ಪ್ರೇಮ ಬರಹ: ಯುದ್ಧ ಬದಲಿಸಿತು ಹಣೆಯ ಬರಹ!

Update: 2018-02-10 18:48 GMT

ಅರ್ಜುನ್ ಸರ್ಜಾ ನಿರ್ದೇಶಕ ಮತ್ತು ತಂದೆಯಾಗಿ ಕಂಡ ಕನಸು ’ಪ್ರೇಮಬರಹ’ ಚಿತ್ರ. ಎರಡೂ ವಿಭಾಗಗಳಲ್ಲಿ ಅವರಿಗೆ ಒಂದು ಹಂತದ ಗೆಲುವು ನೀಡಬಲ್ಲ ಚಿತ್ರ ಇದು. ಎರಡು ಟಿ.ವಿ ವಾಹಿನಿಗಳ ವರದಿಗಾರರ ನಡುವೆ ಉಂಟಾಗುವ ಸ್ನೇಹ ಮತ್ತು ಪ್ರೇಮವನ್ನು ಯುದ್ಧದ ಹಿನ್ನೆಲೆಯಲ್ಲಿ ಹೇಳಲಾಗಿದೆ.

1999ರ ಕಾರ್ಗಿಲ್ ಯುದ್ಧದ ಟಿ.ವಿ ಕವರೇಜ್‌ಗಾಗಿ ಬೇರೆ ಬೇರೆ ವಾಹಿನಿಗಳಿಂದ ಹೊರಡುವ ವರದಿಗಾರರು ಸಂಜಯ್ ಮತ್ತು ಮಧು. ಆದರೆ ಅವರೊಂದಿಗೆ ಇರುವ ಛಾಯಾಗ್ರಾಹಕರು ಅರ್ಧದಲ್ಲೇ ಕೈ ಕೊಡುವ ಕಾರಣ, ತಾವೇ ಪರಸ್ಪರ ಹೊಂದಿಕೊಂಡು ಕೆಲಸ ಶುರು ಮಾಡುತ್ತಾರೆ. ಸೈನಿಕರ ಸಾವು ನೋವು ಬದುಕನ್ನು ಹತ್ತಿರದಿಂದ ನೋಡುವ ಇವರಿಬ್ಬರು ಪರಸ್ಪರ ಹೆಚ್ಚು ಅರ್ಥಮಾಡಿಕೊಳ್ಳತೊಡಗುತ್ತಾರೆ. ಅದು ಪ್ರೀತಿಯೆಂಬ ಅರಿವು ಇಬ್ಬರಿಗೂ ಮೂಡುತ್ತದೆ. ಆದರೆ ಮಧುಗೆ ಈಗಾಗಲೇ ಬೇರೊಬ್ಬನ ಜೊತೆಗೆ ನಿಶ್ಚಿತಾರ್ಥ ನಡೆದಿರುತ್ತದೆ. ಹಾಗಾಗಿ ತಮ್ಮ ಜೋಡಿ ಒಂದಾಗುವ ಸಾಧ್ಯತೆ ಇಲ್ಲವೆಂಬ ಅರಿವು ಅವರಿಗೆ ಮೂಡಿರುತ್ತದೆ. ಆದರೆ ಕ್ಲೈಮ್ಯಾಕ್ಸ್ ನಲ್ಲಿ ನಡೆಯುವ ತಿರುವುಗಳೇನು? ಆಮೇಲೆ ಅವರಿಬ್ಬರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದೇ ಚಿತ್ರದ ಪ್ರಮುಖ ಅಂಶ.

