ಅಭಿಷೇಕ್ ಚಿತ್ರದಲ್ಲಿ ನಟಿಸಲು ನಿರಾಕರಿಸಿದ ಐಶ್

Update: 2018-02-09 18:47 GMT

ಬಾಲಿವುಡ್‌ನ ಅತ್ಯಂತ ಜನಪ್ರಿಯ ತಾರಾದಂಪತಿ ಐಶ್ವರ್ಯಾ ರೈ ಹಾಗೂ ಅಭಿಷೇಕ್, ಎಂಟು ವರ್ಷಗಳ ಹಿಂದೆ ತೆರೆಕಂಡಿದ್ದ ‘ರಾವಣ್’ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಆನಂತರ, ಅವರಿಬ್ಬರೂ ಮತ್ತೊಮ್ಮೆ ಯಾವ ಚಿತ್ರದಲ್ಲೂ ಜೊತೆಯಾಗಿ ಕಾಣಿಸಿ ಕೊಂಡಿದ್ದಿಲ್ಲ. ಕಳೆದ ವರ್ಷ ಅಭಿ-ಐಶ್ ದಂಪತಿ, ಮತ್ತೊಮ್ಮೆ ಒಂದೇ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದರು. ಆದರೆ ಈಗ ಐಶ್ವರ್ಯಾ ಈ ಚಿತ್ರದಲ್ಲಿ ನಟಿಸಲು ನಿರಾಕರಿಸಿರುವುದು ಬಾಲಿವುಡ್‌ನಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಈ ಚಿತ್ರಕ್ಕಾಗಿ ನಿರ್ದೇಶಕ ಶೈಲೇಶ್ ಆರ್.ಸಿಂಗ್ ಜೊತೆ ಅಭಿ-ಐಶ್ ಮಾತುಕತೆಗಳನ್ನು ನಡೆಸಿದ್ದರು. ಅಭಿಷೇಕ್ ಬಚ್ಚನ್ ನಟಿಸಲು ಒಪ್ಪಿಕೊಂಡಿದ್ದ ರಾದರೂ, ಐಶ್‌ಗೆ ಚಿತ್ರಕಥೆ ಅಷ್ಟೊಂದು ಹಿಡಿಸದ ಕಾರಣ ಆಕೆ ಚಿತ್ರದಿಂದ ನಿರ್ಗಮಿಸಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.

ಇತ್ತೀಚಿನ ವರ್ಷಗಳಲ್ಲಿ ಐಶ್ವರ್ಯಾ ತನ್ನ ಪಾತ್ರಗಳ ಬಗ್ಗೆ ತುಂಬಾ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಸ್ಕ್ರಿಪ್ಟ್ ನಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡುವಂತೆ ಶೈಲೇಶ್‌ಸಿಂಗ್‌ಗೆ ಆಕೆ ಸೂಚಿಸಿದ್ದರೂ, ಅವರದಕ್ಕೆ ಒಪ್ಪಿಕೊಳ್ಳಲಿಲ್ಲವೆನ್ನಲಾಗಿದೆ. ಸಂಭಾವನೆ ವಿಚಾರವಾಗಿಯೂ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಐಶ್ವರ್ಯಾ ಚಿತ್ರದಿಂದ ಹೊರಬಂದಿರುವ ಸಾಧ್ಯತೆಯೂ ಇದೆಯೆನ್ನಲಾಗಿದೆ. ಐಶ್ವರ್ಯ ನಿರ್ಗಮನದ ಬೆನ್ನಲ್ಲೇ ನಿರ್ದೇಶಕರು ಚಿತ್ರಕ್ಕಾಗಿ ಬೇರೊಬ್ಬ ನಾಯಕಿಯ ತಲಾಶ್‌ನಲ್ಲಿ ತೊಡಗಿದ್ದಾರೆ. ಹೀಗಾಗಿ ಚಿತ್ರದ ನಿರ್ಮಾಣವು ಕೆಲವು ಸಮಯದ ಮಟ್ಟಿಗೆ ಮುಂದೂಡಲ್ಪಟ್ಟಿದೆ.

ಹೀಗಾಗಿ ಅಭಿಷೇಕ್ ಹಾಗೂ ಐಶ್ವರ್ಯಾ ಅವರನ್ನು ಮತ್ತೊಮ್ಮೆ ಒಂದೇ ಪರದೆಯಲ್ಲಿ ಕಾಣಬೇಕೆಂಬ ಅಭಿಮಾನಿಗಳ ಹಂಬಲ ಸದ್ಯಕ್ಕೆ ಈಡೇರುವ ಸಾಧ್ಯತೆ ಕಂಡುಬರುತ್ತಿಲ್ಲ.

ಈ ನಡುವೆ ಐಶ್ವರ್ಯಾ ರೈ, 70ರ ದಶಕದ ಜನಪ್ರಿಯ ಚಿತ್ರ ‘ರಾತ್ ಔರ್ ದಿನ್’ನ ಬಾಲಿವುಡ್ ರಿಮೇಕ್‌ನಲ್ಲಿ ನಟಿಸಲು ಗ್ರೀನ್‌ಸಿಗ್ನಲ್ ಕೊಟ್ಟಿದ್ದಾರೆ. ಅಭಿಷೇಕ್ ಕೂಡಾ ಬೇರೆ ಕೆಲವು ಚಿತ್ರಗಳಲ್ಲಿ ನಟಿಸಲು ಕಾಲ್‌ಶೀಟ್ ನೀಡಿದ್ದಾರೆ. ಸದ್ಯ ಅಭಿಷೇಕ್ ಬಚ್ಚನ್ ಅನುರಾಗ್ ಕಶ್ಯಪ್ ನಿರ್ದೇಶನದ ‘ಮಾನ್‌ಮಾರ್ಜಿ ಯಾನ್’ನಲ್ಲಿ ನಟಿಸುತ್ತಿದ್ದು, ತಾಪ್ಸಿ ಪನ್ನೂ ಹಾಗೂ ವಿಕಿ ಕೌಶಲ್ ಮುಖ್ಯಪಾತ್ರಗಳಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News