅದಕ್ಕೆಲ್ಲ ಕಾರಣ. ಇಲ್ಲಿ ಹಿಂದೂಗಳು ಬಹುಸಂಖ್ಯಾ ತರು. ಹೀಗಿರುವಾಗ ಮರಗಳೆಲ್ಲ ಹಸಿರು ಎಲೆ ಗಳನ್ನು ಬಿಡುತ್ತಿರುವುದು ಮುಸ್ಲಿಮರ ತುಷ್ಟೀಕರಣವಾಗಿದೆ. ಉತ್ತರ ಪ್ರದೇಶದಲ್ಲಿರುವ ಎಲ್ಲ ಮರಗಳಿಗೂ, ಅದರ ಎಲೆಗಳಿಗೂ ಯೋಗಿಯವರು ಕೇಸರಿ ಬಣ್ಣ ಬಳಿಯಲಿದ್ದಾರೆ.’’

‘‘ಇಷ್ಟು ಎಲೆಗಳಿಗೆ ಬಣ್ಣ ಬಳಿಯಲು ಹಣಬೇಡವೇ?’’

 ‘‘ನರೇಂದ್ರ ಮೋದಿಯವರು ಈ ದೇಶದ ಎಲ್ಲ ಎಲೆಗಳಿಗೆ ಕೇಸರಿ ಬಣ್ಣ ಬಳಿಯುವುದಕ್ಕಾಗಿಯೇ ಜನರ ಮೇಲೆ ವಿಶೇಷ ತೆರಿಗೆಯನ್ನು ಹಾಕಲಿದ್ದಾರೆ ಮತ್ತು ಆ ತೆರಿಗೆ ಹಾಕಿದ ದಿನವನ್ನು ‘ಕೇಸರಿ ದಿನ’ ಎಂದು ಕರೆದು ದೇಶದ ಜನರೆಲ್ಲ ಸಿಹಿಹಂಚಿ ಸಂಭ್ರಮಿಸಲಿದ್ದಾರೆ. ಗೋಮಾಂಸ ರಫ್ತನ್ನು ದುಪ್ಪಟ್ಟುಗೊಳಿಸಿ ಅದರಿಂದ ಬರುವ ಆದಾಯವನ್ನು ನರೇಂದ್ರ ಮೋದಿಯವರು ಕೇಸರಿ ಬಣ್ಣ ಆಮದು ಮಾಡಲು ಬಳಸಲಿದ್ದಾರೆ...’’

‘‘ಮೇಡಂ...ಈ ಮರಗಿಡಗಳ ಬಣ್ಣ ಹಸಿರು. ಇದು ಪ್ರಕೃತಿದತ್ತವಾ ದುದಲ್ಲವೇ?’’ ಕಾಸಿ ತಲೆತುರಿಸುತ್ತಾ ಕೇಳಿದ. ಈಗ ಕೆರಂದ್ಲಾಜೆ ಕೆರಳಿದರು.