 ಚಿತ್ರದಲ್ಲಿ ಸಂಜಯ್ ಮತ್ತು ಮಧು ಪಾತ್ರದಲ್ಲಿ ಚಂದನ್ ಮತ್ತು ಐಶ್ವರ್ಯಾ ನಟಿಸಿದ್ದಾರೆ. ಅರ್ಜುನ್ ತಮ್ಮ ಮಗಳಿಗಾಗಿ ಮಾಡಿರುವ ಚಿತ್ರವಾದರೂ, ನಾಯಕನಾಗಿ ಚಂದನ್‌ಗೆ ಉತ್ತಮ ಅವಕಾಶವನ್ನು ನೀಡಿರುವ ಚಿತ್ರ ಇದು. ಚೆಲುವಿನೊಂದಿಗೆ ನಟನೆಯಲ್ಲಿಯೂ ಅವರು ಚೆನ್ನಾಗಿ ಗುರುತಿಸಿಕೊಂಡಿದ್ದಾರೆ. ಐಶ್ವರ್ಯಾ ಸ್ವತಃ ಸಂಭಾಷಣೆ ಹೇಳಿರುವ ರೀತಿ ಮತ್ತು ಕಣ್ಣೋಟದಲ್ಲೇ ಗಮನ ಸೆಳೆಯುತ್ತಾರೆ. ಆದರೆ ಅವರ ವಿಶಾಲವಾದ ಕಣ್ಣನ್ನು ಹೆಚ್ಚಿನ ಸನ್ನಿವೇಶಗಳಲ್ಲಿ ಕಣ್ಣೀರಿನೊಂದಿಗೆ ತೋರಿಸಿರು ವುದು ವಿಪರ್ಯಾಸ. ಆದರೆ ಮಗಳೇ ನಾಯಕಿಯಾಗಿದ್ದರೂ ಕೂಡ ಹಾಡುಗಳಲ್ಲಿ ಪ್ರೇಕ್ಷಕರ ಕಣ್ಣಿಗೆ ಒಬ್ಬ ಗ್ಲಾಮರಸ್ ನಾಯಕಿಯನ್ನು ನೀಡುವಲ್ಲಿ ಅರ್ಜುನ್ ಸರ್ಜಾ ಹಿಂಜರಿದಿಲ್ಲ. ಯುದ್ಧ ಮತ್ತು ಪ್ರೀತಿ ಎರಡೂ ವಿರುದ್ಧ ಸಂದರ್ಭದ ಪದಗಳಾದರೂ, ಅವೆರಡೂ ಒಂದಕ್ಕೊಂದು ಸಂಬಂಧವಿರಿಸಿದವುಗಳೇ ಆಗಿವೆ. ಮಾತ್ರವಲ್ಲ, ನಮ್ಮ ದೇಶದ ಸೈನಿಕರನ್ನು ಪ್ರತಿಯೊಬ್ಬ ದೇಶವಾಸಿಗಳು ಕೂಡ ನಮ್ಮ ಸಂಬಂಧಿಕರಷ್ಟೇ ಪ್ರೀತಿ ಅಭಿಮಾನದಿಂದ ಗೌರವಿಸುತ್ತೇವೆ. ಆದರೆ ಅಂಥದೊಂದು ನಂಬಿಕೆ ಬಿಟ್ಟರೆ ಚಿತ್ರವು ಯಾವುದೇ ಸೈನಿಕನನ್ನು, ಆತನ ಸಾವನ್ನು ಹೃದಯಕ್ಕೆ ಹತ್ತಿರಗೊಳಿಸುವ ಸಂದರ್ಭವನ್ನು ಸೃಷ್ಟಿಸು ವುದಿಲ್ಲ. ಮಾತ್ರವಲ್ಲ, ಸೈನಿಕನ ರಕ್ಷಣೆಗೆ ಟಿ.ವಿ ರಿಪೋರ್ಟರ್ ನುಗ್ಗುವುದು, ಮರಣ ಶಯ್ಯೆಯಲ್ಲಿರುವ ಸೈನಿಕನೊಂದಿಗೆ ನಾಯಕಿ ಸಂಭಾಷಣೆಗಿಳಿಯುವುದು ಬಿಲ್ಡಪ್ ನೀಡುವಂಥ ಸಿನಿಮೀಯ ದೃಶ್ಯಗಳಾಗಿ ಉಳಿಯುವುದೇ ಹೊರತು, ಮನಸ್ಸಿಗೆ ತಾಕುವುದಿಲ್ಲ. ಸೇನೆಯ ಪ್ರೊಟೋಕಾಲ್ಸ್ ಬಗ್ಗೆ ನಿರ್ದೇಶಕರು ಜಾಣ ಮರೆವು ತೋರಿಸಿದಂತಿದೆ. 