ಸರಕಾರದ ವಿರುದ್ಧ ಪಿತೂರಿ: ಮಾಲ್ದೀವ್ಸ್ ಅಧಿಕಾರಿಗಳ ಆರೋಪ
Update: 2018-02-12 17:24 GMT
ಮಾಲೆ (ಮಾಲ್ದೀವ್ಸ್), ಫೆ. 12: ಮಾಲ್ದೀವ್ಸ್ ಸರಕಾರವನ್ನು ಕಿತ್ತೊಗೆಯಲು ಇಬ್ಬರು ಬಂಧಿತ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮತ್ತು ಓರ್ವ ಮಾಜಿ ಅಧ್ಯಕ್ಷ ಪಿತೂರಿ ನಡೆಸಿದ್ದರು ಎಂದು ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರದ ಅಧಿಕಾರಿಗಳು ಆರೋಪಿಸಿದ್ದಾರೆ.
ಕಳೆದ ವಾರ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಬಳಿಕ ನಡೆಸಲಾದ ಶೋಧ ಕಾರ್ಯಾಚರಣೆಯಲ್ಲಿ 2 ಲಕ್ಷ ಡಾಲರ್ಗೂ ಅಧಿಕ ಸಂಶಯಾಸ್ಪದ ಹಣವನ್ನು ಪತ್ತೆಹಚ್ಚಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಆದರೆ, ಇದಕ್ಕೆ ಕ್ಷಿಪ್ರ ಪ್ರತಿಕ್ರಿಯೆ ನೀಡಿರುವ ವಕೀಲರು ಮತ್ತು ಪ್ರತಿಪಕ್ಷ ನಾಯಕರು, ಈ ಆರೋಪವನ್ನು ತಳ್ಳಿಹಾಕಿದ್ದಾರೆ ಹಾಗೂ ಅಧ್ಯಕ್ಷ ಅಬ್ದುಲ್ಲಾ ಯಮೀನ್ ತನ್ನ ರಾಜಕೀಯ ಎದುರಾಳಿಗಳನ್ನು ದುರ್ಬಲಗೊಳಿಸಲು ತುರ್ತು ಪರಿಸ್ಥಿತಿಯನ್ನು ಬಳಸುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.