‘‘ನೋಡ್ರೀ...ಇತಿಹಾಸವನ್ನು ತಿರುಚಿದ ಹಾಗೆಯೇ ಬಣ್ಣಗಳನ್ನು ತಿರುಚಲಾಗಿದೆ. ವೇದಗಳ ಕಾಲದಲ್ಲಿ ಎಲ್ಲ ಮರಗಿಡಗಳು ಕೇಸರಿ ಬಣ್ಣಗ ಳನ್ನು ಹೊಂದಿದ್ದವು. ಹುಲ್ಲು ಗರಿಗಳೂ ಕೇಸರಿಯಾಗಿದ್ದವು. ಇದನ್ನು ಉತ್ತರ ಪ್ರದೇಶದ ಎಲ್ಲ ಪಠ್ಯ ಪುಸ್ತಕಗಳಲ್ಲಿ ಸೇರ್ಪಡೆ ಮಾಡಲಾಗುತ್ತದೆ. ಮೊಗಲರು ಈ ದೇಶವನ್ನು ಆಕ್ರಮಿಸಿದ ಬಳಿಕ ಅವರು ವಿದೇಶಗಳಿಂದ ತಂದ ಹಸಿರು ಮರಗಿಡಗಳನ್ನು ಈ ದೇಶದ ಮೇಲೆ ಹೇರಿದರು. ಆದುದರಿಂದ, ಮರಗಿಡಗಳ ಬಣ್ಣವನ್ನು ಮರಳಿ ವೇದಗಳ ಕಾಲದ ಕೇಸರಿ ಬಣ್ಣಕ್ಕೆ ಮರಳಿಸಲು ಸಂಶೋಧನೆ ನಡೆಯುತ್ತಿದೆ. ಈಗಾಗಲೇ ಯೋಗಿ ಸರಕಾರ ಅದಕ್ಕಾಗಿ ಕೋಟ್ಯಂತರ ಹಣವನ್ನು ಮೀಸಲಿಸಿದೆ. ಪ್ರಕೃತಿ ಯಲ್ಲಿರುವ ಎಲ್ಲ ಹಸಿರು ಬಣ್ಣಗಳನ್ನು ಕೇಸರಿಯಾಗಿ ಮಾರ್ಪಡಿಸಲು ವಿಜ್ಞಾನಿಗಳು ಈಗಾಗಲೇ ಶ್ರಮಿಸುತ್ತಿದ್ದಾರೆ. ಒಂದು ವೇಳೆ ಅದರಲ್ಲಿ ಯಶಸ್ವಿ ಯಾದರೆ ಕೇಸರಿ ಬಣ್ಣ ಕ್ಕಾಗಿ ವೆಚ್ಚ ಮಾಡುವ ಕೋಟ್ಯಂತರ ಹಣ ಉಳಿ ಯುತ್ತದೆ. ಆ ಉಳಿದ ಹಣವನ್ನು ತಲಾ ಒಂದು ಲಕ್ಷದ ಹಾಗೆ ಉತ್ತರ ಪ್ರದೇಶದ ಎಲ್ಲರ ಅಕೌಂಟ್‌ಗಳಿಗೆ ಆದಿತ್ಯನಾಥರು ಹಾಕಲಿದ್ದಾರೆ....ಮುಂದಿನ ದಿನಗಳಲ್ಲಿ ಕರ್ನಾಟಕದ ಮರಗಿಡಗಳನ್ನು ಕೇಸರಿ ಮಾಡುವ ಕುರಿತಂತೆ ನಾವು ಚುನಾವಣಾ ಪ್ರಣಾಳಿಕೆಗಳಲ್ಲಿ ಭರವಸೆ ನೀಡಲಿದ್ದೇವೆ...’’

‘‘ಉತ್ತರ ಪ್ರದೇಶದಲ್ಲಿ ಆಮ್ಲಜನಕ ಸಿಲಿಂಡರ್ ಇಲ್ಲದೆ ನೂರಾರು ಮಕ್ಕಳು ಸಾಯುತ್ತಿದ್ದಾರೆ....ಅದರ ಬಗ್ಗೆ ಏನು ಹೇಳುತ್ತೀರಿ ಮೇಡಂ?’’

‘‘ನೋಡ್ರೀ... ಸತ್ತ ಎಲ್ಲಮಕ್ಕಳನ್ನು ಕೇಸರಿ ಬಟ್ಟೆಯಲ್ಲಿಯೇ ಸುತ್ತಿ ಅವರವರ ಪೋಷಕರಿಗೆ ಒಪ್ಪಿಸಲಾಗಿದೆ. ಆದರೆ ಈ ವಿಷಯವನ್ನು ಮುಚ್ಚಿಟ್ಟು ಬರೇ ಮಕ್ಕಳು ಸತ್ತಿರೋದನ್ನೇ ದೊಡ್ಡದು ಮಾಡಿ ಬಿಜೆಪಿಯ ಮುಖಕ್ಕೆ ಕಪ್ಪು ಬಣ್ಣ ಬಳಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯಾವ ಆಸ್ಪತ್ರೆಗಳಲ್ಲೂ ಆಮ್ಲಜನಕ ಸಿಲಿಂಡರ್ ಕೊರತೆಗಳು ಎದುರಾಗದ ಹಾಗೆ ಯೋಗಿ ಆದಿತ್ಯನಾಥರು ನೋಡಿಕೊಂಡಿದ್ದಾರೆ....’’