1999ರ ಕಾಲಕ್ಕೆ ತಕ್ಕಹಾಗೆ ಮೊಬೈಲ್ ಫೋನ್ ಬಳಸಿಲ್ಲ ಎಂಬುದನ್ನು ಹೊರತುಪಡಿಸಿ ಅಂದಿನ ಬೇರೆ ಯಾವುದೇ ಟ್ರೆಂಡ್ ಅಥವಾ ಶೈಲಿಯನ್ನು ಅನುಕರಿಸಲಾಗಿಲ್ಲ. ನಾಯಕಿಯ ತಾಯಿಯಂಥ ಪಾತ್ರದಲ್ಲಿ ಸುಹಾಸಿನಿ ತಮ್ಮ ಎಂದಿನ ಶೈಲಿಯ ನಟನೆ ನೀಡಿದ್ದಾರೆ. ತಾತನಾಗಿ ತೆಲುಗಿನ ಹಿರಿಯ ನಿರ್ದೇಶಕ ಕೆ. ವಿಶ್ವನಾಥ್ ಅಭಿನಯಿಸಿರುವುದು ವಿಶೇಷ. ಒಂದೇ ದೃಶ್ಯದಲ್ಲಿ ಕಾಣಿಸಿಕೊಂಡರೂ ಕೂಡ, ಪ್ರಕಾಶ್ ರೈ ತೀರಿಹೋದ ಸೈನಿಕನ ತಂದೆಯಾಗಿ ಪ್ರೇಕ್ಷಕರನ್ನು ಸೆಳೆದು ಬಿಡುವಲ್ಲಿ ಯಶಸ್ವಿಯಾಗುತ್ತಾರೆ. ರುಚಿಗೆ ತಕ್ಕಷ್ಟು ಸಾಧು ಕೋಕಿಲ ಮತ್ತು ಕುರಿ ಪ್ರತಾಪ್ ಅವರ ಹಾಸ್ಯಮಿಶ್ರಣವಿದೆ. ಸಾಧು ಕೋಕಿಲ ಹಿನ್ನೆಲೆ ಸಂಗೀತ ಆಕರ್ಷಕವಾಗಿದೆ. ಜಸ್ಸಿಗಿಫ್ಟ್ ಹಾಡುಗಳು ಮಾಧುರ್ಯವಾಗಿದ್ದರೂ ಕೂಡ, ಹಂಸಲೇಖಾ ಸಂಯೋಜಿಸಿದ್ದ ಪ್ರೇಮಬರಹ ಗೀತೆಯೇ ಕೊನೆಯವರೆಗೆ ನೆನಪಲ್ಲಿ ಉಳಿಯುತ್ತದೆ. ದರ್ಶನ್ ಜೊತೆಗೆ ಚಿರು, ಧ್ರುವ ಸಹೋದರರು ಹಾಡಲ್ಲಿ ಬಂದು ಹೋಗುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರದ ಮೂಲಕ ಕನ್ನಡಕ್ಕೆ ಒಬ್ಬರು ಭರವಸೆಯ ನಟಿ ದೊರಕಿದ್ದಾರೆಂದು ಧೈರ್ಯವಾಗಿ ಹೇಳಬಹುದು.

ತಾರಾಗಣ: ಐಶ್ವರ್ಯಾ ಅರ್ಜುನ್, ಚಂದನ್

ನಿರ್ದೇಶಕ: ಅರ್ಜುನ್ ಸರ್ಜಾ

ನಿರ್ಮಾಪಕ: ನಿವೇದಿತಾ ಅರ್ಜುನ್

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News