‘‘ಅಂದರೆ ಎಲ್ಲ ಆಸ್ಪತ್ರೆಗಳಿಗೂ ಸಿಲಿಂಡರ್ ಪೂರೈಸಿದ್ದಾರೆಯೇ?’’ ಕಾಸಿ ಆಸಕ್ತಿಯಿಂದ ಕೇಳಿದ.

‘‘ನೋಡ್ರೀ...ಈಗಾಗಲೇ ರೈತರು ಕಸಾಯಿಖಾನೆಗೆ ಮಾರಲಾಗದೆ ಗೋ ಆಶ್ರಮಕ್ಕೆ ಸೇರಿಸಲಾಗಿರುವ ಎಲ್ಲ ಗೋವುಗಳನ್ನು ಉತ್ತರಪ್ರದೇಶ ದ ಪ್ರತೀ ಒಂದು ಆಸ್ಪತ್ರೆಗಳಿಗೆ ವಿತರಿಸಲಾಗಿದೆ. ಗೋವು ಆಮ್ಲಜನಕವನ್ನು ಸೇವಿಸಿ ಆಮ್ಲಜನಕವನ್ನೇ ಹೊರ ಬಿಡುತ್ತಿರುವುದರಿಂದ ಗೋವು ತನ್ನ ಮೂಗಿನಿಂದ ಬಿಡುವ ಆಮ್ಲಜಕವನ್ನು ಸಂಗ್ರಹಿಸಿ ಅದನ್ನು ಆಸ್ಪತ್ರೆಗೆ ನೀಡುತ್ತಿದ್ದಾರೆ...ಇದನ್ನು ನಾವು ಕರ್ನಾಟಕದಲ್ಲೂ ಅಳವಡಿಸಲಿದ್ದೇವೆ. ಆಸ್ಪತ್ರೆಗಳಲ್ಲಿರುವ ಎಲ್ಲ ಸಿಲಿಂಡರ್‌ಗಳನ್ನು ತೆಗೆದು ಹಾಕಿ, ಅಲ್ಲಿಗೆ ಗೋ ವುಗಳನ್ನು ವಿತರಿಸಲಿದ್ದೇವೆ....’’ ಕೆರಂದ್ಲಾಜೆ ಕೈಯೆತ್ತಿ ಘೋಷಿಸಿದರು. ‘‘ಸಿದ್ದರಾಮಯ್ಯ ಅವರು ಈಗಾಗಲೇ ಬಡವರಿಗೆ ಅಕ್ಕಿ, ಊಟ ಕೊಟ್ಟು ಜನಪ್ರಿಯರಾಗಿದ್ದಾರೆ...ನೀವು ಚುನಾವಣೆಯಲ್ಲಿ ಗೆದ್ದರೆ...’’ ಕಾಸಿ ಮಾತನ್ನು ಅರ್ಧದಲ್ಲೇ ಕತ್ತರಿಸಿದ ಕೆರಂದ್ಲಾಜೆ...‘‘ನಾವು ಚುನಾವಣೆ ಯಲ್ಲಿ ಗೆದ್ದರೆ ಅವರ ಎಲ್ಲ ಭಾಗ್ಯ ಯೋಜನೆಗಳನ್ನು ಕಿತ್ತು ಹಾಕಿ ಇಡೀ ಕರ್ನಾ ಟಕಕ್ಕೆ ಒಂದು ಭಾಗ್ಯವನ್ನು ಒದಗಿಸಲಿದ್ದೇವೆ. ಅದೇ ಕೇಸರಿ ಭಾಗ್ಯ....’’

ಅದನ್ನು ಕೇಳಿದ್ದೇ ಕಾಸಿ ಕೆಸರಿಗೆ ಕಾಲಿಟ್ಟವನಂತೆ ಮುಖಕಿವುಚಿ, ಟೇಬಲ್‌ನ ಮೇಲಿರುವ ಕೇಸರಿ ಬಾತ್‌ನ ಕಡೆಗೆ ತಿರುಗಿಯೂ ನೋಡದೆ ಭರಭರನೆ ಹೊರಟ.

Writer - -ಚೇಳಯ್ಯ chelayya@gmail.com

contributor

Editor - -ಚೇಳಯ್ಯ chelayya@gmail.com

contributor

Similar News